ವಿಧಾನಸಭೆ ಚುನಾವಣೆ; ಸಿದ್ದರಾಮಯ್ಯನವರಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ: ಬಸವರಾಜ ಬೊಮ್ಮಾಯಿ
ಬಳ್ಳಾರಿ, ಜನವರಿ 4: ಸಿದ್ದರಾಮಯ್ಯ ಹೇಳಿಕೆಗೆ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಸವರಾಜ ಬೊಮ್ಮಾಯಿ, ನರೇಂದ್ರ ಮೋದಿ ಮುಂದೆ ನೀವು ನಾಯಿ ಮರಿ ತರ ಇರ್ತೀರಿ, ಮೋದಿ ಕಂಡರೆ ಗಡಗಡ ಅಂತೀರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಳ್ಳಾರಿಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಸಿದ್ದರಾಮಯ್ಯ ಅವರ ವ್ಯಕ್ತಿತ್ವ ತೋರಿಸುತ್ತದೆ. ನಾಯಿ ನಿಯತ್ತಿನ ಪ್ರಾಣಿ. ಜನರಿಗೆ ನಿಯತ್ತಾಗಿ ಕೆಲಸ ಮಾಡುತ್ತಿರುವೆ. ನಿಯತ್ತನ್ನ ಜನರ ಪರವಾಗಿ ಉಳಿಸಿಕೊಂಡು ಹೋಗುವೆ ಎಂದರು.
ರಾಜಕೀಯವಾಗಿ ಹೇಳಿಕೆ ಸಲ್ಲದು
ಕಾಂಗ್ರೆಸ್ ಅವರ ಹಾಗೆ ಸಮಾಜ ಒಡೆಯುವ ಕೆಲಸ ಮಾಡುವುದಿಲ್ಲ. ಸೌಭಾಗ್ಯ ಕೊಡುತ್ತೇವೆ ಎಂದು ಹೇಳಿ ದೌರ್ಭಾಗ್ಯ ನೀಡಿಲ್ಲ . ಈ ರೀತಿಯ ಕೆಲಸ ನಾವು ಮಾಡಿಲ್ಲ ಎಂದರು. ಬಹಿರಂಗ ಚರ್ಚೆಗೆ ಸಿದ್ದರಾಮಯ್ಯ ಆಹ್ವಾನ ನೀಡಿರುವ ಹಿನ್ನಲೆಯಲ್ಲಿ ಮಾತನಾಡಿ ವಿಧಾನಸಭೆಗಿಂತ ದೊಡ್ಡ ವೇದಿಕೆ ಯಾವುದೂ ಇಲ್ಲ. 15 ದಿನಗಳ ಕಾಲ ಸದನ ನಡೆಯಿತು. ಅದಕ್ಕಿಂತಲೂ ಹಿಂದೆಯೂ ನಡೆದಿದೆ. ವೇದಿಕೆ ಇದ್ದಾಗ ಚರ್ಚೆ ಮಾಡದೆ, ಹೊರಗೆ ರಾಜಕೀಯವಾಗಿ ಹೇಳಿಕೆ ನೀಡುತ್ತಾರೆ. ಜನವರಿ ಫೆಬ್ರವರಿಯಲ್ಲಿ ಪುನಃ ಅಧಿವೇಶನ ನಡೆಯಲಿದ್ದು, ಚರ್ಚೆ ಮಾಡೋಣ. ವಿಧಾನಮಂಡಲಕ್ಕಿಂತ ಪವಿತ್ರ ವೇದಿಕೆ ಎಲ್ಲಿದೆ ಎಂದರು.

ಸಿದ್ದರಾಮಯ್ಯ ಹಿಂದೆ ಅತ್ಯಂತ ಸಭ್ಯ ಪ್ರಧಾನಿ ಮನಮೋಹನ ಸಿಂಗ್ ಎದುರಿಗೆ ಹೆದರಿಕೊಂಡು ಹೋಗಲೇ ಇಲ್ಲ. ರಾಜ್ಯಕ್ಕೆ ನಯಾಪೈಸೆ ತರಲು ಆಗಲಿಲ್ಲ. ಬಹಳ ರಾಜ್ಯಕ್ಕೆ ಅವರು ಕೊಡುಗೆ ಏನೂ ಇಲ್ಲ ಎಂದು ಕಿಡಿಕಾರಿದರು.
