ಬಂಡೀಪುರ ರೆಸಾರ್ಟ್ನಲ್ಲಿ ಸಿದ್ದರಾಮಯ್ಯ ರಣತಂತ್ರ!
ಮೈಸೂರು, ಮಾರ್ಚ್ 30 : ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ರಾಜಧಾನಿಯಿಂದ ತವರು ಜಿಲ್ಲೆಯತ್ತ ಮುಖ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಗರದಲ್ಲಿ ಭರ್ಜರಿ ಮತಯಾತ್ರೆ ನಡೆಸಿದ ಬಳಿಕ ವಿಶ್ರಾಂತಿ ನೆಪದಲ್ಲಿ ಬಂಡೀಪುರದ ಸೆರಾಯ್ ಜಂಗಲ್ ರೆಸಾರ್ಟ್ಗೆ ತೆರಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ನಾಯಕರೊಂದಿಗೆ ವಿಶೇಷ ಸಭೆ ನಡೆಸುತ್ತಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸುವ ತಂತ್ರದ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಸಭೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ ಆ ಕ್ಷೇತ್ರದ ನಾಯಕರನ್ನು ಹೊರತುಪಡಿಸಿ ಬೇರೆ ಯಾರ ಭೇಟಿಗೂ ಅವಕಾಶ ನೀಡಿಲ್ಲ.
ಮೈಸೂರಲ್ಲಿ ಸಿದ್ದರಾಮಯ್ಯಗೆ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ತೆರಳಿದ್ದ ಕೆ.ಆರ್.ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ಅವರನ್ನೂ ಒಳಗೆ ಬಿಡದೆ ವಾಪಾಸ್ ಕಳುಹಿಸಲಾಗಿದೆ. ಇಷ್ಟೊಂದು ಗಂಭೀರವಾಗಿ ಸಭೆಯನ್ನು ನಡೆಸುತ್ತಿರುವುದನ್ನು ಗಮನಿಸಿದರೆ ಸಿದ್ದರಾಮಯ್ಯ ಅವರಿಗೂ ತವರು ಕ್ಷೇತ್ರದಲ್ಲಿ ಸೋಲಿನ ಭಯ ಕಾಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಹಾಗೆ ನೋಡಿದರೆ ಸೆರಾಯ್ ಜಂಗಲ್ ರೆಸಾರ್ಟ್ ಎಸ್. ಎಂ. ಕೃಷ್ಣ ಅಳಿಯ ಸಿದ್ದಾರ್ಥ ಅವರಿಗೆ ಸೇರಿದ್ದು. ರೆಸಾರ್ಟ್ಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ, ಜತೆಗೆ ಇಲ್ಲಿನ ಸಿಬ್ಬಂದಿಗಳ ಮೊಬೈಲ್ನ್ನು ವಶಕ್ಕೆ ಪಡೆಯಲಾಗಿದ್ದು ಯಾವುದೇ ಕಾರಣಕ್ಕೂ ಒಳಗೆ ನಡೆಯುತ್ತಿರುವ ವಿಚಾರಗಳು ಹೊರಗೆ ಹೋಗದಂತೆ ನೋಡಿಕೊಳ್ಳಲಾಗುತ್ತಿದೆ.
ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ: ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಮೂರು ದಿನಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗುತ್ತಿದ್ದು, ಇವರೊಂದಿಗೆ ಆಪ್ತರಾದ ಸಚಿವ ಎಚ್.ಸಿ.ಮಹಾದೇವಪ್ಪ, ಸಿ.ಎಚ್.ವಿಜಯ್ ಶಂಕರ್ ಸೇರಿದಂತೆ ಹಲವರು ಮುಖಂಡರಿದ್ದಾರೆ ಎಂದು ತಿಳಿದುಬಂದಿದೆ.
ಈ ಬಾರಿ ಚುನಾವಣೆಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡರಿದ್ದಾರೆ. ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಆಡಳಿತವಿತ್ತಲ್ಲದೆ, ಆಡಳಿತ ವಿರೋಧಿ ಅಲೆಯೂ ಕಂಡು ಬಂದಿತ್ತು. ಅಷ್ಟು ಸಾಲದೆಂಬಂತೆ ಬಿಜೆಪಿ ಒಡೆದು ಹೋಳಾಗಿತ್ತು. ಹೀಗಾಗಿ ರಾಜ್ಯದಲ್ಲಿ ಜನ ಕಾಂಗ್ರೆಸ್ನತ್ತ ಒಲವು ತೋರಿದ್ದರು.
2013ರಲ್ಲಿ ಮೋದಿಯ ಅಲೆ ಅಷ್ಟೊಂದಾಗಿರಲಿಲ್ಲ. ಈ ಬಾರಿ ಮೋದಿ ಅಲೆಯೂ ಕೆಲಸ ಮಾಡುವ ಸಾಧ್ಯತೆಯಿದೆ. ಜತೆಗೆ ಜೆಡಿಎಸ್ ಕೂಡ ರಣೋತ್ಸಾಹ ತೋರುತ್ತಿದೆ. ಹೀಗಾಗಿಯೇ ಸಿದ್ದರಾಮಯ್ಯ ಅವರು ದೂರದ ರೆಸಾರ್ಟ್ನಲ್ಲಿ ಕುಳಿತು ಒಂದಷ್ಟು ಆಪ್ತರನ್ನು ತನ್ನ ಬಳಿಗೆ ಕರೆಯಿಸಿಕೊಂಡು ರಾಜಕೀಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ.