Siddaramothsava : ಅಮೃತಮಹೋತ್ಸವ, ಸಿದ್ದರಾಮಯ್ಯರಿಗೆ ಲಾಭ ತಂದುಕೊಡುತ್ತಾ?
ಬೆಂಗಳೂರು, ಆಗಸ್ಟ್ 03; ಸಮಾಜವಾದಿ, ನಿಷ್ಠುರವಾದಿ, ಕುರುಬ ಸಮಾಜದ ನಾಯಕ ಸಿದ್ದರಾಮಯ್ಯರ ರಾಜಕೀಯ ಇತಿಹಾಸವನ್ನು ನೋಡಿದರೆ ಅವರಿಗೆ ಚುನಾವಣೆಯಲ್ಲಿ ಗೆಲುವು ಎನ್ನುವುದು ಅಷ್ಟು ಸುಲಭವಾಗಿ ದಕ್ಕಿದಂತೆ ಕಾಣುವುದಿಲ್ಲ.
Recommended Video
2023ರ ವಿಧಾನಸಭೆ ಚುನಾವಣೆ ತಮ್ಮ ಕೊನೆಯ ಚುನಾವಣೆ ಎನ್ನುತ್ತಿರುವ ಸಿದ್ದರಾಮಯ್ಯ ಗೆದ್ದು ಮುಖ್ಯಮಂತ್ರಿಯಾಗಲೇಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದೀಗ ನಡೆಯುತ್ತಿರುವ ಹುಟ್ಟುಹಬ್ಬ ರಾಜಕೀಯವಾಗಿ ಲಾಭ ತಂದು ಕೊಟ್ಟರೂ ಅಚ್ಚರಿಯಿಲ್ಲ.
ಸಿದ್ದರಾಮಯ್ಯರ 75ನೇ ಹುಟ್ಟುಹಬ್ಬದ ಅಂಗವಾಗಿ 'ಸಿದ್ದರಾಮೋತ್ಸವ' ಹೆಸರಿನಲ್ಲಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವಾರು ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಆಯೋಜಿಸುವ ಮೂಲಕ ಹೈಕಮಾಂಡ್ ಮುಂದೆ ಶಕ್ತಿಪ್ರದರ್ಶನ ಮಾಡಿದ್ದರು. ಈಗ ಸಿದ್ದರಾಮಯ್ಯ 75ನೇ ವರ್ಷದ ಹುಟ್ಟು ಹಬ್ಬ ಆಚರಣೆ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ದಾವಣಗೆರೆಯ ಸಮಾವೇಶ ಸಿದ್ದರಾಮಯ್ಯಗೆ ರಾಜಕೀಯ ಲಾಭ ತಂದುಕೊಡಲಿದೆಯೇ? ಎಂಬುದು ಸದ್ಯದ ಪ್ರಶ್ನೆ. ಕಾಂಗ್ರೆಸ್ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಚರ್ಚೆ ಜೋರಾಗಿರುವಾಗಲೇ ಈ ಸಮಾವೇಶ ನಡೆಯುತ್ತಿದೆ. ಈ ಕುರಿತು ವಿಶ್ಲೇಷಣಾ ವರದಿ ಇಲ್ಲಿದೆ...

ಆ ತೀರ್ಮಾನಕ್ಕೆ ಏಕೆ ಬಂದರು?
ಬಹುಶಃ ಮುಖ್ಯಮಂತ್ರಿಯಾಗಿದ್ದ ನಾಯಕನೊಬ್ಬ ತನ್ನ ತವರು ಕ್ಷೇತ್ರದಲ್ಲಿಯೇ ಸೋಲು ಕಾಣುತ್ತಾರೆಂದರೆ ಪರಿಸ್ಥಿತಿ ಹೇಗಿರಬಹುದು?. ಇಷ್ಟರಲ್ಲೇ ಕ್ಷೇತ್ರವೊಂದನ್ನು ಆಯ್ಕೆ ಮಾಡಿಕೊಂಡು ಭದ್ರವಾಗಿ ನೆಲೆವೂರಬಹುದಿತ್ತೇನೋ ಆದರೆ ಅದ್ಯಾವುದು ಆಗಲೇ ಇಲ್ಲ. ತವರು ಕ್ಷೇತ್ರದಲ್ಲಿ ತನ್ನ ಗೆಲುವು ಅಸಾಧ್ಯ ಎಂಬ ತೀರ್ಮಾನಕ್ಕೆ ಏಕೆ ಬಂದರೋ ಗೊತ್ತಿಲ್ಲ. ಆದರೆ ಮೈಸೂರು ಜಿಲ್ಲೆಯಾದ್ಯಂತ ಪ್ರವಾಸ ಮಾಡಿರುವ ಅವರಿಗೆ ತನ್ನ ಗೆಲುವಿಗೆ ಪೂರಕವಾದ ಕ್ಷೇತ್ರ ವರುಣ ಹೊರತು ಪಡಿಸಿ ಇನ್ಯಾವುದೂ ಕಂಡು ಬರುತ್ತಿಲ್ಲ.
ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ದೃಷ್ಠಿಯಿಂದ ಕ್ಷೇತ್ರ ಬಿಟ್ಟುಕೊಟ್ಟು ತಾವು ಸ್ಪರ್ಧಿಸಲು ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯಗೆ ಬಹುತೇಕ ಶಾಸಕರು ತಮ್ಮ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿ ಎಂಬ ಆಹ್ವಾನ ನೀಡುತ್ತಿದ್ದಾರೆ. ಆದರೆ ಇನ್ನೂ ಕೂಡ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎನ್ನುವುದಾಗಲೀ ಅಥವಾ ಬಾದಾಮಿಯಲ್ಲಿಯೇ ಎರಡನೇ ಬಾರಿಗೆ ಸ್ಪರ್ಧಿಸುತ್ತೇನೆ ಎನ್ನುವುದನ್ನಾಗಲೀ ಸಿದ್ದರಾಮಯ್ಯ ಖಚಿತ ಪಡಿಸುತ್ತಿಲ್ಲ.

ಹೈಕಮಾಂಡ್ ಮುಂದೆ ಶಕ್ತಿಪ್ರದರ್ಶನ
ಸಿದ್ದರಾಮಯ್ಯ ಸದ್ಯದ ಉದ್ದೇಶ ಒಂದೇ ಅದು ಏನೆಂದರೆ ಹೈಕಮಾಂಡ್ ಮೂಲಕವೇ ಕಾಂಗ್ರೆಸ್ನಿಂದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿಸಿಕೊಳ್ಳುವುದಾಗಿದೆ. ಒಂದು ವೇಳೆ ಈ ಬಾರಿ ಕಾಂಗ್ರೆಸ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದೇ ನಮ್ಮದು ಸಾಮೂಹಿಕ ನಾಯಕತ್ವ ಎಂಬ ಜಪ ಮಾಡಿಕೊಂಡು ಚುನಾವಣೆಗೆ ಹೋದರೆ ಈಗಾಗಲೇ ಮುಂದಿನ ಮುಖ್ಯಮಂತ್ರಿ ನಾನೇ ಎಂಬ ಹೇಳಿಕೆಗಳನ್ನು ನೀಡುತ್ತಾ ಕಿತ್ತಾಟವಾಡಿದ ಕೈ ನಾಯಕರನ್ನು ನೋಡಿದ ಮತದಾರರು ಆ ಭಜನೆಯನ್ನು ನಂಬಲಾರರು.
ಜತೆಗೆ ವಿರೋಧ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿಯಿಂದ ಭಾರೀ ಟೀಕೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬರಬಹುದು. ಈಗಾಗಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿಯಾಗಬೇಕೆಂದು ಹಠಕ್ಕೆ ಬಿದ್ದಿರುವ ಡಿ. ಕೆ. ಶಿವಕುಮಾರ್ ಸೇರಿದಂತೆ ಒಂದಷ್ಟು ನಾಯಕರು ಕುರ್ಚಿ ಮೇಲೆ ಟವಲ್ ಹಾಕಿ ಕುಳಿತಿದ್ದಾರೆ. ಹೀಗಾಗಿ ಹೈಕಮಾಂಡ್ ಅಂತಿಮ ತೀರ್ಮಾನಕ್ಕೆ ಬಂದು ಬಹಿರಂಗವಾಗಿ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡದೆ ಹೋದರೆ ಸಂಕಷ್ಟ ತಪ್ಪಿದಲ್ಲ.

ಶಕ್ತಿ ಪ್ರದರ್ಶಿಸಿದ್ದ ಡಿ. ಕೆ. ಶಿವಕುಮಾರ್
ಕೆಲವು ಸಮಯಗಳ ಹಿಂದೆ ಮೇಕೆದಾಟು ಪಾದಯಾತ್ರೆ ಆಯೋಜಿಸುವ ಮೂಲಕ ಡಿ. ಕೆ. ಶಿವಕುಮಾರ್ ಹೈಕಮಾಂಡ್ ಮುಂದೆ ಶಕ್ತಿಪ್ರದರ್ಶನ ಮಾಡಿದ್ದರು. ಮೇಲ್ನೋಟಕ್ಕೆ ಅದನ್ನು ರೈತಪರ ಹೋರಾಟ ಎಂಬಂತೆ ಬಿಂಬಿಸಿದರೂ ಕೂಡ ಅದು ಅಂತಿಮವಾಗಿ ಡಿಕೆಶಿ ಅವರ ಶಕ್ತಿಪ್ರದರ್ಶನವಾಗಿಯೇ ಬಿಂಬಿತವಾಗಿತ್ತು. ಆದರೆ ಈಗ ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟು ಹಬ್ಬ ಆಚರಣೆ ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಎನ್ನುವುದರಲ್ಲಿ ಎರಡು ಮಾತಿಲ್ಲ.
ಚುನಾವಣೆಗೆ ಕೇವಲ ಒಂಬತ್ತು ತಿಂಗಳಿದೆ. ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದರೂ ಗೆಲುವು ಕಷ್ಟವಾಗಿತ್ತು. ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಒಂದು ಕ್ಷೇತ್ರದಲ್ಲಿ ಸೋತು ಮತ್ತೊಂದು ಕ್ಷೇತ್ರದಲ್ಲಿ ಪ್ರಯಾಸದ ಗೆಲುವು ಪಡೆದಿದ್ದರು. ಆದರೆ ಈ ಬಾರಿ ಹಾಗಾಗಬಾರದು ಎಂಬ ತೀರ್ಮಾನಕ್ಕೆ ಬಂದಿರುವ ಅವರು ಗೆಲುವು ಪಡೆಯುವುದು ಮಾತ್ರವಲ್ಲ ಸಿಎಂ ಆಗಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಅವರಿಗೆ ಒತ್ತಾಸೆಯಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎನ್ನುವುದಕ್ಕಿಂತ ಹೆಚ್ಚಾಗಿ ಬೆಂಬಲಿಗರು, ಅಭಿಮಾನಿಗಳು ನಿಂತಿದ್ದಾರೆ.

ವಿರೋಧಿಗಳಿಗೆ ನುಂಗಲಾರದ ತುತ್ತು
ದಾವಣಗೆರೆಯಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಅಮೃತ ಮಹೋತ್ಸವ ಸಮಾವೇಶ ಕಾಂಗ್ರೆಸ್ ಪಕ್ಷದೊಳಗೆ ಮತ್ತು ರಾಜಕೀಯ ಪಡಸಾಲೆಯಲ್ಲಿ ಹಲವು ರೀತಿಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜತೆಗೆ ಕೆಲವೊಂದು ಪ್ರಶ್ನೆಗಳಿಗೆ ಇಲ್ಲಿಯೇ ಉತ್ತರ ಸಿಕ್ಕರೂ ಅಚ್ಚರಿಯಿಲ್ಲ.
ಈ ಅದ್ಧೂರಿ ಹುಟ್ಟು ಹಬ್ಬ ಆಚರಣೆ ವಿರೋಧದ ಪಕ್ಷದ ನಾಯಕರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೋ ಗೊತ್ತಿಲ್ಲ. ಕಾಂಗ್ರೆಸ್ ಒಳಗಿರುವ ಕೆಲವು ನಾಯಕರಿಗಂತು ಇದು ನುಂಗಲಾರದ ತುತ್ತಾಗಿ ಪರಿಣಮಿಸಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications