ಶನಿವಾರ ಕರ್ನಾಟಕಕ್ಕೆ ಬರಲಿವೆ 2 ಆಕ್ಸಿಜನ್ ಎಕ್ಸ್ಪ್ರೆಸ್ ರೈಲು
ಬೆಂಗಳೂರು, ಮೇ 14; ಕರ್ನಾಟಕದಲ್ಲಿ ಆಕ್ಸಿಜನ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿತ್ತು. ಆಕ್ಸಿಜನ್ ಸಾಗಣೆ ಮಾಡುವ ಎರಡು ರೈಲುಗಳು ಶನಿವಾರ ಬೆಂಗಳೂರಿಗೆ ಆಗಮಿಸಲಿವೆ.
ಮೇ 15ರ ಬೆಳಗ್ಗೆ 5ಗಂಟೆಗೆ 120 ಟನ್ ಆಕ್ಸಿಜನ್ ಹೊತ್ತ ರೈಲು ಬೆಂಗಳೂರಿನ ವೈಟ್ಫೀಲ್ಡ್ಗೆ ಆಗಮಿಸಲಿದೆ. ಓಡಿಶಾ ರಾಜ್ಯದ ಕಾಳಿಂಗ ನಗರದಿಂದ ಗುರುವಾರ ಮಧ್ಯಾಹ್ನ 3.10ಕ್ಕೆ ರೈಲು ಹೊರಟಿದೆ.
ಜಾರ್ಖಂಡ್ನ ಟಾಟಾ ನಗರದಿಂದ 120 ಟನ್ ಆಕ್ಸಿಜನ್ ಹೊತ್ತ ರೈಲು ಗುರುವಾರ ಮಧ್ಯಾಹ್ನ 12.40ಕ್ಕೆ ಹೊರಟಿದೆ. ಬೆಂಗಳೂರಿನ ವೈಟ್ಫೀಲ್ಡ್ಗೆ ಶನಿವಾರ ಸಂಜೆ 5 ಗಂಟೆಗೆ ತಲುಪಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.

ಈ ಎರಡೂ ರೈಲುಗಳು 6 ಆಕ್ಸಿಜನ್ ಕಂಟೈನರ್ಗಳನ್ನು ಒಳಗೊಂಡಿವೆ. ಎರಡೂ ರೈಲುಗಳಿಂದ ಒಟ್ಟು 240 ಟನ್ ಆಕ್ಸಿಜನ್ ಬೆಂಗಳೂರಿಗೆ ಬರಲಿದೆ. ಬಳಿಕ ಸರ್ಕಾರ ಅವುಗಳನ್ನು ಜಿಲ್ಲೆಗೆ ಸಾಗಣೆ ಮಾಡಲಿದೆ.
ಕರ್ನಾಟಕಕ್ಕೆ ಮೊದಲ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ಬುಧವಾರ ಆಗಮಿಸಿತ್ತು. 2 ಮತ್ತು 3ನೇ ರೈಲುಗಳು ಶನಿವಾರ ಬರಲಿವೆ. ಆಕ್ಸಿಜನ್ ಪೂರೈಕೆಯಿಂದಾಗಿ ರಾಜ್ಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅನುಕೂಲವಾಗಲಿದೆ.
ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಆಕ್ಸಿಜನ್ಗೆ ಬೇಡಿಕೆ ಹೆಚ್ಚಿದೆ. ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ತಮಗೆ ಹಂಚಿಕೆ ಮಾಡಿರುವ ಆಕ್ಸಿಜನ್ ಪ್ರಮಾಣವನ್ನು ಮರು ಹಂಚಿಕೆ ಮಾಡಬೇಕು ಎಂದು ಕೇಂದ್ರಕ್ಕೆ ಪತ್ರ ಬರೆದಿವೆ.
ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾವನ್ನಪ್ಪಿದ ಪ್ರಕರಣಗಳು ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕದಲ್ಲಿ ವರದಿಯಾಗಿವೆ. ಕರ್ನಾಟಕ ಹೈಕೋರ್ಟ್ ರಾಜ್ಯಕ್ಕೆ ಪೂರೈಕೆ ಮಾಡುವ ಆಕ್ಸಿಜನ್ ಪ್ರಮಾಣ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು.












Click it and Unblock the Notifications