ಮೀನು ಕೃಷಿಗೆ ಗಾಳ ಹಾಕಿದ ಕಲಬುರಗಿ ರೈತ ಮಹಿಳೆ
ಕಲಬುರಗಿ, ಜುಲೈ, 22 : ಸಾಧನೆಯ ಛಲವೊಂದಿದ್ದರೆ ಸಾಕು.ಮಾಡುವ ಕಾರ್ಯದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ಬಿಸಿಲ ನಾಡಿನ ರೈತ ಮಹಿಳೆಯೊಬ್ಬರು ಮೀನು ಕೃಷಿ ಪ್ರಯೋಗ ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ಅಫಜಲಪುರ ತಾಲೂಕಿನ ಭೀಮಾ ನದಿ ತೀರದ ಕೆರಕನಹಳ್ಳಿ ಗ್ರಾಮದ ಶೋಭಾ ವೀರಭದ್ರ ಪಾಟೀಲ್ .ಇವರು ಸವಳು ಭೂಮಿಯಲ್ಲಿ ಮೀನು ಕೃಷಿಯತ್ತ ಚಿತ್ತ ಹರಿಸಿದ್ದು ಇಲಾಖಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮೀನು ಸಾಕಾಣಿಕೆ ಮಾಡಿಕೊಂಡು ವರ್ಷಕ್ಕೆ 14-15 ಲಕ್ಷ ಹಣ ಗಳಿಸುವ ಯೋಜನೆ ಹಾಕಿಕೊಂಡಿದ್ದಾರೆ.[ಚಿತ್ರಗಳು : ಮಂಗಳೂರಿನ ಪಿಲಿಕುಳದಲ್ಲಿ ಮೀನು ಮೇಳ]
ಭೀಮಾ ನದಿ ತಟದಲ್ಲಿ ಇರುವ 40 ಎಕರೆ ಭೂಮಿಯಲ್ಲಿ 20 ಎಕರೆ ಸಂಪೂರ್ಣ ಸವಳು ಭೂಮಿ ಮತ್ತು ನಿರುಪಯುಕ್ತವಾಗಿತ್ತು. ಯಾವುದೇ ಬೆಳೆ ತೆಗೆಯಲು ಸಾಧ್ಯವಾಗದಿರುವುದರಿಂದ ತೀವ್ರ ಹತಾಶರಾಗಿದ್ದರು. ಬಳಿಕ ಶೋಭಾ ಅವರು ಮೀನು ಕೃಷಿ ಮಾಡಲು ನಿರ್ಧಾರ ತೆಗೆದುಕೊಂಡು ಇಲಾಖಾ ಅಧಿಕಾರಿಗಳ ತಾಂತ್ರಿಕ ಮಾರ್ಗದರ್ಶನ ಪಡೆದು ತಮ್ಮ 2 ಹೆಕ್ಟೇರ್ ಭೂಮಿಯಲ್ಲಿ 4 ಹೊಂಡಗಳನ್ನು ನಿರ್ಮಿಸಿಕೊಂಡು ಇದೀಗ ಕಟ್ಲಾ, ರೂಹು, ಕಾಮನ್ ಕಾರ್ಪ್ ತಳಿಯ 20,000 ಮೀನುಗಳನ್ನು ಸಲಹುತ್ತಿದ್ದಾರೆ.
ಮೀನು ಕೃಷಿಗೆ ಫಲವತ್ತಾದ ಭೂಮಿ ಬೇಕಿಲ್ಲ. ಒಬ್ಬ ವ್ಯಕ್ತಿ ಎಲ್ಲವನ್ನು ನಿರ್ವಹಣೆ ಮಾಡಬಹುದು. ಬರಡು, ಸವಳು ಮತ್ತು ನಿರುಪಯುಕ್ತ ಭೂಮಿಯಲ್ಲಿಯೂ ಸಾಂಪ್ರದಾಯಿಕ ಕಬ್ಬು, ತೊಗರಿ ಮುಂತಾದ ಬೆಳೆಗಳಿಗೆ ಪರ್ಯಾಯವಾಗಿ ಮೀನು ಕೃಷಿ ಕೈಗೊಂಡು ಲಾಭ ಪಡೆಯಬಹುದು. 1 ಹೆಕ್ಟೇರ್ ಭೂಮಿಯಲ್ಲಿ ಇದನ್ನು ನಿರ್ವಹಿಸಿದ್ದಲ್ಲಿ 4 ಲಕ್ಷ ಪಡೆಯಬಹುದು. ಮೀನು ಕೃಷಿಗಾಗಿ ಸಾಮಾನ್ಯವರ್ಗದವರಿಗೆ 1.60 ಲಕ್ಷ ಮತ್ತು ಎಸ್ ಸಿ ಎಸ್ಟಿ ಅವರಿಗೆ 2 ಲಕ್ಷದವರೆಗೂ ಸಹಾಯ ಧನ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಮೀನುಪ್ರಿಯರ ಜಿಹ್ವಾ ಚಾಪಲ್ಯ ತಣಿಸಲು ಮತ್ಸ್ಯ ಭವನ]
ಶೋಭಾ ಪಾಟೀಲ್ ಅವರಿಗೆ 3.20 ಲಕ್ಷ ರೂ ಸಹಾಯ ಧನ ಹಾಗೂ ಇಲಾಖೆಯಿಂದ ತಾಂತ್ರಿಕ ನೆರವು ಮತ್ತು ಮಾರ್ಗದರ್ಶನ ಒದಗಿಸುವ ಮೂಲಕ ಇದನ್ನು ಜಿಲ್ಲೆಯ ಮಾದರಿ ಪ್ರಾತ್ಯಕ್ಷಿಕೆ ಕ್ಷೇತ್ರವನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಹಿರಿಯ ನಿರ್ದೇಶಕ ಹರೀಶಕುಮಾರ ಹೇಳಿದ್ದಾರೆ. ಕಲಬುರಗಿಯಲ್ಲಿ ಒಟ್ಟು 64 ಇಲಾಖಾ ಕೆರೆಗಳು, 5 ಜಲಾಶಯಗಳು, 9 ನದಿ ಪ್ರದೇಶಗಳಿದ್ದು, ಒಟ್ಟು 7550 ಹೆಕ್ಟೇರ್ ಜಲ ಪ್ರದೇಶ ಮೀನು ಕೃಷಿಗೆ ಯೋಗ್ಯವಾಗಿದೆ ಎಂದು ತಿಳಿಸಿದ್ದಾರೆ.