#AskSiddaramaiah ಜನರ ಪ್ರಶ್ನೆಗೆ ಉತ್ತರ ಕೊಟ್ಟ ಮಾಜಿ ಸಿಎಂ
ಬೆಂಗಳೂರು, ಮಾರ್ಚ್ 26 : 'ಪ್ರಧಾನಿ ನರೇಂದ್ರ ಮೋದಿ ಅವರು ಚೌಕಿದಾರ್ ಎನ್ನುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದ್ದು ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಇದಕ್ಕೆ ನರೇಂದ್ರ ಮೋದಿ ಅವರ ಬೆಂಬಲವೂ ಇದೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಮಂಗಳವಾರ ಸಿದ್ದರಾಮಯ್ಯ ಅವರು ಟ್ವೀಟರ್ ಮೂಲಕ ರಾಜ್ಯದ ಜನರ ಜೊತೆ ಸಂವಾದ ನಡೆಸುತ್ತಿದ್ದಾರೆ. #AskSiddaramaiah ಎಂಬ ಹ್ಯಾಷ್ ಟ್ಯಾಗ್ ಬಳಸಿ ಜನರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಗಳನ್ನು ನೀಡುತ್ತಿದ್ದಾರೆ.
ಅಚ್ಛೇ ದಿನ್ ಎಲ್ಲಿ?, ಮೋದಿಗೆ ಸಿದ್ದರಾಮಯ್ಯ ಟ್ವೀಟ್ ಬಾಣ!
'ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಎರಡು ಮೂರು ಕ್ಷೇತ್ರದಲ್ಲಿ ಮೈತ್ರಿಯ ಒಳಗೆ ಭಿನ್ನಮತ ಇರುವುದು ನಿಜ. ಆದರೆ, ದೇಶದ ದೃಷ್ಟಿಯಲ್ಲಿ ಮೈತ್ರಿ ಅನಿವಾರ್ಯವಾಗಿದೆ. ಆದ್ದರಿಂದ, ಭಿನ್ನಮತವನ್ನು ಶಮನಗೊಳಿಸುತ್ತೇವೆ' ಎಂದು ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ, ಅಮಿತ್ ಶಾಗೆ ಸಿದ್ದರಾಮಯ್ಯ 5 ಪ್ರಶ್ನೆಗಳು!
2018ರ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, 'ನಾವು ಸಾಕಷ್ಟು ಕೆಲಸಗಳನ್ನು ಮಾಡಿಯೂ ಸಹ ಕೋಮುವಾದಿಗಳ ಅಪ ಪ್ರಚಾರದಿಂದ ಸೋಲು ಕಾಣುವ ಸ್ಥಿತಿ ಬಂದಿತು. ಆದರೆ, ಈ ಸಂದರ್ಭವನ್ನು ನಾವು ಹೆಚ್ಚು ಹೆಚ್ಚು ಸವಾಲಿನಿಂದ ತೆಗೆದುಕೊಂಡಿದ್ದೇವೆ' ಎಂದು ಹೇಳಿದರು.
ನರೇಂದ್ರ ಮೋದಿ ವಿರುದ್ಧ ಟೀಕೆ
ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, 'ಮೋದಿಯವರನ್ನು ನಾನು ಟೀಕೆ ಮಾಡುವ ಉದ್ದೇಶದಿಂದ ಟೀಕೆ ಮಾಡುವುದಿಲ್ಲ. ಜನವಿರೋಧಿ ನೀತಿ ಹೊಂದಿರುವ ಇವರ ಸುಳ್ಳುಗಳ ಬಗ್ಗೆ ಸಹಜವಾಗಿ ಸತ್ಯ ಹೇಳುತ್ತಿದ್ದೇನೆ. ಇದಕ್ಕೆ ನಾನು ಪ್ರಾಮಾಣಿಕವಾಗಿ ಸರ್ಕಾರ ನಡೆಸಿದ್ದೇ ಕಾರಣ ಎನ್ನಬಹುದು' ಎಂದರು.
ಬಿಜೆಪಿ ಸೋಲಿಸಲು ಮೈತ್ರಿ
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, 'ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಾಗಿದೆ. ನಾನು, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಒಟ್ಟಾಗಿ ಪ್ರಚಾರ ಮಾಡಲಿದ್ದೇವೆ' ಎಂದು ಹೇಳಿದರು.
ರೈತರ ಸಾಲಮನ್ನಾ
ರೈತರ ಸಾಲಮನ್ನಾ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಇತ್ತೀಚಿಗೆ ಪಂಚ ರಾಜ್ಯ ಚುನಾವಣೆ ಜಯದ ನಂತರ ಮೂರು ರಾಜ್ಯಗಳಲ್ಲಿ ನಾವು ಜಯಗಳಿಸಿದ್ದು ಅಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವ ಗುರಿ ಇದೆ' ಎಂದು ಹೇಳಿದರು.
|
ರಾಜ್ಯ ಮತ್ತು ಕೇಂದ್ರ
'ರಾಜ್ಯಗಳು ಬೆಳೆದರೆ ಕೇಂದ್ರವು ಬೆಳೆಯುತ್ತದೆ. ಹೀಗಾಗಿ ರಾಜ್ಯಗಳ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಒತ್ತು ನೀಡುವುದು ನಮ್ಮ ಉದ್ದೇಶವಾಗಿದೆ' ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯ ರಾಜಕೀಯದಲ್ಲೇ ಇರುವೆ
ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗುವರೇ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಅವರು, 'ನಾನು ಯಾವಾಗಲೂ ರಾಜ್ಯ ರಾಜಕೀಯದ ಭಾಗವಾಗಿ ಇರಲು ಬಯಸುತ್ತೇನೆ. ರಾಷ್ಟ್ರ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ. ಕರ್ನಾಟಕವನ್ನು ಅಭಿವೃದ್ಧಿ ಮಾಡುವುದು ನನ್ನ ಆದ್ಯತೆ' ಎಂದು ಹೇಳಿದರು.
|
ಅನ್ನಭಾಗ್ಯಕ್ಕೂ ವಿರೋಧ
ರಾಹುಲ್ ಗಾಂಧಿ ಅವರು ಸೋಮವಾರ 20% ಬಡವರಿಗೆ ತಿಂಗಳಿಗೆ ಹಣ ನೀಡುತ್ತೇನೆ ಅನ್ನುವುದರ ಆಶಯಕ್ಕೆ ಪಟ್ಟಭದ್ರ ಹಿತಾಸಕ್ತಿಗಳ ಸ್ವಾರ್ಥವು ವಿರುದ್ದವಾಗಿದೆ. ಅನ್ನಭಾಗ್ಯದ ವಿರುದ್ಧವೂ ಇದೇ ಸ್ಥಿತಿ ಇತ್ತು ಎಂದು ಸಿದ್ದರಾಮಯ್ಯ ಹೇಳಿದರು.
|
ರಫೆಲ್ ವಿರುದ್ಧ ತನಿಖೆ
'ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ರಾಫೆಲ್ ಅನ್ಯಾಯಗಳನ್ನು ತನಿಖೆ ಮಾಡಿ, ಲೂಟಿಕೋರರ ಮೇಲೆ ಕ್ರಮವಹಿಸಲಿದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.