ಪಕ್ಷದ ಹಿರಿಯ ನಾಯಕರ ರಾಜಕೀಯಕ್ಕೆ ಈಶ್ವರಪ್ಪ 'ಹರಕೆಯ ಕುರಿ'!
ವಿಜಯಪುರ, ಆಗಸ್ಟ್ 22: ರಾಜ್ಯ ಸರಕಾರದ ಆಡಳಿತ ವೈಫಲ್ಯಗಳ ವಿರುದ್ದ ಹೋರಾಡಿ, ಸರಕಾರದ ತಪ್ಪು ಕೆಲಸಗಳನ್ನು ಜನಸಾಮಾನ್ಯರಲ್ಲಿ ಮುಟ್ಟಿಸುವ ಕೆಲಸವನ್ನು ಮಾಡಬೇಕಾಗಿರುವ ಪ್ರಮುಖ ವಿರೋಧ ಪಕ್ಷ ಬಿಜೆಪಿ ಈಗ ಆಂತರಿಕ ಬೇಗುದಿಯಿಂದ ಬೇಯುತ್ತಿದೆ.
ಪಕ್ಷದ ಇಬ್ಬರು ಹಿರಿಯ ಮುಖಂಡರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಮತ್ತೊಂದು ಸುತ್ತಿನ ಭಿನ್ನಮತ ದೆಹಲಿ ಅಂಗಣ ತಲುಪಿದ್ದು, ಪಕ್ಷದ ಕಾರ್ಯಕಾರಿಣಿಯಲ್ಲಿ ಅಮಿತ್ ಶಾ ಭಿನ್ನಮತಕ್ಕೆ ತೇಪೆ ಹಾಕುವ ಸಾಧ್ಯತೆಯಿದೆ. (ರಾಯಣ್ಣ ಬ್ರಿಗೇಡ್ ಗೆ ಸೆಡ್ಡು ಹೊಡೆಯಲು ಯುವ ಅಹಿಂದ)
ಈ ನಡುವೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಬಿಎಸ್ವೈ ಮತ್ತು ಈಶ್ವರಪ್ಪ ನಡುವಿನ ಮನಸ್ತಾಪಕ್ಕೆ ಪಕ್ಷದ ಹಿರಿಯರು ತುಪ್ಪ ಸುರಿಯುತ್ತಿದ್ದಾರೆಂದು ವಿಧಾನ ಪರಿಷತ್ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಯಡಿಯೂರಪ್ಪ ವಿರುದ್ದ ಷಡ್ಯಂತ್ರದಲ್ಲಿ ಈಶ್ವರಪ್ಪ ಬರೀ ಹರಕೆಯ ಕುರಿ. ಪಕ್ಷದ ಹಿರಿಯ ಮುಖಂಡರು ಮತ್ತು ಆರ್ ಎಸ್ ಎಸ್ ನಾಯಕರೊಬ್ಬರು ಯಡಿಯೂರಪ್ಪ ವಿರುದ್ದ ಕೆಲಸ ಮಾಡುತ್ತಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.
ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ನಂತರ ಅವರ ವಿರುದ್ದ ಷಡ್ಯಂತ್ರ ನಡೆಯುತ್ತಿದೆ. ವರಿಷ್ಠರ ಬಳಿಯೂ ಯಡಿಯೂರಪ್ಪ ವಿರುದ್ದ ದೂರು ನೀಡಲಾಗುತ್ತಿದೆ. ಇದೆಲ್ಲಾ ಯಡಿಯೂರಪ್ಪನವರ ಪ್ರಾಭಲ್ಯವನ್ನು ಕಮ್ಮಿಮಾಡುವುದಕ್ಕಾಗಿ ಪಕ್ಷದ ಹಿರಿಯರೇ ನಡೆಸುತ್ತಿದ್ದಾರೆಂದು ಯತ್ನಾಳ್, ವಿಜಯಪುರದಲ್ಲಿ ಹೇಳಿದ್ದಾರೆ. (ರಾಯಣ್ಣ ಬ್ರಿಗೇಡ್ ಈಶ್ವರಪ್ಪ ಮುಖವಾಡ)

