Siddaramaiah Vs Sudhakar : ಸುಧಾಕರ್ ಒಬ್ಬ ಪೆದ್ದ ಮತ್ತು ಸುಳ್ಳ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ಆರೋಫ ಮಾಡಿರುವ ಸಚಿವ ಸುಧಾಕರ್ ಮೇಲೆ ಮತ್ತೆ ಸಿದ್ದರಾಮಯ್ಯ ಮುಗಿಬಿದ್ದಿದ್ದಾರೆ. ಸುಧಾಕರ್ ಒಬ್ಬ ಪೆದ್ದ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದು ಏಕೆ ಎಂದು ಮುಂದೆ ಓದಿ...
ಬೆಂಗಳೂರು, ಜನವರಿ. 25: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ಪರಸ್ಪರ ಕೆಸರೆರಚಾಟ ಜಾರಿಯಾಗುತ್ತದೆ. ಆದರೆ, ಈ ಬಾರಿ ಮಾತ್ರ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ಸುಧಾಕರ್ ನಡುವಿನ ಕಿತ್ತಾಟ ಬಲು ಜೋರಾಗಿದೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಚಿವ ಸುಧಾಕರ್ ಭ್ರಷ್ಟಾಚಾರ ಆರೋಪ ಮಾಡಿದ್ದರು. ಆಗಿನಿಂದಲೂ ಇಬ್ಬರ ನಡುವೆ ಕೆಸರೆರಚಾಟ ನಡೆಯುತ್ತಿದೆ. ಬುಧವಾರವೂ ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ "ರಿಕನ್ಸಿಲೇಶನ್ಗೂ, ಅವ್ಯವಹಾರಕ್ಕೂ ವ್ಯತ್ಯಾಸ ಗೊತ್ತಿಲ್ಲದ ಸುಧಾಕರ್ ಒಬ್ಬ ಪೆದ್ದ ಮತ್ತು ಸುಳ್ಳ" ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ, ಜೆಡಿಎಸ್ ತಂತ್ರ, ಕುರುಬ ಸಂಘದ ಭಿನ್ನಾಭಿಪ್ರಾಯ ಮೀರಿ ಸಿದ್ದರಾಮಯ್ಯಗೆ ಕೋಲಾರದಲ್ಲಿ ಗೆಲುವು ದಕ್ಕುವುದೇ?
"ಸಿಎಜಿ ವರದಿಯನ್ನು ಓದಿ ಅರ್ಥ ಮಾಡಿಕೊಳ್ಳಲಾಗದ ಶಾಸಕ ಡಾ. ಕೆ.ಸುಧಾಕರ್ ಒಬ್ಬ ಪೆದ್ದ ಮತ್ತು ಸುಳ್ಳ. ಸರ್ಕಾರದ ಹಣಕಾಸು ವ್ಯವಹಾರದಲ್ಲಿ ಸಮನ್ವಯ ಮತ್ತು ಅವ್ಯವಹಾರದ ನಡುವಿನ ವ್ಯತ್ಯಾಸ ಗೊತ್ತಿಲ್ಲದ ಪೆದ್ದರೆಲ್ಲ ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವುದು ರಾಜ್ಯದ ದುರಂತ" ಎಂದಿದ್ದಾರೆ.
ಎಲ್ಲ ಸರ್ಕಾರದ ಕಾಲದ ಸಿಎಜಿ ವರದಿಗಳಲ್ಲಿ ತಾಳೆಯಾಗದ ಲೆಕ್ಕ ಇದೆ
"ನಮ್ಮ ಸರ್ಕಾರದಲ್ಲಿ 35 ಸಾವಿರ ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಸಚಿವ ಸುಧಾಕರ್ ಆರೋಪ ಮಾಡುವ ಮೂಲಕ ತನ್ನ ಅಜ್ಞಾನವನ್ನು ಪ್ರದರ್ಶನಕ್ಕಿಟ್ಟು ತಾನು ಎಂತಹ ಬುದ್ದಿಗೇಡಿ ಎಂದು ಸಾಬೀತುಪಡಿಸಿದ್ದಾರೆ. 2016-17ನೇ ಸಾಲಿನ ಆರ್ಥಿಕ ವರ್ಷದ ಆಯ-ವ್ಯಯದಲ್ಲಿ ಬಜೆಟ್ ಅನುದಾನ ಮತ್ತು ಖರ್ಚಿನ ಲೆಕ್ಕದಲ್ಲಿ 19% (ರೂ.35 ಸಾವಿರ ಕೋಟಿ) ತಾಳೆಯಾಗುತ್ತಿಲ್ಲವೆಂದು ಸಿಎಜಿ ವರದಿಯಲ್ಲಿದೆ. ಇದನ್ನೇ ಪೆದ್ದ ಸುಧಾಕರ್ "ಅವ್ಯವಹಾರ'' ಎಂದು ಹೇಳಿ ನಗೆಪಾಟಲಿಗೀಡಾಗಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.
"ಎಲ್ಲ ಸರ್ಕಾರದ ಕಾಲದ ಸಿಎಜಿ ವರದಿಗಳಲ್ಲಿ ತಾಳೆಯಾಗದ ಲೆಕ್ಕ ಇದೆ. ಅದನ್ನು ಅಂತಿಮ ವರದಿಯಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ಕೇವಲ ಸುಧಾಕರ್ ಅವರಂತಹ ಮೂರ್ಖ ಶಿಖಾಮಣಿಗಳು ಮಾತ್ರ ಇದನ್ನು ಭ್ರಷ್ಟಾಚಾರ, ಅವ್ಯವಹಾರ ಎಂದು ಕತೆ ಕಟ್ಟಲು ಸಾಧ್ಯ" ಎಂದಿದ್ದಾರೆ.
ನನ್ನ ಆಡಳಿತದಲ್ಲಿ ತಾಳೆಯಾಗದ ಅನುದಾನ, ಖರ್ಚಿನ ಮೊತ್ತ ಕಡಿಮೆ
"ಬಿಜೆಪಿ ಸರ್ಕಾರದ ಕಾಲದಲ್ಲಿ ತಾಳೆಯಾಗದ ಅನುದಾನ 2008-09 ರಲ್ಲಿ 49%, 2009-10ರಲ್ಲಿ 28.6%, 2011-12ರಲ್ಲಿ 34% ಮತ್ತು 2012-13ರಲ್ಲಿ 42% ಇತ್ತು. ನಮ್ಮ ಸರ್ಕಾರದ ಕಾಲದಲ್ಲಿ 2015-16ರಲ್ಲಿ 16%, 2016-17ರಲ್ಲಿ 17.76% ಮತ್ತು 2017-18ರಲ್ಲಿ 19% ಇತ್ತು. ನಾನು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಜೆಟ್ ನಲ್ಲಿ ತಾಳೆಯಾಗದ ಅನುದಾನ ಮತ್ತು ಖರ್ಚಿನ ಮೊತ್ತ ಕಡಿಮೆಯಾಗಿತ್ತು. ಇದಕ್ಕೆ ಕಾರಣ ನಾನು ಪಾಲಿಸಿಕೊಂಡು ಬಂದಿದ್ದ ಆರ್ಥಿಕ ಶಿಸ್ತು. ಇದಕ್ಕಾಗಿ ಬಿಜೆಪಿ ನಾಯಕರು ನನ್ನನ್ನು ಅಭಿನಂದಿಸಬೇಕಾಗಿತ್ತು" ಎಂದಿದ್ದಾರೆ.
"ಭ್ರಷ್ಟಾಚಾರ ಎಂದರೆ ಏನು ಗೊತ್ತಾ ಸುಧಾಕರ್? ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಮೂರು ಸಾವಿರ ಕೋಟಿ ರೂಪಾಯಿ ನುಂಗಿದ್ದಿರಲ್ಲಾ ಅದು ಭ್ರಷ್ಟಾಚಾರ. ಮೂರು ಸಾವಿರ ಕೋಟಿ ರೂಪಾಯಿ ಕೊರೊನಾ ಭ್ರಷ್ಟಾಚಾರದ ಆರೋಪ ಕಪೋಲ ಕಲ್ಪಿತ ಅಲ್ಲ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾದ ಹೆಚ್.ಕೆ.ಪಾಟೀಲ್ ಅವರು ತಮ್ಮ ವರದಿಯಲ್ಲಿ ದಾಖಲೆಗಳ ಸಮೇತ ಈ ಭ್ರಷ್ಟಾಚಾರವನ್ನು ಬಿಚ್ಚಿಟ್ಟಿದ್ದಾರೆ. ತೆಗೆದು ಓದಿ" ಎಂದು ಟೀಕಿಸಿದ್ದಾರೆ.
ಕೊರೊನಾ ಭ್ರಷ್ಟಾಚಾರದ ಮರು ಅಡಿಟ್ಗೆ ಅನುಮತಿ ನೀಡಿಲ್ಲವೇಕೆ?
"ಹೆಚ್.ಕೆ.ಪಾಟೀಲ್ ಅವರು ಕೊಟ್ಟಿರುವ ವರದಿಯನ್ನು ವಿಧಾನಸಭಾಧ್ಯಕ್ಷರು ಸದನದಲ್ಲಿ ಮಂಡಿಸದೆ ತಾವೊಬ್ಬ ಆರ್ ಎಸ್ ಎಸ್ ಕೈಗೊಂಬೆ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಆ ವರದಿ ಬಗ್ಗೆ ಚರ್ಚೆ ನಡೆದರೆ ಸುಧಾಕರ್ ಬಣ್ಣ ಬಯಲಾಗಲಿದೆ" ಎಂದಿದ್ದಾರೆ.
