ಶಾಸಕಾಂಗ ಸಭೆಗೆ ಗೈರಾದವರಿಗೆ ಸಿದ್ದರಾಮಯ್ಯ ನೋಟಿಸ್!
ಬೆಂಗಳೂರು, ಜನವರಿ 20 : ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದ ಇಬ್ಬರು ಶಾಸಕರಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಷೋಕಾಸ್ ನೋಟಿಸ್ಗೆ ತಕ್ಷಣ ಉತ್ತರ ನೀಡಬೇಕು ಎಂದು ನೋಟಿಸ್ನಲ್ಲಿ ಸೂಚನೆ ನೀಡಲಾಗಿದೆ.
ಜನವರಿ 18ರ ಶುಕ್ರವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ್ ಕಮಟಳ್ಳಿ ಗೈರಾಗಿದ್ದರು. ಆದ್ದರಿಂದ, ಸಿದ್ದರಾಮಯ್ಯ ಅವರು ಇಬ್ಬರಿಗೂ ನೋಟಿಸ್ ಜಾರಿಗೊಳಿಸಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂದಿನ ನಡೆ ಏನು?
ಈ ನೋಟಿಸ್ ತಲುಪಿದ ಕೂಡಲೇ ಸೂಕ್ತ ಸಮಜಾಯಿಷಿಯನ್ನು ನೀಡತಕ್ಕದ್ದು. ತಪ್ಪಿದ್ದಲ್ಲಿ ನಿಮ್ಮ ಮೇಲೆ ಸಂವಿಧಾನದ ಷೆಡ್ಯೂಲ್ 10ರ ಪ್ರಕಾರ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ನೋಟಿಸ್ನಲ್ಲಿ ಸೂಚಿಸಲಾಗಿದೆ.
ಶಾಸಕಾಂಗ ಸಭೆಗೆ ಗೈರಾಗಬೇಡಿ : ಸಿದ್ದರಾಮಯ್ಯ ಖಡಕ್ ಎಚ್ಚರಿಕೆ!
ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ 76 ಶಾಸಕರು ಹಾಜರಾಗಿದ್ದರು. ಚಿಂಚೋಳಿ ಶಾಸಕ ಉಮೇಶ್ ಜಾಧವ್ ಮತ್ತು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ಅನುಮತಿ ಪಡೆದು ಸಭೆಗೆ ಗೈರಾಗಿದ್ದರು.....
ಸಿದ್ದರಾಮಯ್ಯ ಅವರ ಬೆಂಜ್ ಕಾರಿನ ಕುರಿತು ಬೈರತಿ ಸುರೇಶ್ ಸ್ಪಷ್ಟನೆ
ನೋಟಿಸ್ನಲ್ಲಿ ಏನಿದೆ?
ರಾಜ್ಯದಲ್ಲಿ ಇತ್ತೀಚೆಗೆ ಉಂಟಾಗಿರುವ ರಾಜಕೀಯ ತೀವ್ರತರ ಸನ್ನಿವೇಶಗಳ ಹಿನ್ನಲೆಯಲ್ಲಿ ದಿನಾಂಕ 18/01/2019ರ ಶುಕ್ರವಾರ ಮಧ್ಯಾಹ್ನ 3.30ಕ್ಕೆ ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 334ರ ಸಮ್ಮೇಳನ ಸಭಾಂಗಣದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ವಿಶೇಷ ಸಭೆಯನ್ನು ಕರೆಯಲಾಗಿತ್ತು.
ನಿರ್ಣಯ ತೆಗೆದುಕೊಳ್ಳಲಾಯಿತು
ಈ ಸಭೆಯಲ್ಲಿ ರಾಜ್ಯದಲ್ಲಿ ಇತ್ತೀಚೆಗೆ ಉಂಟಾಗಿರುವ ತೀವ್ರತರವಾದ ಬರಪರಿಸ್ಥಿತಿ ಬಗ್ಗೆ, ರಾಜಕೀಯ ವಿದ್ಯಮಾನಗಳ ಬಗ್ಗೆ, ಕಾಂಗ್ರೆಸ್ ಪಕ್ಷದ ಹಾಗೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಲವರ್ಧನೆ ಮಾಡಿ ರಾಜ್ಯವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಲು ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲಾಯಿತು.
ಮೊದಲೇ ಸೂಚನೆ ನೀಡಲಾಗಿತ್ತು
ಈ ಮಹತ್ವದ ಸಭೆಯಲ್ಲಿ ತಪ್ಪದೇ ಹಾಜರಾಗಬೇಂದು ದಿನಾಂಕ 16/1/2019ರಂದು ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾದ ನಾನು ನಿಮಗೆ ನೋಟಿಸ್ ನೀಡಿದ್ದೆನು. ಒಂದು ವೇಳೆ ನೀವು ಈ ಸಭೆಗೆ ಹಾಜರಾಗದಿದ್ದಲ್ಲಿ ತಾವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯತ್ವವನ್ನು ಸ್ವ ಇಚ್ಛೆಯಿಂದ ಬಿಟ್ಟಿರುವಿರಿ ಎಂದು ಪರಿಗಣಿಸಿ ಭಾರತ ಸಂವಿಧಾನದ ಷೆಡ್ಯುಲ್ 10ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರೂ ಸದರಿ ಸಭೆಗೆ ತಾವು ಹಾಜರಾಗಿರುವುದಿಲ್ಲ.
ಗೈರು ಹಾಜರಿ ಮಾಹಿತಿ
ತಮ್ಮ ಗೈರು ಹಾಜರಿಗೆ ಯಾವುದೇ ಸಕಾರಣವನ್ನು ನನಗಾಗಲಿ ಅಥವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಗಾಗಲಿ ತಿಳಿಸಿರುವುದಿಲ್ಲ. ತಮ್ಮ ಅನುಪಸ್ಥಿತಿಯನ್ನು ಗಮನಿಸಿದರೆ, ತಾವು ಸ್ವ ಇಚ್ಛೆಯಿಂದಲೇ ಸಭೆಗೆ ಗೈರು ಹಾಜರಾಗಿರುವುದು ಕಂಡು ಬರುತ್ತದೆ.
ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿಲ್ಲ
ಇಷ್ಟೇ ಅಲ್ಲದೇ ಕಳೆದ ಹತ್ತಾರು ದಿನಗಳಿಂದ ಪತ್ರಿಕಾ ಮತ್ತು ದೃಶ್ಯ ಮಾಧ್ಯಮದಲ್ಲಿ ತಾವು ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು ತೊರೆದು ಬಿಜೆಪಿ ಸೇರುತ್ತೀರೆಂದು, ಈ ಹಿನ್ನಲೆಯಲ್ಲಿ ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ನಾಯಕರನ್ನು ಬೆಂಗಳೂರು, ದೆಹಲಿ, ಮುಂಬೈ ಮುಂತಾದ ಪ್ರದೇಶದಲ್ಲಿ ಭೇಟಿಯಾಗಿದ್ದೀರೆಂದು ಪದೇ ಪದೇ ಪ್ರಕಟವಾಗುತ್ತಿದ್ದರೂ ತಾವು ಅದನ್ನು ನಿರಾಕರಿಸಿ ಯಾವುದೇ ಹೇಳಿಕೆಗಳನ್ನು ಇದುವರೆಗೂ ನೀಡಿರುವುದಿಲ್ಲ.
ವರದಿಗಳನ್ನು ನಿರಾಕರಿಸಿಲ್ಲ
ಅನೇಕ ಸಂದರ್ಭಗಳಲ್ಲಿ ಬಿಜೆಪಿಯ ಹಿರಿಯ ನಾಯಕರುಗಳನ್ನು ತಾವು ಭೇಟಿಯಾಗಿರುತ್ತೀರಿ. ಕಾಂಗ್ರೆಸ್ ಪಕ್ಷವನ್ನು ತೊರೆಯುವುದಾಗಿಯೂ ತಾವು ಹೇಳಿದ್ದೀರಿ ಎಂದು ಮಾಧ್ಯಮಗಳಲ್ಲಿ ಬಂದಿರುತ್ತದೆ. ಅದನ್ನು ಸಹ ಇಲ್ಲಿಯ ವರೆಗೆ ನೀವು ನಿರಾಕರಿಸಿರುವುದಿಲ್ಲ. ಈ ನಿಮ್ಮ ಪ್ರವೃತ್ತಿ ನೋಡಿದರೆ ತಾವು ಸ್ವ ಇಚ್ಛೆಯಿಂದಲೇ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ತ್ಯಜಿಸಿರುವಂತೆ ಕಾಣುತ್ತದೆ.
ಶಾಸಕರಾಗಿ ಆಯ್ಕೆಯಾಗಿದ್ದೀರಿ
ಕಾಂಗ್ರೆಸ್ ಪಕ್ಷದ ಚಿನ್ಹೆಯ ಮೇಲೆ ನೀವು ಶಾಸಕರಾಗಿ ಆಯ್ಕೆಯಾಗಿದ್ದು, ತಾವು ಯಾವುದೇ ಕಾರಣಕ್ಕೂ ಪಕ್ಷದ ಸದ್ಯತ್ವವನ್ನು ತ್ಯಜಿಸಲು ಸಂವಿಧಾನದಲ್ಲಿ ಅವಕಾಶವಿರುವುದಿಲ್ಲ. ಆದರೂ ತಾವು ಅಧಿಕಾರಕ್ಕಾಗಿ ಜನಾದೇಶವನ್ನು ಧಿಕ್ಕರಿಸಿ ಸ್ವ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷದ ಹಿತವನ್ನು ಕಡೆಗಣಿಸಿ ಮೇಲಿನ ರೀತಿಯಲ್ಲಿ ನಡೆದುಕೊಂಡಿದ್ದೀರಿ ಹಾಗೂ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದೀರಿ. ಈ ನಡವಳಿಕೆ ಭಾರತೀಯ ಸಂವಿಧಾನ ಷೆಡ್ಯೂಲ್ 10ರ ಪ್ರಕಾರ ತಮ್ಮನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲು ಅವಕಾಶ ಇರುತ್ತದೆ.
ಏಕೆ ಅನರ್ಹಗೊಳಿಸಬಾರದು?
ಈ ಕಾರಣಗಳಿಂದ ನಿಮ್ಮನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲು ಏಕೆ ಕ್ರಮ ಜರುಗಿಸಬಾರದು?. ಎಂಬುದಕ್ಕೆ ಈ ಪತ್ರ ತಲುಪಿದ ಕೂಡಲೇ ಸೂಕ್ತ ಸಮಜಾಯಿಷಿಯನ್ನು ನೀಡತಕ್ಕದ್ದು. ತಪ್ಪಿದ್ದಲ್ಲಿ ನಿಮ್ಮ ಮೇಲೆ ಸಂವಿಧಾನದ ಷೆಡ್ಯೂಲ್ 10ರ ಪ್ರಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ.