ಶ್ಯಾಂ ಭಟ್ ನೇಮಕದಲ್ಲಿ ಲಂಚಾವತಾರ: ಸಿಎಂಗೂ ಐತಂತೆ ಇದ್ರಲ್ಲಿ ಪಾಲು!
ರಾಯಚೂರು, ಆಗಸ್ಟ್ 11: ಉಚ್ಚನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ರಾಜ್ಯ ಲೋಕಸೇವಾ ಆಯೋಗಕ್ಕೆ ಶ್ಯಾಂ ಭಟ್ ಅವರನ್ನು ನೇಮಕ ಮಾಡಿರುವುದರ ಹಿಂದೆ ಭಾರೀ ಹಣದ ವ್ಯವಹಾರ ನಡೆದಿದೆ ಎಂದು ದೇವದುರ್ಗದ ಶಾಸಕ ಶಿವನಗೌಡ ನಾಯಕ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಗುರುವಾರ (ಆ 11) ಮಾತನಾಡುತ್ತಿದ್ದ ಬಿಜೆಪಿ ಶಾಸಕ ಶಿವನಗೌಡ ನಾಯಕ, ಶ್ಯಾಂ ಭಟ್ ನೇಮಕದ ಹಿಂದೆ 125 ಕೋಟಿ ರೂಪಾಯಿ ಕೈಬದಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಭಾರೀ ಮೊತ್ತದ ಹಣ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ, ಸಂಪುಟದ ಪ್ರಮುಖ ಸಹದ್ಯೋಗಿಗಳಿಗೂ ಹಂಚಿಕೆಯಾಗಿದೆ. ಶ್ಯಾಂ ಭಟ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯ ಹೊರಬರಲಿದೆ ಎಂದು ಶಿವನಗೌಡ ನಾಯಕ ಚಾಲೆಂಜ್ ಮಾಡಿದ್ದಾರೆ.
ನನ್ನ ಆರೋಪವನ್ನು ಸಿಎಂ ಮತ್ತು ಸಹದ್ಯೋಗಿಗಳು ಸುಳ್ಳು ಎನ್ನುವುದಾದರೆ, ಅಧ್ಯಕ್ಷ ಹುದ್ದೆಗೆ ನಡೆದ ಪ್ರಕ್ರಿಯೆಯನ್ನು ಸಿಬಿಐಗೆ ವಹಿಸಲಿ, ರಾಜ್ಯದ ಜನತೆಗೆ ಸತ್ಯ ಏನೆಂದು ಗೊತ್ತಾಗಲಿ. (ಲೋಕಸೇವಾ ಆಯೋಗಕ್ಕೆ, ಶ್ಯಾಂ ಭಟ್ ಅಧ್ಯಕ್ಷ)
ಹೈಕೋರ್ಟ್ ನಿರ್ದೇಶನದ ನಂತರವೂ ಸಿದ್ದರಾಮಯ್ಯ ಸರಕಾರ ಭ್ರಷ್ಟ ಅಧಿಕಾರಿಯನ್ನು ರಾಜ್ಯ ಲೋಕಸೇವಾ ಆಯೋಗಕ್ಕೆ ನೇಮಿಸಿದ್ದು ದುರಂತ ಎಂದು ಶಿವನಗೌಡ ನಾಯಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಹುದ್ದೆಗೆ ಶ್ಯಾಂ ಭಟ್ ಅವರ ಹೆಸರನ್ನು ಶಿಫಾರಸು ಮಾಡಿ, ರಾಜ್ಯಪಾಲರ ಅಂಕಿತಕ್ಕೆ ರಾಜ್ಯ ಸರಕಾರ ಕಳುಹಿಸಿತ್ತು. ರಾಜ್ಯಪಾಲರು ಎರಡು ದಿನದ ಹಿಂದೆ ಟಿ ಶ್ಯಾಂ ಭಟ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರು.
ಕೆಪಿಎಸ್ಸಿ ಅಧ್ಯಕ್ಷರ ನೇಮಕಕ್ಕೆ ಸರಕಾರ ಸ್ಪಷ್ಟ ನಿಯಮ ರೂಪಿಸಬೇಕು. ಈ ಹುದ್ದೆಗೇರುವವರು ಕಪ್ಪುಚುಕ್ಕೆ ಹೊಂದಿರಬಾರದು. ಅಲ್ಲಿಯವರೆಗೆ ಹೋಟಾ ಸಮಿತಿ ನೀಡಿದ್ದ ಶಿಫಾರಸಿನಂತೆಯೇ ನೇಮಕ ಪ್ರಕ್ರಿಯೆ ನಡೆಯಲಿ ಎಂದು ರಾಜ್ಯ ಉಚ್ಚ ನ್ಯಾಯಾಲಯ ಸ್ಪಷ್ಟವಾಗಿ ತನ್ನ ಆದೇಶದಲ್ಲಿ ತಿಳಿಸಿತ್ತು.