"2021-22 ರ ಕಾಲದ ಕೊರೊನಾ ಭ್ರಷ್ಟಾಚಾರದ ಬಗ್ಗೆ ಮರು ಅಡಿಟ್ ನಡೆಸಲು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಎಜಿಯವರಿಗೆ ಪತ್ರ ಬರೆದು ಕೋರಿತ್ತು, ಆದರೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳು ಮರು ಅಡಿಟ್ ಗೆ ಎಜಿಯವರಿಗೆ ಅನುಮತಿ ನೀಡಲು ನಿರಾಕರಿಸಿದ್ದವು ಯಾಕೆ?. ಈ ಸುಧಾಕರ್, ಅಶ್ವತ್ ನಾರಾಯಣ್ ಅವರೆಲ್ಲ ಸತ್ಯಹರಿಶ್ಚಂದ್ರರ ಸಂತಾನದವರಾಗಿದ್ದರೆ ಕೊರೊನಾ ಭ್ರಷ್ಟಾಚಾರದ ಬಗ್ಗೆ ಮರು ಅಡಿಟ್ ನಡೆಸಲು ಅನುಮತಿ ಯಾಕೆ ನಿರಾಕರಿಸಿದ್ದರು. ಇದು ಕಳ್ಳರ ಮನಸ್ಸು ಹುಳ್ಳಗೆ" ಎಂದು ಟೀಕಿಸಿದ್ದಾರೆ.
ಅಭ್ಯರ್ಥಿ ಆಯ್ಕೆ ಸಮಿತಿಯಲ್ಲಿ ಎಸ್.ಎಂ ಕೃಷ್ಣ ಎಲ್ಲಿದ್ದರು..?
"ಕೃಷಿ, ತೋಟಗಾರಿಕೆ, ಗೃಹ ಮತ್ತು ಸಾರಿಗೆ, ಲೋಕೋಪಯೋಗಿ ಇಲಾಖೆಗಳಲ್ಲಿ ರೂ.1085 ಕೋಟಿ ಅವ್ಯವಹಾರವಾಗಿದೆ" ಎಂದು ಪೆದ್ದ ಸುಧಾಕರ್ ಆರೋಪಿಸಿದ್ದಾರೆ. ಎಜಿಯವರು ಇದನ್ನು ಭ್ರಷ್ಟಾಚಾರ ಎಂದು ಹೇಳಿಲ್ಲ. ಬಜೆಟ್ ಗಿಂತ ಹೆಚ್ಚು ಖರ್ಚಾಗಿದೆ ಎಂದಷ್ಟೆ ವರದಿ ಹೇಳಿದೆ. ಇದು ಭ್ರಷ್ಟಾಚಾರನಾ..?" ಎಂದು ಪ್ರಶ್ನಿಸಿದ್ದಾರೆ.
"ಬಿಜೆಪಿ ಗ್ಯಾಂಗಿನ ಆಲಿಬಾಬಾ ಮತ್ತು 40 ಕಳ್ಳರ ದಂಡನಾಯಕ ಆಗುವ ಹಠಕ್ಕೆ ಬಿದ್ದ ಶಾಸಕ ಸುಧಾಕರ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಫೂನ್ ಮಾಡುತ್ತಿದ್ದಾರೆ. ಸುಧಾಕರ್ ಬಾಯಲ್ಲಿ ಸುಳ್ಳು ಹೇಳಿಸುತ್ತಿದ್ದಾರೆ. ಸುಧಾಕರ್ ಬಫೂನ್ ಆಗಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.
"ನನಗೆ ಟಿಕೆಟ್ ಕೊಟ್ಟದ್ದು ಸಿದ್ದರಾಮಯ್ಯನವರಲ್ಲ, ಎಸ್ ಎಂ.ಕೃಷ್ಣ ಎಂದು ಸುಧಾಕರ್ ಹೇಳಿದ್ದಾರೆ. ಅಭ್ಯರ್ಥಿ ಆಯ್ಕೆ ಸಮಿತಿಯಲ್ಲಿ ಸೋನಿಯಾಗಾಂಧಿ ಅವರ ಜೊತೆ ಇದ್ದದ್ದು ಮಧುಸೂದನ್ ಮಿಸ್ತ್ರಿ, ವೀರಪ್ಪ ಮೊಯಿಲಿ, ಡಾ.ಜಿ.ಪರಮೇಶ್ವರ್ ಮತ್ತು ನಾನು. ಕೃಷ್ಣ ಎಲ್ಲಿದ್ದರು..?. ಸುಧಾಕರ್ ಒಬ್ಬ ಫ್ರಾಡ್, ಅವನಿಗೆ ಟಿಕೆಟ್ ಕೊಡಬೇಡಿ ಎಂದು ಎಂ.ವೀರಪ್ಪ ಮೊಯಿಲಿ ಹೇಳಿದರೂ ನಾನು ವಾದ ಮಾಡಿ ಈತನಿಗೆ ಟಿಕೆಟ್ ಕೊಡಿಸಿದೆ. ಇದಕ್ಕಾಗಿ ನಮ್ಮ ಆಂಜನಪ್ಪನವರಿಗೆ ಅನ್ಯಾಯವಾಯಿತು.
ಈತ ದುಡ್ಡು ಮತ್ತು ಅಧಿಕಾರಕ್ಕಾಗಿ ತನ್ನನ್ನು ಮಾರಿಕೊಂಡು ದ್ರೋಹ ಎಸಗಿದ" ಎಂದು ಆಕ್ರೋಶ ಹೊರಹಾಕಿದ್ದಾರೆ.