ಶತಾಬ್ದಿ, ವಂದೇ ಭಾರತ್ ರೈಲು; ವೇಳಾಪಟ್ಟಿ ಬದಲಿಸಲು ಆಗ್ರಹ
ಬೆಂಗಳೂರು, ನವೆಂಬರ್ 13; ದಕ್ಷಿಣ ಭಾರತದ ಮೊದಲ ಮತ್ತು ದೇಶದ 5ನೇ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದ್ದಾರೆ. ಈಗ ವಂದೇ ಭಾರತ್ ಮತ್ತು ಶತಾಬ್ದಿ ಒಟ್ಟಿಗೆ ಚಲಿಸುತ್ತಿವೆ, ವೇಳಾಪಟ್ಟಿ ಬದಲಾವಣೆ ಮಾಡಲು ಆಗ್ರಹಿಸಲಾಗುತ್ತಿದೆ.
ವಂದೇ ಭಾರತ್ ರೈಲು ಮೈಸೂರು, ಬೆಂಗಳೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ನಡುವೆ ಸಂಚಾರ ನಡೆಸುತ್ತಿದೆ. ನರೇಂದ್ರ ಮೋದಿ ಬೆಂಗಳೂರಿನ ಕೆ. ಎಸ್. ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಶುಕ್ರವಾರ ರೈಲಿಗೆ ಹಸಿರು ನಿಶಾನೆ ತೋರಿಸಿದರು.
Vande Bharat Train; ಬೆಂಗಳೂರು-ಹುಬ್ಬಳ್ಳಿ ವೇಳಾಪಟ್ಟಿ ಕೇಳಿದ ಮಂಡಳಿ
ಕರ್ನಾಟಕ ರೈಲ್ವೆ ವೇದಿಕೆ ಈಗ ವಂದೇ ಭಾರತ್ ಮತ್ತು ಶತಾಬ್ದಿ ಒಟ್ಟಿಗೆ ಚಲಿಸುತ್ತಿವೆ ರೈಲಿನ ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದೆ. ವೇಳಾಪಟ್ಟಿ ಬದಲಾಯಿಸಿದರೆ ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸಬಹುದು ಎಂದು ವೇದಿಕೆ ಹೇಳಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ಚೆನ್ನೈ-ಮೈಸೂರು ಮಾರ್ಗದ ಸಮಯ, ನಿಲ್ದಾಣಗಳ ವಿವರಗಳು
ಮೈಸೂರು-ಚೆನ್ನೈ ಬಹು ಬೇಡಿಕೆಯ ಮಾರ್ಗವಾಗಿದೆ. ಕರ್ನಾಟಕ ರೈಲ್ವೆ ವೇದಿಕೆ ಅಧ್ಯಕ್ಷ ಕೆ. ಎನ್. ಕೃಷ್ಣ ಪ್ರಸಾದ್ ವಂದೇ ಭಾರತ್ ರೈಲು ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ರೈಲು ಸದ್ಯ ಬುಧವಾರ ಹೊರತುಪಡಿಸಿ ಉಳಿದ ದಿನ ಸಂಚಾರ ನಡೆಸುತ್ತಿದೆ.
ಚೆನ್ನೈನಿಂದ ಮೈಸೂರಿಗೆ ಬಂದು ಸೇರಿದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು
ವಂದೇ ಭಾರತ್ ಮತ್ತು ಶತಾಬ್ದಿ
ಸದ್ಯದ ವೇಳಾಪಟ್ಟಿ ಪ್ರಕಾರ ವಂದೇ ಭಾರತ್ ರೈಲು ಚೆನ್ನೈನಿಂದ ಬೆಳಗ್ಗೆ 5.50ಕ್ಕೆ ಹೊರಡಲಿದೆ. ಈ ರೈಲು ಹೊರಟ 10 ನಿಮಿಷದ ಬಳಿಕ ಅಂದರೆ ಶತಾಬ್ದಿ ರೈಲು 6 ಗಂಟೆಗೆ ಹೊರಡಲಿದೆ.
ವಾಪಸ್ ಸಂಚಾರ ನಡೆಸುವ ಮಾರ್ಗದಲ್ಲಿ ಮೈಸೂರಿನಿಂದ ವಂದೇ ಭಾರತ್ ರೈಲು ಮಧ್ಯಾಹ್ನ 1.05ಕ್ಕೆ ಹೊರಡಲಿದೆ. ಇದಕ್ಕಿಂತ ಒಂದು ಗಂಟೆ ಮೊದಲು ಶತಾಬ್ದಿ ಹೊರಡಲಿದೆ. ಇದರಿಂದಾಗಿ ವೇಳಾಪಟ್ಟಿ ಬದಲಿಸಬೇಕು ಎಂದು ಆಗ್ರಹಿಸಲಾಗುತ್ತಿದೆ.
