ಹೊಸ ಬೇಡಿಕೆಯೊಂದಿಗೆ ಮೊಬೈಲ್ ಟವರ್ ಏರಿದ ಶಿಗ್ಲಿ ಬಸ್ಯಾ!
Recommended Video

ಹಾವೇರಿ, ಅಕ್ಟೋಬರ್ 25 : ವಿನೂತನ ಪ್ರತಿಭಟನೆಯಿಂದ ಸುದ್ದಿ ಮಾಡುವ ಶಿಗ್ಲಿ ಬಸ್ಯಾ ಹಾವೇರಿಯಲ್ಲಿ ಮೊಬೈಲ್ ಟವರ್ ಏರಿ ಕುಳಿತಿದ್ದಾನೆ. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಕುಳಿತು ಬುಧವಾರ ಬೆಳಗ್ಗೆ ಹೈಡ್ರಾಮ ಮಾಡುತ್ತಿದ್ದಾನೆ.
ಹಾವೇರಿ ಜಿಲ್ಲಾ ನ್ಯಾಯಾಲಯದಲ್ಲಿರುವ 307 ಕೇಸ್ ವಿಚಾರಣೆಯನ್ನು ಮಾಧ್ಯಮದವರ ಮುಂದೆಯೇ ನಡೆಸಬೇಕು ಎಂದು ಶಿಗ್ಲಿ ಬಸ್ಯಾ ಬೇಡಿಕೆ ಇಟ್ಟಿದ್ದಾನೆ. ಬೇಡಿಕೆ ಈಡೇರದಿದ್ದರೆ ಕೆಳಗೆ ಜಿಗಿಯುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾನೆ.

2011ರಲ್ಲಿ ನ್ಯಾಯಾಲಯದ ಆವರಣದಲ್ಲಿಯೇ ವಕೀಲ ವಿರೇಶ್ ಚಾಲವಾಡಿ ಬೆರಳು ಕಚ್ಚಿ ಶಿಗ್ಲಿ ಬಸ್ಯಾ ಆವಾಂತರ ಮಾಡಿದ್ದರು. ಈ ಘಟನೆ ನಂತರ ಬಸ್ಯಾ ವಿರುದ್ಧ 307 (ಕೊಲೆ ಮಾಡಲು ಯತ್ನ) ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ನನ್ನ ಪರವಾಗಿ ನಾನೇ ವಾದ ಮಾಡುತ್ತೇನೆ ಎಂಬುದು ಬಸ್ಯಾ ಹಠ. 'ನಾನು ವಾದ ಮಾಡುತ್ತೇನೆ. ಗೆಲ್ಲುವ ವಿಶ್ವಾನ ನನಗಿದೆ. ಮಾಧ್ಯಮದವರಿಗೆ ನನ್ನ ವಾದ ನೋಡಲು ಅವಕಾಶ ನೀಡಬೇಕು. ಅವರನ್ನು ಕೋರ್ಟ್ ಹಾಲ್ವೊಳಗೆ ಬಿಡಬೇಕು' ಎಂಬ ಬೇಡಿಕೆ ಮುಂದಿಟ್ಟುಕೊಂಡು ಬಸ್ಯಾ ಟವರ್ ಏರಿ ಕೂತಿದ್ದಾನೆ.
ಯಾರು ಈ ಶಿಗ್ಲಿ ಬಸ್ಯಾ? : ಶಿಗ್ಲಿ ಬಸ್ಯಾ ಮೂಲತಃ ಧಾರವಾಡ ಮೂಲದವರು. ಇವರ ಹೆಸರು ಬಸವರಾಜ ಬೆಲಗಜ್ಜರಿ. ಆದರೆ, ಜಿಲ್ಲೆಯಾದ್ಯಂತ ಶಿಗ್ಲಿ ಬಸ್ಯಾ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಹಿಂದೊಮ್ಮೆ ಹುಣಸೇಮರವೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಸುದ್ದಿ ಮಾಡಿದ್ದರು.
'ಈ ಹಿಂದೆ ನಾನು ಮನೆ ಕಳ್ಳತನ ಮಾಡುತ್ತಿದ್ದೆ. ಆದರೆ, ಪೊಲೀಸರು ಕದ್ದಿರುವುದಕ್ಕಿಂತ ಹೆಚ್ಚಿಗೆ ಬರೆದು ನನ್ನ ಮೇಲೆ ಸುಳ್ಳು ಮೊಕದ್ದಮೆ ಹಾಕುತ್ತಿದ್ದರು. ಈ ರೀತಿಯ 224 ಸುಳ್ಳು ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ನನ್ನ ಪರವಾಗಿ ನಾನೇ ವಾದ ಮಾಡಿ ಖುಲಾಸೆಗೊಂಡಿದ್ದೇನೆ' ಎಂದು ಶಿಗ್ಲಿ ಬಸ್ಯಾ ಹೇಳುತ್ತಾರೆ.












Click it and Unblock the Notifications