ಶಿರಾಡಿ ಘಾಟ್: ಘಟಾನುಗಟಿ ಜನಪ್ರತಿನಿಧಿಗಳಿದ್ದರೂ ಏನು ಪ್ರಯೋಜನ?
ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಂತಿರುವ ಶಿರಾಡಿ ಘಾಟ್ ಬೇಡವಾದ ವಿಚಾರಕ್ಕೇ ಹೆಸರುವಾಸಿಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಒಂದೋ ಟ್ಯಾಂಕರ್ ಪಲ್ಟಿ ಹೊಡೆದು ರಸ್ತೆ ಸಂಚಾರ ಗಂಟೆಗಟ್ಟಲೆ ಬಂದ್ ಆಗುವುದು ಇಲ್ಲವೇ ಎರಡು, ಮೂರು ತಿಂಗಳಿಗೊಮ್ಮೆ ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಗುಂಡಿ ಬಿದ್ದು ಸುದ್ದಿಯಾಗುವುದು, ಅದೂ ಇಲ್ಲದಿದ್ದರೆ ಅಪಘಾತ ಸಂಭವಿಸುವುದು.
ಶಿರಾಡಿ ಘಾಟ್ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದುವರೆಗೆ ಅದೆಷ್ಟು ದುಡ್ಡು ಸುರಿದಿದೆಯೋ, ಅದರಲ್ಲಿ ಎಷ್ಟು ಸಾರ್ವಜನಿಕ ಸಂಚಾರಕ್ಕೆ ಸದ್ಬಳಕೆಯಾಗಿದೆಯೋ ದೇವರೇ ಬಲ್ಲ. (ಶಿರಾಡಿ ಸಂಚಾರಕ್ಕೆ ಹೊಸ ಮಹೂರ್ತ)
ಕರಾವಳಿ ಭಾಗದಲ್ಲಿ ಘಟಾನುಗಟಿ ಜನಪ್ರತಿನಿಧಿಗಳು ಇದ್ದರೂ ಶಿರಾಡಿ ಘಾಟ್ ದುರ್ವ್ಯವಸ್ಥೆಗೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ನಮ್ಮ ಶಾಸಕರಾಗಲಿ, ಎಂಪಿಗಳಾಗಲಿ ಮನಸ್ಸು ಮಾಡದೇ ಇರುವುದೇ ಇಲ್ಲಿ ಎದ್ದು ಕಾಣುವ ಕೊರತೆ.
ಶಿರಾಡಿ ಘಾಟ್ ಮುಕ್ತ ಸಂಚಾರಕ್ಕೆ ಫೋರ್ ವೇ ಟ್ರ್ಯಾಕ್, ಸುರಂಗ ಮಾರ್ಗ ಎಂದು ಆಯಾಯ ಪಕ್ಷಗಳ ಕಾಲಘಟ್ಟದಲ್ಲಿ ಜನರ ಕಿವಿಗೆ ಹೂ ಮುಡಿಸಿದವರೇ ಹೆಚ್ಚು. ಸುರಂಗ ಮಾರ್ಗ ಹಾಗಿರಲಿ ಕನಿಷ್ಠ ಸರಿಯಾದ ಕಾಂಕ್ರೀಟು ದಾರಿ ನಿರ್ಮಿಸಲೂ ಇವರಿಗೆ ಆಸಕ್ತಿ ಇದ್ದಂತಿಲ್ಲ.
ಕಳೆದ ಐದಾರು ತಿಂಗಳಿನಿಂದ ಮತ್ತೆ ಹೊಸ ರೂಪ ತೋರಲು ಶಿರಾಡಿ ಘಾಟ್ ಬಂದ್ ಆಗಿದೆ. ಹದಿಮೂರು ಕಿಲೋಮೀಟರ್ ಕಾಂಕ್ರಿಟ್ ರಸ್ತೆ ಕಾಮಗಾರಿಗಾಗಿ ಶಿರಾಡಿ ಘಾಟಿಯಲ್ಲಿ 2015ರ ಜನವರಿ 2ರಿಂದ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು.
2015ರ ಮೇ 15ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಮೊದಲು ಹೊಂದಲಾಗಿತ್ತು, ನಂತರ ಜೂನ್ ಒಂದನೇ ತಾರೀಕು, ನಂತರ ಜೂನ್ ಹದಿನೈದು, ಅದಾದ ನಂತರ ಆಗಸ್ಟ್ 1 ಎಂದು ಗಡುವು ನಿಗದಿಯಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ/ ಇನ್ನು ಒಂದುವರೆ ತಿಂಗಳಲ್ಲಿ ಪೂರ್ಣಗೊಳ್ಳುವ ಲಕ್ಷಣಗಳೂ ಕಾಣಿಸುತ್ತಿಲ್ಲ. (ಶಿರಾಡಿಘಾಟ್ ರಸ್ತೆ ರಿಪೇರಿಗೆ ಇನ್ನೆಷ್ಟು ದಿನ ಬೇಕು)
ದುರಸ್ತಿ ಕೆಲಸ ಆರಂಭವಾದಾಗಿನಿಂದ ಸಾರ್ವಜನಿಕ ಸಂಚಾರಕ್ಕೆ ಶಿರಾಡಿ ಘಾಟ್ ಇಂದು, ನಾಳೆ ಮುಕ್ತವಾಗಲಿದೆ ಎಂದು ಜನಪ್ರತಿನಿಧಿಗಳು ಎಲುಬಿಲ್ಲದ ನಾಲಿಗೆಯಂತೆ ಡೇಟ್ಸ್ ನೀಡುತ್ತಲೇ ಬರುತ್ತಿದ್ದಾರೆ. ಜೊತೆಗೆ ಮಳೆಯ ಅಡ್ಡಿ ಬಂತೆಂದು ಸಬೂಬು ನೀಡುತ್ತಾರೆ.
ಶಿರಾಡಿ ಘಾಟ್ ಬಂದ್ ಆದ ಮೇಲೆ ಈ ಭಾಗಕ್ಕೆ ಹೋಗುವ ಪ್ರಯಾಣಿಕರು ಕನಿಷ್ಠ ಎರಡು ಗಂಟೆ ಹೆಚ್ಚಿನ ಪ್ರಯಾಣದ ತ್ರಾಸ ಅನುಭವಿಸಬೇಕಾಗುತ್ತದೆ. ದ.ಕ, ಹಾಸನ ಅಥವಾ ಉಡುಪಿ ಜಿಲ್ಲೆ ತಲುಪಲು ಇತರ ಪರ್ಯಾಯ ದಾರಿಗಳಿದ್ದರೂ ಇದು ಅನುಕೂಲಕ್ಕಿಂತ, ಅನಾನುಕೂಲವೇ ಹೆಚ್ಚು.
ರಾತ್ರಿಯಿಡೀ ಪ್ರಯಾಣಿಸ ಬೇಕಾಗಿರುವುದರಿಂದ ಪ್ರಮುಖವಾಗಿ ಮಹಿಳೆಯರಿಗೆ ಕನಿಷ್ಠ ಪ್ರಕೃತಿ ಕರೆಗೆ ನಿಲ್ಲಿಸಲೂ ಸೂಕ್ತ ಜಾಗ ಇಲ್ಲದಿರುವುದು ಖುದ್ದು ಬಸ್ ಡ್ರೈವರಿಗೇ ಬೇಸರ ತರುತ್ತಿರುವುದು ವಾಸ್ತವತೆ.
(ಚಿತ್ರಕೃಪೆ: ಮಂಜು ನೀರೇಶ್ವಾಲ್ಯ)
ಮೊನ್ನೆ ಮಂಗಳೂರು ಎಂಪಿ ನಳಿನ್ ಕುಮಾರ್ ಕಟೀಲ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆಗಸ್ಟ್ ಹದಿನೈದಕ್ಕೆ ಘಾಟಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೊಸ ಡೇಟ್ ನೀಡಿದ್ದಾರೆ.
ರಾಜ್ಯದ ನಂಬರ್ ಒನ್ ಎಂಪಿ ಎಂದು ಜನಮನ್ನಣೆಗಳಿಸಿರುವ ಕಟೀಲ್ ಅವರು ಈ ವಿಚಾರದಲ್ಲಿ ಸ್ಪೆಷಲ್ ಇಂಟರೆಸ್ಟ್ ತೋರಬೇಕಾಗಿದೆ. (ಆಗಸ್ಟ್ 15ರಿಂದ ಶಿರಾಡಿ ಘಾಟ್ ಮುಕ್ತ)
ಇನ್ನು ಮಳೆಗಾಲ ಶುರುವಾಗಿದೆ. ಈ ಭಾಗದ ಮಳೆ ಅಂದ್ರೆ ಕೇಳಬೇಕಾ? ಮಳೆಗಾಲ ಅನ್ನೋ ರೀಸನ್ ಹೇಳಿ ಶಿರಾಡಿ ಘಾಟಿ ಸಂಚಾರವನ್ನು ನವರಾತ್ರಿಗೆ ಮುಂದೂಡಿದರೆ ದೇವರೇ ಗತಿ.
ಇಲ್ಲಿ ಪ್ರಮುಖವಾಗಿ ಬೇಕಾಗಿರುವುದು ಆದಷ್ಟು ಬೇಗ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮುಗಿಸುವ ಮನಸ್ಥಿತಿ ಸಂಬಂಧಪಟ್ಟ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಬೇಕಾಗಿರುವುದು, ಅದರ ಕೊರತೆಯೇ ಇಲ್ಲಿರುವುದು.