ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಿದ್ಧಗಂಗಾ ಶ್ರೀಗಳು ಬೆಂಬಲ : ಎಂಬಿ ಪಾಟೀಲ್
ಬೆಂಗಳೂರು, ಸೆಪ್ಟೆಂಬರ್ 10: ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಬೆಂಬಲ ನೀಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಇಂದು ಸಂಜೆ 4.30ಕ್ಕೆ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಎಂಬಿ ಪಾಟೀಲ್ ಈ ವಿವರ ಬಹಿರಂಗಪಡಿಸಿದರು.

"ಇಂದು ಸಿದ್ಧಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನೆಗೆ ತೆರಳಿದ ವೇಳೆ ಸಿದ್ಧಗಂಗಾ ಶ್ರೀಗಳು ಭೇಟಿಯಾಗಿದ್ದೆ. ಸ್ವತಂತ್ರ ಲಿಂಗಾಯತ ಧರ್ಮದ ಬಗ್ಗೆ ಅವರ ಅಭಿಪ್ರಾಯ ಏನಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲವಿತ್ತು. ಈ ಸಂದರ್ಭ ಅವರ ಬಳಿ ಕೇಳಿದಾಗ 'ಸ್ವತಂತ್ರ ಲಿಂಗಾಯತ ಧರ್ಮ' ಆಗಬೇಕು ಎಂದಿದ್ದಾರೆ," ಎಂಬುದಾಗಿ ಎಂಬಿ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
"ಇನ್ನು ಇದೇ ಸಂದರ್ಭದಲ್ಲಿ ಲಿಂಗಾಯತ - ವೀರಶೈವ ಒಂದೇನಾ ಎಂಬುದಾಗಿ ಕೇಳಿದ್ದಕ್ಕೆ, ಕೇವಲ ಲಿಂಗಾಯತ ಧರ್ಮ ಎಂದು ಹೇಳಿದ್ದಾರೆ," ಎಂದು ಪಾಟೀಲ್ ವಿವರ ನೀಡಿದರು.

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಶಿವಕುಮಾರ ಶ್ರೀಗಳಿಗಿಂತ ಮೇಲು ಯಾರೂ ಇಲ್ಲ. ಅವರ ಮಾರ್ಗದರ್ಶನದಂತೆ ಮುಂದುವರಿಯುತ್ತೇವೆ. ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಎಂಬಿ ಪಾಟೀಲ್ ಮಾಹಿತಿ ನೀಡಿದರು.
ಶಿವಕುಮಾರ ಸ್ವಾಮೀಜಿಗಳು ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಬೆಂಬಲ ಸೂಚಿಸಿರುವುದರಿಂದ, 'ಇಂದು ನನ್ನ ಜೀವನದ ಮರೆಯಲಾರದ ಕ್ಷಣ' ಎಂದು ಪಾಟೀಲ್ ಸಂತೋಷ ಭರಿತರಾಗಿ ಹೇಳಿದರು.












Click it and Unblock the Notifications