ಶತಾಬ್ದಿಗೂ ಬೇಡಿಕೆ ಹೆಚ್ಚಿದೆ
ಕರ್ನಾಟಕ ರೈಲ್ವೆ ವೇದಿಕೆಯ ಪ್ರಕಾರ ಮೈಸೂರು-ಚೆನ್ನೈ ಬಹುಬೇಡಿಕೆಯ ಮಾರ್ಗ. ಉಭಯ ನಗರಗಳ ನಡುವೆ ಸಂಚಾರ ನಡೆಸುವ ಶತಾಬ್ದಿ ರೈಲಿಗೂ ಭಾರೀ ಬೇಡಿಕೆ ಇದೆ. ಅದರಲ್ಲೂ ದರ ಕಡಿಮೆ ಮಾಡಿದ ಮೇಲೆ ಹೆಚ್ಚಿನ ಜನರು ಸಂಚಾರ ನಡೆಸುತ್ತಾರೆ. ಈಗ ವಂದೇ ಭಾರತ್ ರೈಲು ಸಹ ಶತಾಬ್ದಿ ರೈಲಿನ ವೇಳಾಪಟ್ಟಿಯ ಸಂದರ್ಭದಲ್ಲಿಯೇ ಚಲಿಸುತ್ತದೆ. ವೇಳಾಪಟ್ಟಿ ಬದಲಾವಣೆ ಮಾಡುವುದರಿಂದ ಜನರನ್ನು ಆಕರ್ಷಿಸಲು ಸಹಾಯಕವಾಗುತ್ತದೆ ಎಂದು ವೇದಿಕೆ ಹೇಳಿದೆ.
ಡಬಲ್ ಡೆಕ್ಕರ್ ರೈಲಿಗೆ ಬೇಡಿಕೆ ಇಲ್ಲ
ಈಗಾಗಲೇ ಬೆಂಗಳೂರು-ಚೆನ್ನೈ ನಡುವಿನ ಡಬಲ್ ಡೆಕ್ಕರ್ ರೈಲಿಗೆ ಬೇಡಿಕೆ ಇಲ್ಲ. ವಂದೇ ಭಾರತ್ ಮತ್ತು ಶತಾಬ್ದಿಗೆ ಇರುವ ಬೇಡಿಕೆಯ ಕಾರಣ ಡಬಲ್ ಡೆಕ್ಕರ್ ರೈಲು ಇನ್ನೂ ಬೇಡಿಕೆ ಕಳೆದುಕೊಳ್ಳಲಿದೆ. ಆದ್ದರಿಂದ ಈ ಎರಡೂ ರೈಲಿನ ವೇಳಾಪಟ್ಟಿ ಬದಲಾಯಿಸಿ, ಜನರಿಗೆ ಅನುಕೂಲ ಮಾಡಿಕೊಡಿ ಎಂದು ಕರ್ನಾಟಕ ರೈಲ್ವೆ ವೇದಿಕೆ ಆಗ್ರಹಿಸಿದೆ. ಆದರೆ ವೇಳಾಪಟ್ಟಿ ಬದಲಾವಣೆ ಬಗ್ಗೆ ಇನ್ನೂ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇಲಾಖೆ ವಕ್ತಾರರು ಹೇಳುವುದೇನು?
ನೈಋತ್ಯ ರೈಲ್ವೆ ವಕ್ತಾರ ಅನೀಶ್ ಹೆಗ್ಡೆ ಕರ್ನಾಟಕ ರೈಲ್ವೆ ವೇದಿಕೆಯ ಆಗ್ರಹದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಂದೇ ಭಾರತ್ ಮತ್ತು ಶತಾಬ್ದಿ ವೇಳಾಪಟ್ಟಿ ಬದಲಾವಣೆ ಬಗ್ಗೆ ನಾವು ಪ್ರಯಾಣಿಕರಿಂದ ಸಲಹೆ ಆಹ್ವಾನಿಸುತ್ತೇವೆ. ವಂದೇ ಭಾರತ್ ರೈಲಿನ ವೇಗ ಹೆಚ್ಚಿಸಲು ಸಹ ನಾವು ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ವಂದೇ ಭಾರತ್ ರೈಲಿನ ದರಪಟ್ಟಿ
ಚೆನ್ನೈನಿಂದ ಮೈಸೂರಿಗೆ ಆಗಮಿಸುವ ವಂದೇ ಭಾರತ್ ರೈಲು ಸಂಖ್ಯೆ 20607ರ ದರ ಚೈರ್ ಕಾರ್ 1,200 ರೂಪಾಯಿ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ದರ 2295 ರೂಪಾಯಿ. ಮೈಸೂರು-ಚೆನ್ನೈ ಸೆಂಟ್ರಲ್ ನಿಲ್ದಾಣದ ನಡುವೆ ಸಂಚಾರ ನಡೆಸುವ ರೈಲು ಸಂಖ್ಯೆ 20608ರ ದರ ಚೈರ್ ಕಾರ್ 1,365 ರೂಪಾಯಿ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ದರ 2,485 ರೂಪಾಯಿ.
ವಂದೇ ಭಾರತ್ ರೈಲುಗಳಲ್ಲಿ ಮಕ್ಕಳ ಟಿಕೆಟ್ ಇಲ್ಲ ಮತ್ತು ಯಾವುದೇ ರಿಯಾಯಿತಿಗೆ ಅವಕಾಶವಿಲ್ಲ. ವಯಸ್ಕರಿಗೆ ಇರುವಂತೆ ಪೂರ್ಣ ಟಿಕೆಟ್ ಎಲ್ಲರಿಗೂ ಅನ್ವಯವಾಗಲಿದೆ. ಶತಾಬ್ದಿ ರೈಲುಗಳಲ್ಲಿರುವಂತೆ ಮುಂಗಡ ಕಾಯ್ದಿರಿಸುವ, ರದ್ದುಪಡಿಸುವ, ರೀಫಂಡ್ ಮಾಡುವ ನಿಯಮಗಳು ಇವೆ.