ಮೋದಿಯವರು ಪ್ರಧನಾನಿಯಾದ ನಂತರ ವಿಶೇಷ ವಾದ ಕೊಡುಗೆಗಳನ್ನು ನೀಡಿದ್ದಾರೆ. ನರೇಂದ್ರ ಮೋದಿಯವರು ರಾಜ್ಯಕ್ಕೆ 6 ಸಾವಿರ ಕಿ.ಮೀ ಹೆದ್ದಾರಿ ಕೊಡುಗೆ ನೀಡಿದ್ದಾರೆ. ಸ್ವತಂತ್ರ ಬಂದ ನಂತರ ಒಂದು ರಾಜ್ಯಕ್ಕೆ ಇಷ್ಟು ದೊಡ್ಡ ಕೊಡುಗೆ ಬಂದಿರುವುದು ಒಂದು ದಾಖಲೆ. ಬೆಂಗಳೂರು ಮೈಸೂರು ಹೆದ್ದಾರಿ ಯೋಜನೆ, ಮಂಗಳೂರು ಕಾರವಾರ ಬಂದರು, ಕಳಸಾ ಬಂಡೂರಿ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಬರುವ ದಿನಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ, ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಅನುದಾನ ನೀಡಲಿದ್ದಾರೆ. ಎಲ್ಲಾ ಮಹಾನಗರಗಳಿಗೆ ಸ್ಮಾರ್ಟ್ ಸಿಟಿ ಯೋಜನೆ ನೀಡಿದ್ದಾರೆ. ಇವರ ಕಾಲದಲ್ಲಿ ಇರಲಿಲ್ಲ. ಇಂಥ ಮಹತ್ವವನ್ನು ಯೋಜನೆಗಳನ್ನು ಪ್ರಧಾನಿ ಮೋದಿಯವರು ನೀಡಿದ್ದಾರೆ. ಮೋದಿ ಕೊಡುವ ಕಾಮಧೇನು
ಅವರಿಗೆ ಅದರ ಬಗ್ಗೆ ಜ್ಞಾನ ಇಲ್ಲ ಎಂದು ಹೇಳಿದರು.
ರಾಜಕೀಯ ಪ್ರೇರಿತ ಹೇಳಿಕೆಗಳನ್ನ ಕೊಡುವುದು ಸಿದ್ದರಾಮಯ್ಯ ರೂಡಿ ಮಾಡಿಕೊಂಡಿದ್ದಾರೆ ತಳಬುಡ ಇಲ್ಲದ ಹೇಳಿಕೆಗಳನ್ನು ನೀಡುತ್ತಾರೆ ಎಂದರು.
ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಂದಾಲ್ ಸಹಯೋಗದೊಂದಿಗೆ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಭೂಮಿಪೂಜೆ ನೆರವೇರಿಸಿದರು. ಸಚಿವ ಬಿ.ಶ್ರೀ ರಾಮುಲು, ಶಾಸಕರಾದ ಬಿ.ನಾಗೇಂದ್ರ, ಸೋಮಶೇಖರೆಡ್ಡಿ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಲಘುವಾಗಿ ಮಾತಾಡೋದು ಕಾಂಗ್ರೆಸ್ ಸಂಸ್ಕ್ರತಿ : ಶ್ರೀರಾಮುಲು
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಇದೀಗ ವಿಪಕ್ಷ ನಾಯಕ ಆಗಿದ್ದಾರೆ. ಸಿಎಂ ಸ್ಥಾನದ ವ್ಯಕ್ತಿಯನ್ನ ನಾಯಿಗೆ ಹೋಲಿಕೆ ಮಾಡುವುದು ಎಷ್ಟು ಸರಿ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಲಘುವಾಗಿ ಮಾತಾಡೋದು ಕಾಂಗ್ರೆಸ್ ಸಂಸ್ಕ್ರತಿಯನ್ನ ತೋರಿಸುತ್ತದೆ. ಸಿದ್ದರಾಮಯ್ಯ ಸೋನಿಯಾ ಗಾಂಧಿ ಮನೆಯಲ್ಲಿ ಇಲಿ, ಬೆಕ್ಕು ಆಗ್ತಿರಾ ಅಂತಾ ನಾನು ಹೇಳಬಹದು. ಸಿಎಂ ಬಗ್ಗೆ ಲಘುವಾಗಿ ಮಾತಾಡೋದು ಸರಿಯಲ್ಲ.ಮುಖ್ಯಮಂತ್ರಿ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಸಿದ್ದರಾಮಯ್ಯ ಕ್ಷಮೆ ಕೇಳಬೇಕು. ವಿರೋಧ ಪಕ್ಷದ ನಾಯಕರಾಗಿ ಲಘುವಾಗಿ ಮಾತಾಡೋದು ಅವರ ಸಂಸ್ಕತಿ ತೋರಿಸುತ್ತದೆ. ನರೇಂದ್ರ ಮೋದಿ ಅವರ ಮುಂದೆ ಸಿಎಂ ಧೈರ್ಯವಾಗಿ ಮಾತಾಡ್ತಾರೆ ಎಂದರು.
ಮುಖ್ಯಮಂತ್ರಿ ಸ್ಥಾನಕ್ಕೆ ಅಗೌರವ ತೋರಿದವರು ಕ್ಷೇಮೆ ಕೇಳಬೇಕು. ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿಯಿಂದ ತೀವ್ರವಾಗಿ ಖಂಡನೆ ಮಾಡುತ್ತದೆ, ಸೋನಿಯಾ ಗಾಂಧಿ ಅವರ ಮುಂದೆ ಸಿದ್ದರಾಮಯ್ಯ ತುಟಿ ಬಿಚ್ಚಲ್ಲ. ನಮ್ಮ ಮುಖ್ಯಮಂತ್ರಿಗಳು ಪ್ರಧಾನಿ ಮುಂದೆ ಎಲ್ಲವನ್ನೂ ಮಾತನಾಡುತ್ತಾರೆ , ಈ ವಿಚಾರವಾಗಿ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಶ್ರೀರಾಮುಲು ಆಗ್ರಹಿಸಿದರು.












Click it and Unblock the Notifications