ಸಿದ್ದಾಂತದಿಂದ ದೂರವಾಗುತ್ತಿದೆ
ಬಿಜೆಪಿ ಇತ್ತೀಚಿನ ದಿನಗಳಲ್ಲಿ ತನ್ನ ಸಿದ್ದಾಂತದಿಂದ ದೂರವಾಗುತ್ತಿದೆ. ಅಧಿಕಾರಕ್ಕಾಗಿ ಜಾತಿ ಲೆಕ್ಕಾಚಾರದ ಮೊರೆ ಹೋಗಲು ಶುರುಮಾಡಿದೆ. ಬಿಜೆಪಿಯಲ್ಲಾಗಲಿ ಅಥವಾ ಆರ್ ಎಸ್ ಎಸ್ ಸಂಘಟನೆಯಲ್ಲಾಗಲಿ ಹಿಂದುತ್ವದ ಅಂಶಗಳು ಕಮ್ಮಿಯಾಗುತ್ತಿವೆ - ಬಸನಗೌಡ ಯತ್ನಾಳ್.

ಯಡಿಯೂರಪ್ಪಗೆ ಸಹಕರಿಸಲಿ
ಯಡಿಯೂರಪ್ಪ ರಾಜ್ಯದ ಪ್ರಭಾವಿ ನಾಯಕರು, ಇವರ ಸಾರಥ್ಯದಲ್ಲೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದು. ಇವರ ವಿರುದ್ದ ಷಡ್ಯಂತ್ರ ನಡೆದರೆ ಬಿಜೆಪಿಗೆ ಭಾರೀ ನಷ್ಟವಾಗಲಿದೆ, ಈಶ್ವರಪ್ಪ ಮತ್ತು ಬಿಎಸ್ವೈ ಒಟ್ಟಾಗಿ ಕೆಲಸ ಮಾಡಿದರೆ ಪಕ್ಷಕ್ಕೆ ಒಳಿತು ಎಂದು ಯತ್ನಾಳ್ ಅಭಿಪ್ರಾಯ ಪಟ್ಟಿದ್ದಾರೆ.

ಹಿರಿಯ ಮುಖಂಡರು
ಕೇಂದ್ರ ಸಚಿವರಾದ ರಮೇಶ್ ಜಿಗಜಿಣಗಿ, ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್, ಸಿ ಟಿ ರವಿ, ಪ್ರಲ್ಹಾದ್ ಜೋಷಿ ಸೇರಿದಂತೆ ಆರ್ ಎಸ್ ಎಸ್ ಮುಖಂಡ ಸಂತೋಷ್, ಯಡಿಯೂರಪ್ಪ ವಿರುದ್ದ ಷಡ್ಯಂತ್ರ ನಡೆಸುತ್ತಿದ್ದಾರೆ - ಯತ್ನಾಳ್.

ತಪ್ಪು ತಿದ್ದಿಕೊಳ್ಳಲಿ
ಈ ಹಿರಿಯ ಮುಖಂಡರು ತಮ್ಮಿಂದಾಗುತ್ತಿರುವ ತಪ್ಪುಗಳನ್ನು ಬೇಗ ತಿದ್ದಿಕೊಳ್ಳಲಿ. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಇವರ ವಿರುದ್ದ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು - ಯತ್ನಾಳ್.

ಅಮಿತ್ ಶಾ
ಮಂಗಳೂರಿನಲ್ಲಿ ಭಾನುವಾರ (ಆ 21) ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಯಡಿಯೂರಪ್ಪನವರನ್ನು ಮಾಜಿ ಮುಖ್ಯಮಂತ್ರಿ ಮತ್ತು ಭವಿಷ್ಯದ ಸಿಎಂ ಎಂದು ಸಂಭೋದಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಬಿಎಸ್ವೈ ಪಕ್ಷದ ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.












Click it and Unblock the Notifications