ಬಡವರ ಚಿಂತೆ ದೂರ, ರಾಜ್ಯದಲ್ಲಿ ಆರೋಗ್ಯ ಸಂಪೂರ್ಣ ಉಚಿತ
ಬೆಂಗಳೂರು, ಮಾರ್ಚ್ 02: ಸಾರ್ವತ್ರಿಕ ಆರೋಗ್ಯ ರಕ್ಷಣೆ ಯೋಜನೆ 'ಆರೋಗ್ಯ ಕರ್ನಾಟಕ'ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 02) ಲೋಕಾರ್ಪಣೆ ಮಾಡಿದರು.
'ಆರೋಗ್ಯ ಕರ್ನಾಟಕ' ಯೋಜನೆ ಅಡಿ ಬಿಪಿಎಲ್ ಕಾರ್ಡ್ ದಾರರು ಇನ್ನುಮುಂದೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ಯೋಜನೆ ಅನ್ವಯ ಖಾಯಿಲೆ ಬಂದ ಯಾವುದೇ ಬಿಪಿಎಲ್ ಕಾರ್ಡುದಾರರು ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಅಲ್ಲಿನ ವೈದ್ಯರು ಯಾವುದೇ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಸೂಚಿಸಿದರೆ ಆ ಆಸ್ಪತ್ರೆಯಲ್ಲಾಗುವ ರೋಗಿಯ ಸಂಪೂರ್ಣಾ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಮರು ಸಂದಾಯ ಮಾಡುತ್ತದೆ. ಎಪಿಎಲ್ ಕಾರ್ಡ್ದಾರರಿಗೂ ಈ ಯೋಜನೆ ಮೂಲಕ ಲಾಭವಾಗಲಿದ್ದು, ಚಿಕಿತ್ಸಾ ವೆಚ್ಚದ ಶೇ30ರಷ್ಟನ್ನು ಸರ್ಕಾರವೇ ಭರಿಸುತ್ತದೆ.
'ಆರೋಗ್ಯ ಕರ್ನಾಟಕ' ಯೋಜನೆಯನ್ನು ಕ್ರಾಂತಿಕಾರಿ ಹಾಗೂ ಜನರ ಜೀವನದ ಮಟ್ಟ ಸುಧಾರಿಸುವ ಯೋಜನೆ ಎಂದು ಕರೆದ ಸಿದ್ದರಾಮಯ್ಯ ಅವರು ಈ ರೀತಿಯ ಯೋಜನೆಯೊಂದನ್ನು ತಂದಿದ್ದಕ್ಕೆ ಆರೋಗ್ಯ ಸಚಿವ ರಮೇಶ್ ಕುಮಾರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಅಭಿನಂದಿಸಿದರು.
ಈ ಯೋಜನೆ ಬಡವರ ಜೀವನ ಮಟ್ಟವನ್ನು ಸುಧಾರಿಸುವುದರಲ್ಲಿ ಸಂಶಯ ಇಲ್ಲವೆಂದ ಸಿದ್ದರಾಮಯ್ಯ ಅವರು, 'ಬಡವರ ಮೊದಲ ಶತ್ರು ಆರೋಗ್ಯ, ಖಾಯಿಲೆಯು ಅದರ ಜೊತೆಗೆ ಆರ್ಥಿಕ ಹೊರೆಯನ್ನು ತರುತ್ತವೆ, ಎಷ್ಟೋ ಜನ ಗುಣಮಟ್ಟದ ಆರೋಗ್ಯ ಪಡೆದುಕೊಳ್ಳಲಾಗದೆ ನೋವು ಪಟ್ಟಿದ್ದಾರೆ, ಅಂತಹವರ ಪರವಾಗಿ ನಾವಿಂದು ಈ ಯೋಜನೆ ಲೋಕಾರ್ಪಣೆ ಮಾಡಿದ್ದೇವೆ' ಎಂದರು.
ವರ್ಷಕ್ಕೆ 5 ಲಕ್ಷದವರೆಗೆ ಆಸ್ಪತ್ರೆ ಖರ್ಚು ಭರಿಸುವ ಯೋಜನೆ ಘೋಷಣೆ
ಆರೋಗ್ಯ ಸಚಿವ ರಮೇಶ್ ಕುಮಾರ್ ಅವರನ್ನು ಹೊಗಳಿದ ಅವರು 'ಈ ಯೋಜನೆ ರಮೇಶ್ ಕುಮಾರ್ ಅವರ ಕನಸಿನ ಕೂಸು, ಅವರು ಭಾವ ಜೀವಿ, ಬಡವರ ಕಷ್ಟಗಳಿಗೆ ಸದಾ ಮರುಗುತ್ತಾರೆ, ಅವರು ಕೆಪಿಎಂಇ ಕಾಯ್ದೆಯನ್ನು ಸಂಪುಟ ಸಭೆಗೆ ತಂದಾಗ ಎಲ್ಲರೂ ಒಕ್ಕೂರಿಲಿನಿಂದ ಯೋಜನೆಗೆ ಒಪ್ಪಿಗೆ ನೀಡಿದ್ದರು, ಅದೊಂದು ಕ್ರಾಂತಿಕಾರಿ ಯೋಜನೆ ಎಂಬುದು ಎಲ್ಲರಿಗೂ ಅರಿವಿತ್ತು' ಎಂದು ನೆನೆಪಿಸಿಕೊಂಡರು.
ಯಾವುದೇ ಜಾತಿ, ಭೇದಗಳಿಲ್ಲದೆ ರಾಜ್ಯದ 1.4 ಲಕ್ಷ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದ ಸಿದ್ದರಾಮಯ್ಯ ಅವರು, ಖಾಸಗಿ ಆಸ್ಪತ್ರೆಗಳ ಮೇಲೆ ದ್ವೇಷದಿಂದ ಈ ಯೋಜನೆಯನ್ನು ನಾವು ತಂದಿಲ್ಲ ದುರ್ಬಲರಿಗೆ, ಹಣ ಕೊಟ್ಟು ಆರೋಗ್ಯ ಕೊಂಡುಕೊಳ್ಳಲಾಗದವರಿಗಾಗಿ ಈ ಯೋಜನೆ ತಂದಿದ್ದೇವೆ' ಎಂದರು.
ಮೊದಲ ಬಾರಿಗೆ ಈ ಐತಿಹಾಸಿಕ ಯೋಜನೆ ಜಾರಿ ಮಾಡುತ್ತಿದ್ದು, ಯೋಜನೆ ಜಾರಿಯಲ್ಲಿ ಎದುರಾಗಬಹುದಾದ ಎಲ್ಲ ಅಡೆತಡೆಗಳನ್ನು ಪಟ್ಟಿ ಮಾಡಿಕೊಂಡು ನಿವಾರಣೆ ಮಾಡುತ್ತೇವೆ, ಅದಕ್ಕೆ ತಂಡವೊಂದು ಸಿದ್ದವಿದೆ ಎಂದರು.