ʼಬೆಂಗಳೂರು ಗ್ರಾಮಾಂತರದಲ್ಲಿ ಡಿ ಕೆ ಸುರೇಶ್ ಸೋಲಲು ಸಿದ್ದರಾಮಯ್ಯ ಕಾರಣʼ
ಬೆಂಗಳೂರು, ಜೂನ್ 28: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಹೋದರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಸೋಲುಕಂಡಿದ್ದು, ರಾಜ್ಯ ರಾಜಕಾರಣದಲ್ಲಿ ಅಚ್ಚರಿಕೆಗೆ ಕಾರಣವಾಗಿದೆ. ಡಿಕೆ ಸುರೇಶ್ ಅವರ ಸೋಲಿಗೆ ಕಾರಣವೇನು ಎಂಬ ಚರ್ಚೆ ಪಕ್ಷದಲ್ಲಿ ನಡೆಯುತ್ತಿವೆ. ಡಿ ಕೆ ಸುರೇಶ್ ಸೋಲಿನ ಕುರಿತು ವಿಪಕ್ಷ ನಾಯಕ ಅಶೋಕ್ ಸ್ಪೋಟಕ ಹೇಳಿದ್ದಾರೆ.
ಈ ಕುರಿತು ಆರ್ ಅಶೋಕ್ ಮಾತನಾಡಿದ್ದು, ಡಾ.ಜಿ.ಪರಮೇಶ್ವರ್ ರೀತಿಯಲ್ಲೇ ಡಿ.ಕೆ.ಸುರೇಶ್ ಅವರನ್ನು ಸೋಲಿಸಲಾಗಿದೆ. ಡಿಕೆ ಶಿವಕುಮಾರ್ ಸಿಎಂ ಸ್ಥಾನ ಕೇಳುತ್ತಾರೆ ಎಂದು ಡಿ.ಕೆ.ಸುರೇಶ್ ಸೋಲಿಸಲಾಗಿದೆ. ಈಗ ಡಿ.ಕೆ.ಶಿವಕುಮಾರ್ ಚದುರಂಗದಾಟ ಶುರು ಮಾಡಿದ್ದಾರೆ. ಹೀಗಾಗಿಯೇ ಸ್ವಾಮೀಜಿ ಬಾಯಲ್ಲಿ ಸಿಎಂ ಸ್ಥಾನದ ವಿಚಾರ ಹೇಳಿಸಿದ್ದಾರೆ ಎಂದು ಸ್ಫೋಟಕ ಹೇಳಿಕೆಯನ್ನ ಆರ್ ಅಶೋಕ್ ತಿಳಿಸಿದ್ದಾರೆ.

ಇನ್ನೂ ಕಾಂಗ್ರೆಸ್ ಸರ್ಕಾರದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾತನಾಡಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಮೊತ್ತವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ ವಿವಿಧ ಕಂಪೆನಿಗಳಿಗೆ ಹಣ ವರ್ಗಾಯಿಸಿ, ಅಲ್ಲಿಂದ ಹಣ ಡ್ರಾ ಮಾಡಿ, ಚುನಾವಣೆಗೆ ಬಳಸಿದ್ದು, ಹಣ ದುರುಪಯೋಗ ಆಗಿದೆ ಎಂದು ಆರೋಪಿಸಿದರು.
ಬಾರ್ನಲ್ಲಿ ಕುಳಿತು ಕುಡಿದ ಬಿಲ್ ಅನ್ನು ವಾಲ್ಮೀಕಿ ನಿಗಮದಿಂದ ಪಡೆದು ದುರುಪಯೋಗ ಮಾಡಿದ್ದಾರೆ. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಇದ್ದಾಗ ಅನೇಕ ಅಭಿವೃದ್ಧಿ ನಿಗಮಗಳನ್ನು ಮಾಡಿದ್ದಾರೆ. ಅದೇರೀತಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪಿಸಿ, ನೂರಾರು ಕೋಟಿ ರೂಪಾಯಿ ಕೊಟ್ಟು ವಾಲ್ಮೀಕಿ ಸಮುದಾಯ, ಬಡ ಮಕ್ಕಳಿಗೆ ನ್ಯಾಯ ದೊರಕಿಸಲು ಶ್ರಮಿಸಿದ್ದರು ಎಂದರು.
ಬಿಜೆಪಿ ತೀವ್ರ ಹೋರಾಟದ ಬಳಿಕ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಎಸ್ಐಟಿ ಇಲ್ಲಿನವರೆಗೆ ನಾಗೇಂದ್ರರನ್ನು ತನಿಖೆಗೆ ಕರೆದಿಲ್ಲ ಎಂದು ಆಕ್ಷೇಪಿಸಿದರು. ಇದು ಕೇವಲ ನಾಗೇಂದ್ರರು ಮಾಡಿದ ತಪ್ಪಲ್ಲ. ಸ್ವತಃ ಹಣಕಾಸಿನ ಇಲಾಖೆ ನಿರ್ವಹಿಸುವ ಮುಖ್ಯಮಂತ್ರಿಗಳು ಮಾಡಿದ ತಪ್ಪು. ಮುಖ್ಯಮಂತ್ರಿಗಳ ಅನುಮತಿ ಇಲ್ಲದೆ, ಲೋಕಸಭಾ ಚುನಾವಣೆ ನಡೆಯುತ್ತಿದ್ದಾಗ 187 ಕೋಟಿಯನ್ನು ನಿಗಮಕ್ಕೆ ವರ್ಗಾಯಿಸಿ, ಅಲ್ಲಿಂದ ಹೊರರಾಜ್ಯಕ್ಕೆ ಕಳಿಸಿದ್ದಾರೆ. ಲೋಕಸಭಾ ಚುನಾವಣೆಗೆ ಕರ್ನಾಟಕವನ್ನು ಎಟಿಎಂ ಆಗಿ ಬಳಸಿಕೊಂಡಿದ್ದಾರೆ ಎಂಬ ಮಾಹಿತಿ ಪತ್ರಿಕೆಗಳಲ್ಲಿ ಹೊರಬರುತ್ತಿದೆ ಎಂದು ನುಡಿದರು.
ಲೋಕಸಭಾ ಚುನಾವಣೆಗೆ ನಮ್ಮ ರಾಜ್ಯವನ್ನು ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಮತ್ತಿತರ ನಾಯಕರ ಎಟಿಎಂ ಆಗಿ ಮಾಡಿದ್ದಾರೆ ಎಂದು ದೂರಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕ್ಕೂ ಕನ್ನ ಹಾಕಿದ್ದಾರೆ ಎಂದು ಟೀಕಿಸಿದರು. ಇದು ಸಿಎಂ ಅವರ ಗಮನಕ್ಕೆ ಬಾರದೆ ಆಗಲು ಅಸಾಧ್ಯ ಎಂದರು.
ಸಚಿವ ಶರಣಪ್ರಕಾಶ ಪಾಟೀಲ್, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮತ್ತು ಮುಖ್ಯಮಂತ್ರಿಗಳು ಜವಾಬ್ದಾರಿ ಹೊತ್ತು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಪೆಟ್ರೋಲ್, ಡೀಸೆಲ್, ಹಾಲು ಮೊದಲಾದವುಗಳ ದರ ಏರಿಕೆಯೂ ಖಂಡನೀಯ. ಇದು ಕಾಂಗ್ರೆಸ್ಸಿನ ಜನವಿರೋಧಿ ನೀತಿ ಎಂದು ಟೀಕಿಸಿದರು.












Click it and Unblock the Notifications