ಚಿತ್ರಗಳು: ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 27 : ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಭೇಟಿಯಾದರು. ತಿಹಾರ್ ಜೈಲಿನಿಂದ ಬಿಡುಗಡೆಗೊಂಡ ಡಿ. ಕೆ. ಶಿವಕುಮಾರ್ ಶನಿವಾರ ಬೆಂಗಳೂರಿಗೆ ಆಗಮಿಸಿದ್ದಾರೆ.
ಭಾನುವಾರ ಬೆಳಗ್ಗೆ ಡಿ. ಕೆ. ಶಿವಕುಮಾರ್ರ ಸದಾಶಿವ ನಗರದ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದರು. ಶನಿವಾರ ಗದಗ ಜಿಲ್ಲಾ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಡಿ. ಕೆ. ಶಿವಕುಮಾರ್ ಕೆಪಿಸಿಸಿ ಕಚೇರಿಗೆ ಬಂದಾಗ ಉಪಸ್ಥಿತರಿರಲಿಲ್ಲ.
'ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ': ಕೆಪಿಸಿಸಿ ಕಚೇರಿಯಲ್ಲಿ ಗುಡುಗಿದ ಡಿಕೆ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್ ಬಂಧಿಸಿತ್ತು. ಬುಧವಾರ ದೆಹಲಿ ಹೈಕೋರ್ಟ್ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಅವರು ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದರು.
ಬಿಜೆಪಿಯ ಸ್ನೇಹಿತರೂ ಸಹಾಯ ಮಾಡಿದ್ದಾರೆ: ಡಿಕೆ ಶಿವಕುಮಾರ್
ಶನಿವಾರ ಬೆಂಗಳೂರಿಗೆ ಆಗಮಿಸಿದ ಡಿ. ಕೆ. ಶಿವಕುಮಾರ್ಗೆ ಅಭಿಮಾನಿಗಳು, ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದ್ದರು. ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಡಿ. ಕೆ. ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿದ್ದರು.
ಡಿ. ಕೆ. ಶಿವಕುಮಾರ್ ಜಾಮೀನು ರದ್ದು ಮಾಡಿ; ಸುಪ್ರೀಂಗೆ ಅರ್ಜಿ
ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ
ಡಿ. ಕೆ. ಶಿವಕುಮಾರ್ ಇಡಿ ವಶದಲ್ಲಿದ್ದಾಗ ಅನಾರೋಗ್ಯದಿಂದ ದೆಹಲಿಯ ಆರ್ಎಂಎಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ, ಸಿದ್ದರಾಮಯ್ಯ ಡಿ. ಕೆ. ಶಿವಕುಮಾರ್ ಭೇಟಿಯಾಗಲು ಅವಕಾಶ ಸಿಕ್ಕಿರಲಿಲ್ಲ.
ಸಿದ್ದರಾಮಯ್ಯ ಹೇಳಿದ್ದೇನು?
ಡಿ. ಕೆ. ಶಿವಕುಮಾರ್ ಭೇಟಿ ಬಳಿಕ ಸಿದ್ದರಾಮಯ್ಯ, "ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಭೇಟಿ ಮಾಡಿ ಧೈರ್ಯ ತುಂಬಿ, ದೀಪಾವಳಿಯ ಶುಭ ಹಾರೈಸಿದೆ. ರಾಜಕೀಯ ದ್ವೇಷಕ್ಕೆ ಬಲಿಯಾಗಿ ಕಿರುಕುಳಕ್ಕೊಳಗಾದರೂ ಶಿವಕುಮಾರ್ ಅವರು ಆತ್ಮವಿಶ್ವಾಸದಿಂದ ಇದ್ದಾರೆ. ಕಾಂಗ್ರೆಸ್ ಪಕ್ಷ ಅವರ ಜೊತೆಯಲ್ಲಿದೆ" ಎಂದು ಹೇಳಿದರು.
ಹಲವು ನಾಯಕರ ಉಪಸ್ಥಿತಿ
ಸಿದ್ದರಾಮಯ್ಯ ಜೊತೆ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಡಾ. ಎಚ್. ಸಿ. ಮಹದೇವಪ್ಪ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಸುಮಾರು ಅರ್ಧಗಂಟೆಗಳ ಕಾಲ ಎಲ್ಲಾ ನಾಯಕರು ಡಿ. ಕೆ. ಶಿವಕುಮಾರ್ ಜೊತೆ ಮಾತುಕತೆ ನಡೆಸಿದರು.
ಡಿ. ಕೆ. ಶಿವಕುಮಾರ್ ಹೇಳಿದ್ದೇನು?
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದ ಡಿ. ಕೆ. ಶಿವಕುಮಾರ್, "ನಾನು ಯಾವುದೇ ತಪ್ಪು ಮಾಡಿಲ್ಲ. ಮಾಡಿದ್ದರೆ ಕಾನೂನಿನ ಅಡಿಯಲ್ಲಿ ಏನೇ ಶಿಕ್ಷೆ ಕೊಟ್ಟರೂ ನಾನು ಅನುಭವಿಸಲು ಸಿದ್ಧ. ಜೈಲಿನಲ್ಲಿ ಇದ್ದಷ್ಟು ದಿನ ನನ್ನ ಮನಸ್ಸು ಗಟ್ಟಿಯಾಗಿದೆ, ಮತ್ತಷ್ಟು ಬಲಶಾಲಿಯಾಗಿದ್ದೇನೆ" ಎಂದು ಹೇಳಿದ್ದರು.