ಲೋಕಸಭೆ ಚುನಾವಣೆ 2019: ಪ್ರತಾಪ್ ಸಿಂಹ ಎದುರು ಸಿದ್ದರಾಮಯ್ಯ ಸ್ಪರ್ಧೆ?
Recommended Video

ಬೆಂಗಳೂರು, ಆಗಸ್ಟ್ 04: ಸಿದ್ದರಾಮಯ್ಯ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಅನ್ನು ಮುನ್ನಡೆಸುವುದು ಬಹುತೇಕ ಖಾತ್ರಿಯಾಗಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯೂ ಹೆಚ್ಚಿದೆ.
ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಹೈಕಮಾಂಡ್ ಬಯಸುತ್ತಿದ್ದು. ಅದೂ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಿಂದಲೇ ಕಣಕ್ಕಿಳಿಯಬೇಕು ಎಂಬುದು ಅವರ ಆಶಯವಾಗಿದೆ.
ಹಾಗಾದಲ್ಲಿ ಯುವ ಸಂಸದ ಪ್ರತಾಪ್ ಸಿಂಹ ಹಾಗೂ ಸಿದ್ದರಾಮಯ್ಯ ಅವರ ನಡುವೆ ತುರಿಸಿನ ಪೈಪೋಟಿ ಏರ್ಪಟ್ಟು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುವ ಜಿದ್ದಾಜಿದ್ದಿನ ಕಣ ಇದಾಗಲಿದೆ.
ನಿನ್ನೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸಭೆಯಲ್ಲಿ ಹಾಜರಿದ್ದವರು ಸಹ ಸಿದ್ದರಾಮಯ್ಯ ಅವರು ಸ್ಪರ್ಧಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ವೇಣುಗೋಪಾಲ್ ಅವರು ವಿಷಯವನ್ನು ದೆಹಲಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಿದ್ದಾರೆ.

ಸ್ಪರ್ಧಿಸುವುದಿಲ್ಲ ಎಂದಿದ್ದ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಈ ಮುಂಚೆ ತಾವು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಹೇಳಿದ್ದರಾದರೂ. ಇದೀಗ ಹೈಕಮಾಂಡ್ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿಸಿದ್ದಲ್ಲದೆ ಲೋಕಸಭೆ ಚುನಾವಣೆಯ ರಾಜ್ಯ ಉಸ್ತುವಾರಿಯನ್ನು ಅವರಿಗೆ ವಹಿಸಿದೆ ಹಾಗಾಗಿ ಚುನಾವಣೆಗೆ ನಿಲ್ಲಲೇಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ.

ಸಿದ್ದರಾಮಯ್ಯ ಸ್ಪರ್ಧಿಸಿದರೆ ಪ್ರತಾಪ್ಗೆ ಕಷ್ಟ
ಕಳೆದ ಬಾರಿ ಇದೇ ಕ್ಷೇತ್ರದಿಂದ 30000+ ಮತಗಳ ಅಂತರದಿಂದ ಗೆದ್ದು ಪ್ರತಾಪ್ ಸಿಂಹ ಅವರು ಮೊದಲ ಬಾರಿಗೆ ಸಂಸತ್ಗೆ ಆಯ್ಕೆಯಾಗಿದ್ದರು. ಈ ಬಾರಿ ಸಹ ಅವರು ಈಗಾಗಲೇ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದು, ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೆ ಪ್ರತಾಪ್ ಸಿಂಹ ಅವರಿಗೆ ಗೆಲುವು ಕಷ್ಟವಾಗಲಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಗುತ್ತಿರುವ ಕಾರಣ ಪ್ರತಾಪ್ ಸಿಂಹಗೆ ಗೆಲುವು ಬಹಳ ಕಷ್ಟಕರವಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ.

ಸೋತವರಿಗೆ ಮತ್ತೆ ಅವಕಾಶ
ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಪ್ರಮುಖ ಅಭ್ಯರ್ಥಿಗಳಿಗೆ ಲೋಕಸಭೆ ಚುನಾವಣೆಯಲ್ಲಿ ಅವಕಾಶ ಕೊಡಬೇಕು ಎಂಬ ಮಹತ್ವದ ಅಂಶವೂ ನಿನ್ನೆ ನಡೆದ ಸಭೆಯಲ್ಲಿ ಚರ್ಚೆಗೆ ಬಂದಿದೆ. ಹಾಗಾದಲ್ಲಿ ಕಾಗೋಡು, ಕಿಮ್ಮನೆ, ರೋಷನ್ ಬೇಗ್, ವಿನಯ್ ಕುಲಕರ್ಣಿ, ರಮಾನಾಥ ರೈ ಸೇರಿ ಹಲವರು ಮತ್ತೆ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ. ಈ ಬಗ್ಗೆ ವೇಣುಗೋಪಾಲ್ ಅವರು ಹೈಕಮಾಂಡ್ ಜತೆ ಚರ್ಚೆ ನಡೆಸಲಿದ್ದಾರೆ.

ಪಕ್ಷ ಬಿಟ್ಟವರನ್ನು ಮತ್ತೆ ಕರೆತನ್ನಿ: ವೇಣು
ಕಾಂಗ್ರೆಸ್ ಪಕ್ಷ ಬಿಟ್ಟು ಹೋದವರನ್ನು ಹಾಗೂ ಪಕ್ಷದಲ್ಲಿದ್ದೂ ಸಕ್ರಿಯರಾಗಿರದ ಮುಖಂಡರನ್ನು ಮತ್ತೆ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡುವ ಜವಾಬ್ದಾರಿ ಕೆಪಿಸಿಸಿ ನೂತನ ಅಧ್ಯಕ್ಷರಿಗೆ, ಕಾರ್ಯಧ್ಯಾಕ್ಷರಿಗೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ವಹಿಸಿದ್ದಾರೆ. ಹಾಗಾಗಿ ಕಾಗೋಡು ತಿಮ್ಮಪ್ಪ ಮತ್ತು ಅಂಬರೀಶ್ ಅವರು ಮತ್ತೆ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆ ಇದೆ.

ಯಾರ್ಯಾರಿಗೆ ಲೋಕಸಭೆಗೆ ಅವಕಾಶ?
ನಿವೃತ್ತಿ ಘೋಷಿಸಿರುವ ಕಾಗೋಡು ತಿಮ್ಮಪ್ಪ ಅವರ ಮನವೊಲಿಸಿ ಮತ್ತೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದ ಅಂಬರೀಶ್ ಮನವೊಲಿಸಿ ಮಂಡ್ಯದಿಂದ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ಆಗಿದೆ. ಬಂಟ್ವಾಳದಿಂದ ರಮಾನಾಥ ರೈಗೆ ಟಿಕೆಟ್. ವಿನಯ್ ಕುಮಾರ್ ಸೊರಕೆ, ವಿನಯ್ ಕುಲಕರ್ಣಿ ಅವರುಗಳಿಗೆ ಟಿಕೆಟ್ ನೀಡುವ ಬಗ್ಗೆ ಇನ್ನೊಂದು ಸುತ್ತಿನಲ್ಲಿ ಚರ್ಚಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಕಾಗೋಡು ಕಣಕ್ಕಿಳಿದರೆ ಕಾಂಗ್ರೆಸ್ ಗೆಲ್ಲಲು ಸಾಧ್ಯ
ಶಿವಮೊಗ್ಗ ಜಿಲ್ಲೆಯನ್ನು ಜೆಡಿಎಸ್ಗೆ ಬಿಟ್ಟುಕೊಡುವ ಬಗ್ಗೆ ನಿನ್ನೆ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಈಗಾಗಲೇ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಹಾಗಾಗಿ ಹಿರಿಯರಾದ ಕಾಗೋಡು ಅವರನ್ನು ನಿಲ್ಲಿಸಿದಲ್ಲಿ ಮಾತ್ರವೇ ಗೆಲ್ಲಲು ಸಾಧ್ಯ ಎಂದು ಕಿಮ್ಮನೆ ಸೇರಿ ಹಲವರು ಅಭಿಪ್ರಾಯಪಟ್ಟರು.

ಹಾಸನ ಬಿಟ್ಟುಕೊಡಲು ತಕರಾರು
ಜೆಡಿಎಸ್ ವಶವಾಗಿರುವ ಹಾಸನವನ್ನು ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ಗೆ ಬಿಟ್ಟುಕೊಡಲು ಸಹ ಕಾಂಗ್ರೆಸ್ನ ಕೆಲವು ಮುಖಂಡರು ತಕರಾರು ತೆಗೆದರು. ಅಲ್ಲಿ ಕಾಂಗ್ರೆಸ್-ಜೆಡಿಎಸ್ಗೆ ನೇರ ಸ್ಪರ್ಧೆ ಇದೆ. ಹೀಗಿದ್ದಾಗ ಇಡೀಯ ಕ್ಷೇತ್ರ ಜೆಡಿಎಸ್ಗೆ ಕೊಟ್ಟು ಅವರಿಗಾಗಿ ಕೆಲಸ ಮಾಡಿ ಎಂದರೆ ಕಾರ್ಯಕರ್ತರು ಒಪ್ಪುವುದಿಲ್ಲ ಎಂಬ ಮಾತುಗಳು ಕೇಳಿಬಂದವು.

ದೆಹಲಿಯಲ್ಲಿ ಸಿದ್ದರಾಮಯ್ಯ
ಲೋಕಸಭೆ ಚುನಾವಣೆಗೆ ರಾಜ್ಯದ ಸೀಟು ಹಂಚಿಕೆ ಸೇರಿದಂತೆ ಪ್ರಚಾರ ವೈಖರಿ, ಸಂಭ್ಯಾವ್ಯ ಪಟ್ಟಿಗಳ ಕುರಿತು ಹೈಕಮಾಂಡ್ ಜತೆ ಚರ್ಚಿಸಲು, ಹಾಗೂ ಅಲ್ಲಿನ ಕಾರ್ಯಕಾರಿಣಿ ಸಮಿತಿಯ ಸಭೆಯಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಅವರು ನಿನ್ನೆಯೇ ದೆಹಲಿಗೆ ತೆರಳಿದ್ದಾರೆ.












Click it and Unblock the Notifications