11 ತಿಂಗಳಲ್ಲೇ ಓಡಿಹೋದವರು ನೀವು: ಡಿವಿಎಸ್ಗೆ ಸಿದ್ದರಾಮಯ್ಯ ಟಾಂಗ್
Recommended Video

ಬೆಂಗಳೂರು, ಡಿಸೆಂಬರ್ 31: ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಮತ್ತು ಸಿದ್ದರಾಮಯ್ಯ ಅವರ ನಡುವೆ ಟ್ವಿಟ್ಟರ್ ವಾರ್ ಶುರುವಾಗಿದೆ.
ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಭಾನುವಾರ ಹರಿಹಾಯ್ದಿದ್ದರು.
ಬಿಜೆಪಿ ಕುದುರೆ ವ್ಯಾಪಾರಕ್ಕೆ ನಿಂತಿದೆ. ಪ್ರತಿ ಶಾಸಕರಿಗೆ 25-30 ಕೋಟಿ ನೀಡಿ ಖರೀದಿ ಮಾಡಲು ಮುಂದಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಅಲ್ಲದೆ, ಬಿಜೆಪಿಗರು ಭ್ರಷ್ಟಾಚಾರಿಗಳಲ್ಲದೆ ಇದ್ದರೆ ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದ್ದರು.
ಸರ್ಕಾರ ಬೀಳಿಸುವ ಪ್ರಯತ್ನವನ್ನು ಹೊರತುಪಡಿಸಿ ವಿರೋಧಪಕ್ಷವಾಗಿ ಬಿಜೆಪಿ ಏನು ಮಾಡಿದೆ ಎಂದು ಸಿದ್ದರಾಮಯ್ಯ ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಸದಾನಂದಗೌಡ 'ಕೊಟ್ಟ ಕುದುರೆ ಏರಲಾರದವರು' ಎಂದು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಸಿದ್ದರಾಮಯ್ಯ ಸದಾನಂದಗೌಡ ಅವರು ಹನ್ನೊಂದು ತಿಂಗಳಿಗೇ ಮುಖ್ಯಮಂತ್ರಿ ಹುದ್ದೆಯಿಂದ ಓಡಿಹೋದವರಲ್ಲವೇ ಎಂದು ಲೇವಡಿ ಮಾಡಿದ್ದರು.
ಸಿದ್ದರಾಮಯ್ಯ ಅವರ ಟ್ವೀಟ್ಗೆ ಸಿಟ್ಟಿಗೆದ್ದ ಸದಾನಂದಗೌಡ ಸರಣಿ ಟ್ವೀಟ್ಗಳಲ್ಲಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
|
ಕುದುರೆ ಏರಲಾರದವನು...
ಕುದುರೆ ಏರಲಾರದವನು ಧೀರನೂ ಅಲ್ಲ ಶೂರನೂ ಅಲ್ಲ . ನಿಮ್ಮ ಪಕ್ಷದ ಹುಳುಕು ಮುಚ್ಚಿ ಹಾಕಿಕ್ಕೊಳ್ಳಲು ಇದೊಂದು ಹೊಸ ಪ್ರಹಸನ . ಮುಲಾಜಿನ ಸರಕಾರ ನಡೆಸಲು ಮುಖ್ಯಮಂತ್ರಿಗಳಿಗೆ ಕೈ ಜೋಡಿಸಿ. ಕನ್ನಡಿಗರು ಮುಗ್ಧರು, ಮೂರ್ಖರಲ್ಲ ನಿಮ್ಮ ಗಿಲೀಟು ಮಾತು ನಂಬಲು ಎಂದು ಸದಾನಂದಗೌಡ ಟ್ವಿಟ್ಟರ್ನಲ್ಲಿ ಕಿಡಿಕಾರಿದ್ದರು.
|
ಮುಖ್ಯಮಂತ್ರಿ ಸ್ಥಾನದಿಂದ ಓಡಿದವರು
ಸದಾನಂದಗೌಡ ಅವರೇ, ನಿಮ್ಮ ಅನುಭವವನ್ನು ಸರಿಯಾಗಿ ಹೇಳಿದ್ದೀರಿ. ಕುದುರೆ ಏರಲಾರದವನು ಶೂರನೂ ಅಲ್ಲ, ಧೀರನೂ ಅಲ್ಲ. ಎಷ್ಟೆಂದರೂ ಹನ್ನೊಂದು ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಓಡಿಹೋದವರಲ್ವೇ ನೀವು ಎಂದು ಸಿದ್ದರಾಮಯ್ಯ ಟಾಂಗ್ ನೀಡಿದ್ದರು.
|
ಎಚ್ ಡಿಕೆ ಸಿಎಂ ಆಗುದ್ದು ನಿಮ್ಮಿಂದ ಅಲ್ಲ
ಮಾನ್ಯ ಸಿದ್ದರಾಮಯ್ಯನವರ ಗಮನಕ್ಕೆ. 1) ಕಾಂಗ್ರೆಸ್ ಪಡೆದದ್ದು 78 ಕ್ಷೇತ್ರ. 2) ನೀವು ಚಾಮುಂಡೇಶ್ವರಿಯಲ್ಲಿ ಸೋತದ್ದು, ಬಾದಾಮಿಯಲ್ಲಿ ಕೆಲ ಮತಗಳಿಂದ ಗೆದ್ದಿದೀರಿ . 3) ನೀವು ಸದ್ಯಕ್ಕೆ ಮುಖ್ಯಮಂತ್ರಿ ಅಲ್ಲ. 4) ಶ್ರೀ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದದ್ದು ನಿಮ್ಮ ಹೈ ಕಮಾಂಡ್ ದೆಸೆಯಿಂದ, ನಿಮ್ಮಿಂದ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
|
ಸಮನ್ವಯ ಸಮಿತಿಗೆ ಸೀಮಿತ
5) ಸದ್ಯಕ್ಕೆ ನಿಮ್ಮ ಸ್ಥಾನ ಸಮನ್ವಯ ಸಮಿತಿಗೆ ಸೀಮಿತ ಅದು ಕೂಡಾ ಅದು ಅಸ್ತಿತ್ವದಲ್ಲಿ ಇದ್ದರೆ. 6) ನೀವು ಸದ್ಯಕ್ಕೆ ಉರುಳಿಸುತ್ತಿರುವ ರಾಜಕೀಯ ದಾಳ ಬಹಳ ಹಳೆಯದು. ಇನ್ನೊಬ್ಬರ ಮೇಲೆ ಆರೋಪ ಹೊರಿಸುವ ಮುನ್ನ ಬೆನ್ನು ನೋಡಿ. 7) ಮುಲಾಜಿನಲ್ಲಿ, ಹಗ್ಗದ ಮೇಲೆ ನಡೆಯುತ್ತಿರುವವರ ಕಾಲು ಎಳೆದು ಮುಸಿ ಮುಸಿ ನಗಬೇಡಿ ಎಂದು ಎರಡನೆಯ ಟ್ವೀಟ್ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
|
ಬೆಳವಣಿಗೆ ಮರೆತಂತಿದೆ
8) ಸಾಲ ಮನ್ನಾ ಏನಾಯಿತೆಂದು ಸ್ವಲ್ಪ ವಿಚಾರಿಸಿ 9) ಆಡಳಿತ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ನಿಮಗೆ ಸಿಕ್ಕಿದ್ದರೆ ನಾಡಿನ ಜನತೆಗೂ ತಿಳಿಸಿ. ಕಳೆದ 7 ತಿಂಗಳ ರಾಜಕೀಯ ಬೆಳವಣಿಗೆಗಳು ನೀವು ಮರೆತಂತೆ ನಿಮ್ಮ ವರ್ತನೆ ಸದ್ಯಕ್ಕಿದೆ. ಹಾಗಾಗಿ ಮತ್ತೊಮ್ಮೆ ಜ್ಞಾಪಿಸೋಣ ಅಂದುಕೊಂಡೆ ಎಂದು ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.
|
ಅಸಹನೆ ಶುರುವಾಗಿದ್ದು ಎಲ್ಲಿಂದ?
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಸದಾನಂದಗೌಡ, ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮರಾಜಕಾರಣದ ಬಗ್ಗೆ ಟೀಕೆ ಮಾಡಿದಾಗ ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಲಾಗದಷ್ಟು ಅಸಹನೆ ನಿಮಗೆ ಶುರುವಾಗಿದ್ದು ಯಾವಾಗ? ಚಾಮುಂಡೇಶ್ವರಿ ಸೋಲಿನ ಪರಿಣಾಮವೇ? ಅಥವಾ ಮುಖ್ಯಮಂತ್ರಿ ಕುರ್ಚಿ ಕಳೆದುಕೊಂಡ ಮನಸ್ಥಿತಿಯೇ? ಎಂದು ಪ್ರಶ್ನಿಸಿದ್ದರು.












Click it and Unblock the Notifications