ಸಂಸತ್ನಲ್ಲಿ ಐಎಂಎ ಹಗರಣ ಪ್ರಸ್ತಾಪಿಸಿದ ಶೋಭಾ ಕರಂದ್ಲಾಜೆ
ಬೆಂಗಳೂರು, ಜೂನ್ 27 : 'ಐಎಂಎ ಹಗರಣದ ರೂವಾರಿ ಮನ್ಸೂರ್ ಖಾನ್ ಜೊತೆ ಕರ್ನಾಟಕ ಸರ್ಕಾರ ಶಾಮೀಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಜೊತೆ ಆತ ಬಾಂಧವ್ಯ ಹೊಂದಿದ್ದ' ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಗುರುವಾರ ಸಂಸತ್ನಲ್ಲಿ ಶೋಭಾ ಕರಂದ್ಲಾಜೆ ಅವರು ಐಎಂಎ ಹಗರಣದ ಕುರಿತು ವಿಷಯ ಪ್ರಸ್ತಾಪಿಸಿದರು, 'ಕರ್ನಾಟಕ ಸರ್ಕಾರ ರಚನೆ ಮಾಡಿರುವ ಎಸ್ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ. ಎಸ್ಐಟಿ ತನಿಖೆಯಲ್ಲಿ ನಂಬಿಕೆ ಇಲ್ಲ. ಹಗರಣದ ಕುರಿತು ಸಿಬಿಐ ತನಿಖೆಯಾಗಬೇಕು' ಎಂದು ಒತ್ತಾಯಿಸಿದರು.
'ಐಎಂಎ ಮುಖ್ಯಸ್ಥ ಹೆಚ್ಚಿನ ಲಾಭ ನೀಡುವ ಆಮಿಷವೊಡ್ಡಿ ಜನರಿಂದ ಹಣವನ್ನು ಪಡೆದಿದ್ದ. ಜನರು ಹೂಡಿಕೆ ಮಾಡಿರುವ ಹಣದೊಂದಿಗೆ ಆತ ಪರಾರಿಯಾಗಿದ್ದಾನೆ. ಎರಡು ತಿಂಗಳಿನಿಂದ ಆತ ನಾಪತ್ತೆಯಾಗಿದ್ದಾನೆ' ಎಂದು ಹೇಳಿದರು.

'ಐಎಂಎ ಹಗರಣದಲ್ಲಿ 15 ಸಾವಿರ ಕೋಟಿಗೂ ಅಧಿಕ ವಂಚನೆ ನಡೆದಿದೆ. ಇದುವರೆಗೂ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 40 ಸಾವಿರ ದೂರುಗಳು ದಾಖಲಾಗಿವೆ' ಎಂದು ಶೋಭಾ ಕರಂದ್ಲಾಜೆ ಅವರು ಸಂಸತ್ನಲ್ಲಿ ವಿಷಯ ಪ್ರಸ್ತಾಪಿಸಿದರು.
'ಸಣ್ಣ ವ್ಯಾಪಾರಿಗಳು, ಆಟೋ ಚಾಲಕರು ಸೇರಿದಂತೆ ಬಡ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಾಗಿ ಐಎಂಎನಲ್ಲಿ ಹಣ ಹೂಡಿಕೆ ಮಾಡಿದ್ದರು. ಮಗಳ ಮದುವೆ, ಮಕ್ಕಳ ವಿದ್ಯಾಭ್ಯಾಸ ಮುಂತಾದ ಕಾರಣಗಳಿಗೆ ಹಣ ಇಟ್ಟವರು ಈಗ ಆತಂಕಗೊಂಡಿದ್ದಾರೆ' ಎಂದರು.
'ಕರ್ನಾಟಕ ಸರ್ಕಾರ ಐಎಂಎ ಹಗರಣದಲ್ಲಿ ಶಾಮೀಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ನ ನಾಯಕರು ಮನ್ಸೂರ್ ಅಲಿ ಖಾನ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಮನ್ಸೂರ್ ಅಲಿ ಖಾನ್ ದುಬೈನಲ್ಲಿ ಕುಳಿತುಕೊಂಡು ವಿಡಿಯೋ ಬಿಡುಗಡೆ ಮಾಡಿದ್ದು ಹಲವು ನಾಯಕರ ಹೆಸರು ಹೇಳಿದ್ದಾನೆ' ಎಂದು ಶೋಭಾ ಕರಂದ್ಲಾಜೆ ಹೇಳಿದರು.
'ಮನ್ಸೂರ್ ಅಲಿಖಾನ್ ಅವರ ಸಂಬಂಧ ಭಯೋತ್ಪಾದಕರ ಜೊತೆಗೂ ಇದೆ. ಕರ್ನಾಟಕ ಸರ್ಕಾರ ಈ ಹಗರಣದ ತನಿಖೆಗೆ ಎಸ್ಐಟಿ ರಚನೆ ಮಾಡಿದೆ. ಸರ್ಕಾರವೇ ಇದರಲ್ಲಿ ಶಾಮೀಲಾಗಿದೆ. ಆದ್ದರಿಂದ, ಜನರಿಗೆ ಎಸ್ಐಟಿ ಮೇಲೆ ನಂಬಿಕೆ ಇಲ್ಲ. ಹಗರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು' ಎಂದು ಆಗ್ರಹಿಸಿದರು.












Click it and Unblock the Notifications