ಹೀಗೆ ಆದ್ರೆ ರಾಜ್ಯ ಸರ್ಕಾರ ಪಥನ ಆಗುತ್ತಾ? ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು..?
ಬೆಂಗಳೂರು, ಆಗಸ್ಟ್ 23: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಇದರಿಂದ ರಾಜ್ಯ ಸರ್ಕಾರ ಪಥನವಾಗುತ್ತದೆ ಎನ್ನುವ ಊಹಾಪೋಹಗಳು ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಕ್ರಿಯೆ ನೀಡಿದ್ದಾರೆ.
ನ್ಯೂಸ್ಫಸ್ಟ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಪಥನ ಆಗುವ ಪ್ರಶ್ನೆಯೇ ಇಲ್ಲ. ಈ ಸರ್ಕಾರ ಜನರಿಂದ ಆಯ್ಕೆಯಾಗಿ ಗಟ್ಟಿಯಾಗಿದೆ. ಈ ಹಿಂದೆ ಕೂಡ ಈ ಬಗ್ಗೆ ಹೇಳಿದ್ದೆ. ನಮ್ಮ ಸರ್ಕಾರ ಗಟ್ಟಿಯಾಗಿ ಸುಭಧ್ರವಾಗಿ ಇರುತ್ತದೆ. ಸರ್ಕಾರ ಪಥನ ಆಗುವಂತಹ ಸನ್ನಿವೇಶ ಉದ್ಭವವಾಗಿಲ್ಲ. ಒಂದು ಕಡೆ ಕಾನೂನು ಹೋರಾಟಗಳು ನಡೆಯುತ್ತೇ ಇದೆ ಎಂದರು.

ರಾಜ್ಯಪಾಲರು ಒಂದು ಅನುಮತಿ ಕೊಟ್ಟಿದ್ದಾರಷ್ಟೆ. ತನಿಖೆ ಮಾಡಲು ಆದೇಶ ಕೊಟ್ಟಿದ್ದಾರೆ. ಆದರೇ ಇದೇ ಕ್ರಮದಲ್ಲಿ ಆಗಬೇಕು ಅಂತೇನು ಹೇಳಿಲ್ಲ. ಅದಿನ್ನು ತನಿಖೆಯಾಗಬೇಕು. ಆರೋಪ ಸಿದ್ಧವಾಗಬೇಕು. ಅದಕ್ಕಿನ್ನೂ ಬಹಳಷ್ಟು ದೊಡ್ಡ ಪ್ರೊಸಿಜರ್ ಇದೆ. ರಾಜ್ಯಪಾಲರು ಅನುಮತಿ ಕೊಟ್ಟ ತಕ್ಷಣ ರಾಜೀನಾಮೆಗೆ ಒತ್ತಾಯ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಯಾಕೆಂದರೆ ಬಹಳಷ್ಟು ಜನರ ಮೇಲೆ ಕೇಸ್ ಬಾಕಿ ಇದ್ದರೂ ಕೂಡ ಮಂತ್ರಿಗಳಾಗಿ ಮುಂದುವರಿದಿದ್ದಾರೆ. ಮುಖ್ಯಮಂತ್ರಿಗಳ ಮೇಲಿನ ಆರೋಪದ ಬಗ್ಗೆ ಅಂತಿಮವಾಗಿ ವರದಿ ಬರಬೇಕು. ಆ ಅಂತಿಮ ವರದಿ ಬಂದ ಮೇಲೆ ಇದರ ಬಗ್ಗೆ ಚರ್ಚೆ ಮಾಡೋಣ. ಈಗಿನ್ನೂ ತನಿಖೆಯಾಗಿಲ್ಲ, ವರದಿ ಬಂದಿಲ್ಲ ಹೀಗಿರುವಾಗ ಈಗಲೇ ರಾಜೀನಾಮೆ ಯಾಕೆ ಕೊಡಬೇಕು ಎನ್ನುವುದು ನನ್ನ ಪ್ರಶ್ನೆ ಎಂದಿದ್ದಾರೆ.
ಐದು ವರ್ಷಗಳ ಕಾಲ ಸಿದ್ದರಾಮಯ್ಯ ಬದಲಾವಣೆ ಇಲ್ಲವೇ ಇಲ್ಲ. ಜೊತೆಗೆ ಕಾನೂನು ಹೋರಾಟ ಕೂಡ ಮುಂದುವರಿಯುತ್ತದೆ. ಕಾನೂನು ಹೋರಾಟದ ಜೊತೆ ಅವರೇ ಅಧಿಕಾರದಲ್ಲಿ ಮುಂದುವರಿಯಬೇಕು. ಹೈಮಾಂಡ್ ಪಕ್ಷವನ್ನು ಗಟ್ಟಿಯಾಗಿ ಇಟ್ಟುಕೊಳ್ಳುತ್ತಿದೆ. ಯಾಕೆಂದರೆ ಇವತ್ತು ಸಿದ್ದರಾಮಯ್ಯ ಇರಬಹುದು, ನಾಳೆ ಬೇರೆ ಯಾರೋ ಬರಬಹುದು, ಅದರ ಪ್ರಶ್ನೆ ಇಲ್ಲ. ಇಲ್ಲಿ ಪಕ್ಷ ಗಟ್ಟಿಯಾಗಿ ಇರಬೇಕು ಎಂದರು.
ಇನ್ನು ರಾಜ್ಯದಲ್ಲಿ ಸರ್ಕಾರ ಪಥನ ಮಾಡುವುದು ಅಸಾಧ್ಯ. ಅದು ಕನಸಲ್ಲಿಯೂ ಸಾಧ್ಯವಾಗದೇ ಇರುವಂತಹ ಮಾತದು. ಸರ್ಕಾರ ಪಥನ ಆಗುವಂತಹ ಅವಕಾಶಗಳು ಯಾವುದೂ ಇಲ್ಲ. ಆದರೂ ಕೂಡ ಕಾಂಗ್ರೆಸ್ ಶಾಸಕರು, ಯಾರು ಹೇಳುವಂತಹ ಮಾತಿಗೆ ಮರುಳಾಗಬಾರದು. ನಮ್ಮ ಪಕ್ಷ ಆಡಳಿತದಲ್ಲಿದೆ. ನಮ್ಮ ಪಕ್ಷ ಗಟ್ಟಿಯಾಗಿರಬೇಕು. ಬೇರೆಯವರು ಏನೇನು ಆಮೀಷಗಳನ್ನು ಒಡ್ಡುತ್ತಾರೆ. ಹಾಗೇ ಮಾಡುತ್ತೇವೆ. ಹೀಗೆ ಮಾಡುತ್ತೇವೆ ಅಂತಾ. ಹೀಗಾಗಿ ಯಾರೂ ಇಂತಹ ವಿಚಾರಗಳಿಗೆ ಗಮನ ಹರಿಸಬಾರದು ಎಂದು ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಶಾಸಕರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದರು.












Click it and Unblock the Notifications