ಸಿದ್ದರಾಮಯ್ಯ ನಿವಾಸದಲ್ಲಿ ಮಹತ್ವದ ಸಭೆ,ರಾಜೀನಾಮೆ ಪರ್ವ ತಡೆಯಲು ತಂತ್ರ
ಬೆಂಗಳೂರು, ಜುಲೈ 01: ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ ಕಾರಣ ಆತಂಕದಲ್ಲಿರುವ ರಾಜ್ಯ ಕಾಂಗ್ರೆಸ್ ನಾಯಕರು ತುರ್ತು ಸಭೆ ನಡೆಸುತ್ತಿದ್ದಾರೆ.
ರಮೇಶ್ ಜಾರಕಿಹೊಳಿ ರಾಜೀನಾಮೆ ವಿಷಯ ಹೊರಬೀಳುತ್ತಿದ್ದಂತೆ ಸಿದ್ದರಾಮಯ್ಯ ನಿವಾಸಕ್ಕೆ ಸಚಿವರಾದ ಡಿ.ಕೆ.ಶಿವಕುಮಾರ್ ಮತ್ತು ಡಿಸಿಎಂ ಪರಮೇಶ್ವರ್ ಅವರು ದೌಡಾಯಿಸಿದ್ದು, ಬಹು ಕಾಲ ಈ ಮೂವರು ನಾಯಕರು ಚರ್ಚೆ ನಡೆಸಿದ್ದಾರೆ.
ಸಭೆಯ ತರುವಾಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಹಠಾತ್ತನೆ ಶಾಸಕಾಂಗ ಪಕ್ಷದ ಸಭೆಗೆ ಕರೆ ನೀಡಿದ್ದಾರೆ. ಇಂದು ರಾತ್ರಿ ಕಾಂಗ್ರೆಸ್ ಶಾಸಕರು ಸಭೆ ಸೇರಲಿದ್ದು, ಮಹತ್ವದ ಮಾತುಕತೆ, ಸೂಚನೆಗಳನ್ನು ಸಿದ್ದರಾಮಯ್ಯ ನೀಡಲಿದ್ದಾರೆ.

ಅತೃಪ್ತ ಶಾಸಕರನ್ನು ಭೇಟಿ ಮಾಡಿರುವ ಸಿದ್ದರಾಮಯ್ಯ
ಅತೃಪ್ತ ಶಾಸಕರನ್ನು ಈಗಾಗಲೇ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಸಂಪರ್ಕ ಮಾಡಿದ್ದಾರೆ ಎನ್ನುವ ಸುದ್ದಿ ಸಹ ಇದ್ದು, ಭೀಮಾನಾಯ್ಕ್, ರಾಜಶೇಖರ ಪಾಟಿಲ್ ಅವರು ಸಿದ್ದರಾಮಯ್ಯ ನಿವಾಸಕ್ಕೆ ಧಾವಿಸುತ್ತಿದ್ದಾರೆ. ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರಿಗೂ ಬುಲಾವ್ ನೀಡಲಾಗಿದೆ.

ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಕರೆ
ಈ ಮಧ್ಯೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗೆ ವಿವರಿಸಿದ್ದಾರೆ ಎನ್ನಲಾಗಿದೆ. ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಸಹ ಮಾತುಕತೆ ನಡೆಸಿದ್ದು ಅವರು ಇಂದು ರಾತ್ರಿ ಅಥವಾ ನಾಳೆ ರಾಜ್ಯಕ್ಕೆ ಆಗಮಿಸಲಿದ್ದಾರೆ.

ತುರ್ತು ತಂತ್ರ ಅನುಸರಿಸುತ್ತಿರುವ ರಾಜ್ಯ ಕಾಂಗ್ರೆಸ್
ಇನ್ನೂ ಹೆಚ್ಚಿನ ಶಾಸಕರು ರಾಜೀನಾಮೆ ನೀಡದಂತೆ ತಡೆಯುವ ತುರ್ತು ತಂತ್ರವನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಅವರು ಹೆಣೆಯುತ್ತಿದ್ದಾರೆ.

ಅತೃಪ್ತ ಶಾಸಕರಿಗೆ ಅವಕಾಶ?
ಪ್ರಸ್ತುತ ಇರುವ ಸಚಿವರ ಕೈಲಿ ರಾಜೀನಾಮೆ ಕೊಡಿಸಿ ಕೆಲವು ಅತೃಪ್ತ ಶಾಸಕರಿಗೆ ಸ್ಥಾನ ನೀಡುವ ಮೂಲಕ ಶಾಸಕರು ರಾಜೀನಾಮೆ ನೀಡಿ ವಲಸೆ ಹೋಗುವುದನ್ನು ತಪ್ಪಿಸುವ ನಿರ್ಧಾರ ಮಾಡಲಾಗಿದೆ. ಯಾರ್ಯಾರ ಶಾಸಕ ಸ್ಥಾನ ಹೋಗುತ್ತದೆ, ಯಾವ-ಯಾವ ಅತೃಪ್ತರಿಗೆ ಶಾಸಕ ಸ್ಥಾನ ಸಿಗುತ್ತದೆ ಕಾದು ನೋಡಬೇಕಿದೆ.












Click it and Unblock the Notifications