ನಮ್ಮ ಕೈ ತಪ್ಪಿದ್ದು ಪಂಜಾಬ್ ಒಂದೇ, ಅಲ್ಲೇನು ಬಿಜೆಪಿ ಬಂದಿದೆಯೇ?: ಸಿದ್ದರಾಮಯ್ಯ
ಬೆಂಗಳೂರು, ಮಾ.10: 'ನಮಗೆ ಕೈತಪ್ಪಿದ್ದು ಪಂಜಾಬ್ ರಾಜ್ಯ ಒಂದೇ. ಅಲ್ಲಿ ಏನು ಬಿಜೆಪಿ ಅಧಿಕಾರಕ್ಕೆ ಬಂದಿದಯೇ? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಚುನಾವಣೆ ನಡೆದ ರಾಜ್ಯಗಳ ಪೈಕಿ ಪಂಜಾಬ್ನಲ್ಲಿ ಒಂದೇ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಉಳಿದಂತೆ ಬಿಜೆಪಿಯೆ ಎಲ್ಲಾ ಕಡೆ ಅಧಿಕಾರದಲ್ಲಿತ್ತು. ನಮ್ಮ ಕೈ ತಪ್ಪಿದ್ದು ಪಂಜಾಬ್ ಮಾತ್ರ. ಅಲ್ಲಿ ಏನೂ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಇದರಲ್ಲಿ ಬಿಜೆಪಿ ಜಂಭ ಕೊಚ್ಚಿಕೊಳ್ಳುವಂತಹದ್ದು ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಪಂಚರಾಜ್ಯ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, 'ನಮ್ಮ ತಪ್ಪಿನಿಂದಾಗಿ ಪಂಜಾಬ್ ಕಳೆದುಕೊಂಡಿದ್ದೇವೆ. ಆದರೆ, ಚುನಾವಣೆಗಿಂತ ಮುಂಚೆಯೇ ಅಲ್ಲಿಯೇನೂ ಬಹಳ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಹೀಗಾಗಿ ನಮ್ಮ ಸೋಲು ಪಂಜಾಬ್ ಮಾತ್ರ' ಎಂದು ಹೇಳಿದರು.

ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಈ ಮೊದಲೂ ಬಿಜೆಪಿಯೇ ಅಧಿಕಾರದಲ್ಲಿತ್ತು. ಈಗ ಅಲ್ಲಿ ಮತ್ತೆ ಜನ ಅದೇ ಪಕ್ಷವನ್ನು ಬೆಂಬಲಿಸಿದ್ದಾರೆ. ಇದರಲ್ಲಿ ಸಂಭ್ರಮಪಡುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದರು.
ಗೋವಾ ಮತ್ತು ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ನಿರೀಕ್ಷೆ ಇತ್ತು. ಆದರೆ, ನಮ್ಮ ನಿರೀಕ್ಷೆ ಹುಸಿಯಾಗಿದೆ. ಇದಕ್ಕೆ ಕಾರಣ ಏನು ಮತ್ತು ಮುಂದಿನ ದಿನಗಳಲ್ಲಿ ಅಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳುತ್ತೇವೆ ಬಿಜೆಪಿಯ ಕೋಮುವಾದದ ರಾಜಕಾರಣ ಉತ್ತರಪ್ರದೇಶದಲ್ಲಿ ಯಶಸ್ವಿಯಾಗಿದೆ ಎನ್ನುವುದು ಈ ಫಲಿತಾಂಶದಲ್ಲಿ ಸ್ಪಷ್ಟವಾಗುತ್ತಿದೆ. ಇದು ಬಹಳ ಕಳವಳಕಾರಿ ಬೆಳವಣಿಗೆ.
ಕಾಂಗ್ರೆಸ್ ಸಂವಿಧಾನದ ಆಶಯಗಳನ್ನು ಸಿದ್ಧಾಂತವಾಗಿ ನಂಬಿರುವ ಪಕ್ಷ. ಈ ಸಿದ್ಧಾಂತದ ಆಧಾರದಲ್ಲಿಯೇ ಪಕ್ಷವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತೇವೆ.
ಪ್ರತಿಯೊಂದು ರಾಜ್ಯದ ರಾಜಕಾರಣ ಮತ್ತೊಂದು ರಾಜ್ಯದ ರಾಜಕಾರಣಕ್ಕಿಂತ ಭಿನ್ನವಾಗಿರುತ್ತದೆ. ಉದಾಹರಣೆಗೆ ಉತ್ತರಪ್ರದೇಶದಲ್ಲಿ ನಮ್ಮ ಪಕ್ಷದ ಸಂಘಟನೆ ಸ್ವಲ್ಪ ದುರ್ಬಲವಾಗಿದೆ. ಅಲ್ಲಿ ಜನತೆಯ ಬೆಂಬಲ ಇದೆ.ಆ ಬೆಂಬಲವನ್ನು ಮತಗಳನ್ನಾಗಿ ಪರಿವರ್ತಿಸುವ ಸಂಘಟನೆ ಕೊರತೆ ಇದೆ.ಅದನ್ನು ಸರಿಪಡಿಸಬೇಕು.
ಕರ್ನಾಟಕದಲ್ಲಿ ನಮಗೆ ಜನರ ಬೆಂಬಲವೂ ಇದೆ.ಅದನ್ನು ಮತಗಳನ್ನಾಗಿ ಪರಿವರ್ತಿಸುವ ಪಕ್ಷದ ಸಂಘಟನೆಯೂ ಬಲವಾಗಿದೆ.
ನಮ್ಮ ಹಿಂದಿನ ಸರ್ಕಾರ ದ ಸಾಧನೆ ಕೂಡಾ ಜನರ ಮುಂದಿದೆ. ಆದ್ದರಿಂದ ಐದು ರಾಜ್ಯಗಳ ಚುನಾವಣೆ ನಮ್ಮ ರಾಜ್ಯದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.












Click it and Unblock the Notifications