ಸಿದ್ದರಾಮಯ್ಯ ಆಡಳಿತ ನಡೆಸಲು ಅಸಮರ್ಥ: ಪ್ರಲ್ಹಾದ್ ಜೋಶಿ ಹೀಗೆ ಹೇಳಿದ್ಯಾಕೆ?
ಹುಬ್ಬಳ್ಳಿ, ಜೂನ್ 29: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ವಾಲ್ಮೀಕಿ ನಿಗಮದಲ್ಲಿ ಬಹು ದೊಡ್ಡ ಹಗರಣ ಇದಾಗಿದ್ದು, ಸಿಎಂ ಗಮನಕ್ಕೆ ಬಾರದೇ ಇರಲು ಸಾಧ್ಯವೇ ಇಲ್ಲ ಎಂದು ಹೇಳಿದರು. ರಾಜ್ಯ ಹಣಕಾಸು ಇಲಾಖೆ ಸಿಎಂ ಸಿದ್ದರಾಮಯ್ಯ ಅವರ ಕೈಯಲ್ಲೇ ಇದೆ. ಅವರ ಗಮನಕ್ಕೆ ಬಾರದೇ ನೂರಾರು ಕೋಟಿ ರೂಪಾಯಿ ಹೇಗೆ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಆಗುತ್ತದೆ? ಎಂದು ಜೋಶಿ ಪ್ರಶ್ನಿಸಿದರು.

ಸಿಎಂ ಗಮನಕ್ಕೆ ಬಾರದೆ ದೊಡ್ಡ ಮೊತ್ತದ ಹಣ ವರ್ಗಾವಣೆ ಅಸಾಧ್ಯ. ಒಂದು ವೇಳೆ ಅವರಿಗೆ ಗೊತ್ತಿಲ್ಲದ ಹಾಗೆ ನಡೆದಿದ್ದರೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಅಸಮರ್ಥರಿದ್ದಾರೆ ಎಂದು ಜೋಶಿ ಆರೋಪಿಸಿದರು.
ಮುಖ್ಯಮಂತ್ರಿ ಗಮನಕ್ಕೆ ಬಂದೇ ಇಷ್ಟೊಂದು ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಿದ್ದರೆ ಈ ಹಗರಣದಲ್ಲಿ ಸಿದ್ದರಾಮಯ್ಯ ಅವರೂ ಪಾಲುದಾರ ಆಗಿರುತ್ತಾರೆ. ಹೀಗಾಗಿ ಸಿಎಂ ರಾಜೀನಾಮೆ ನೀಡಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಐಆರ್ ಎಡಿ ಕಂಪನಿಯ ಬೇರೆ ಕಡೆ ವರ್ಗಾವಣೆ ಮಾಡಿದ್ದು ಸರಿಯಲ್ಲ ಎಂದರು.ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರದಲ್ಲಿ ಅವರಲ್ಲಿಯೇ ಗೊಂದಲ ಇದೆ. ಈ ಸರ್ಕಾರ ಎಷ್ಟು ದಿನಗಳ ಕಾಲ ಇರುತ್ತದೆ ಗೊತ್ತಿಲ್ಲ. ಈ ಎಲ್ಲ ಗೊಂದಲ ಅಧಿಕಾರಿಗಳ ಹಾಗೂ ಶಾಸಕರ ಸಚಿವರ ವಲಯದಲ್ಲಿ ಗೊಂದಲ ಉಂಟಾಗಿದೆ ಎಂದರು
ಸಿಎಂ, ಡಿಸಿಎಂ ಹುದ್ದೆ ಖಾಲಿಯಿಲ್ಲ: ಸಂತೋಷ ಲಾಡ್
ಸಿಎಂ, ಡಿಸಿಎಂ ಹುದ್ದೆ ಖಾಲಿಯಿಲ್ಲ, ಅದನ್ನೆಲ್ಲ ಹೈ ಕಮಾಂಡ್ ತೀರ್ಮಾನ ಮಾಡುತ್ತೆ. ಒಕ್ಕಲಿಗ ಶ್ರೀಗಳ ಹೇಳಿಕೆಗೆ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಿಕರಣ ಕೊಟ್ಟಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಮುಖ್ಯಮಂತ್ರಿ ಆಗಬೇಕಾದ್ರೆ ಹೈಕಮಾಂಡ, ಎಲ್ಲ ಶಾಸಕರು ನಿರ್ಧಾರದ ಮೇಲೆ ಆಗಬೇಕು, ಹೈಕಮಾಂಡ ಏನು ತೀರ್ಮಾನ ಮಾಡಿರುತ್ತೆ ಅದೇ ಪೈನಲ್. ಅದಕ್ಕೆ ಸಿಎಂ ಸ್ಪಷ್ಟನೆ ನೀಡಿದ್ದಾರೆ ಎಂದರು.
ಸರ್ಕಾರ ನಡೆಸಬೇಕಾದ್ರೆ ದರ ಏರಿಸಲೇಬೇಕು; ಹಾಲಿನ ದರದ ಬಗ್ಗೆ ಈಗಾಗಲೇ ಸಿಎಂ ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಹಾಲಿನ, ಪೆಟ್ರೋಲ್ ಡಿಸೇಲ್ ದರ ಎಲ್ಲವೂ ಕಡಿಮೆ ಇದೆ. ಸರ್ಕಾರ ನಡೆಸಬೇಕಾದ್ರೆ ದರ ಏರಿಸಬೇಕಾಗುತ್ತದೆ. 60 ಸಾವಿರ ಕೋಟಿ ರೂಪಾಯಿಯನ್ನು ನಾವು ಗ್ಯಾರಂಟಿಗೆ ಕೊಡಬೇಕಾಗುತ್ತೆ. ಅದಕ್ಕಾಗಿ ಮಾಡಬೇಕು. ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಎಷ್ಟು ಜಾಸ್ತಿ ಮಾಡಿದ್ದಾರೆ ಅದರ ಬಗ್ಗೆ ಮಾತಾಡೊದು ಬೇಡ್ವಾ. ನಿರ್ಮಲಾ ಸೀತಾರಮನ್ ಇದರ ಬಗ್ಗೆ ಮಾತಾಡಬೇಕು. ಅವರು ದೇಶ ನಡೆಸಬೇಕಾದ್ರೆ, ನಾವು ರಾಜ್ಯ ನಡೆಸಬೇಕೆಂದು ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಂಡರು.
ರಾಮ ಮಂದಿರ ಸೋರುತ್ತಿದೆ ಯಾರ ನಿಲ್ಲಿಸಬೇಕು. ಬಿಜೆಪಿ ಅವರು ಆರೋಪ ಮಾಡುವುದೇ ಅವರ ಕೆಲಸ, ರಾಮ ಮಂದಿರ ಸೋರುತ್ತಿದೆ ಅದನ್ನ ಯಾರ ಹೋಗಿ ನಿಲ್ಲಸಬೇಕು. ನೀಟ್ ಪೇಪರ್ ಲೀಕ್ ಆಯಿತು ಅದರ ಬಗ್ಗೆ ಯಾರು ಮಾತಾಡೋದ ಬೇಡ್ವಾ. ಬಿಜೆಪಿ ಅವರು ಯಾವುದು ರೂಲಿಂಗ್ ಸರ್ಕಾರ ಇರುತ್ತೆ ಅದರ ವಿರುದ್ಧ ಮಾತಾಡೋದೆ ಅವರ ಕೆಲಸ ಎಂದು ಹರಿಹಾಯ್ದರು.
ಬರ ಪರಿಹಾರದ ವಿಚಾರಕ್ಕೆ ಮಾತನಾಡಿ, ನಾವು ಸರ್ಕಾರ ನಡೆಸ್ತಾ ಇದ್ದು ಒಂದು ವರ್ಷ ಆಯ್ತು, ಕೇಂದ್ರ ಸರ್ಕಾರದ ಹತ್ತು ವರ್ಷಗಳಲ್ಲಿ ಯಾವುದೇ ಲೋಪದೋಷಗಳು ಇಲ್ವಾ. ಬೆಲೆ ಏರಿಕೆ, ಎಂಪ್ಲಾಯಮೆಂಟ್, ಜಿಡಿಪಿ ಇವು ಯಾವುದು ಅವರ ಕಾಣ್ತಿಲ್ಲಾ ಎಂದು ಸಚಿವ ಸಂತೋಷ ಲಾಡ್ ಹೇಳಿದರು












Click it and Unblock the Notifications