ಆರೋಗ್ಯ ಸಚಿವ ಸುಧಾಕರ್ ಕೊಟ್ಟ ಗಿಫ್ಟ್ ಬಾಕ್ಸ್ನಲ್ಲಿ ಸ್ಕಾಚ್, ವಾಚ್, ಗೋಲ್ಡ್ ಕಾಯಿನ್!
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ನೀಡಿರುವ ಉಡುಗೊರೆ ಬಾಕ್ಸ್ ನಲ್ಲಿ ಏನಿದೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ರಾಜ್ಯ ಸರ್ಕಾರದ ಲಂಚದ ಬಾಕ್ಸ್ ಬೇಡ, ನಮ್ಮ ಲಂಚ್ ಬಾಕ್ಸ್ ಅಷ್ಟೇ ಸಾಕು ಎನ್ನುವ ಪ್ರಾಮಾಣಿಕ ಪತ್ರಕರ್ತರಿಂದ ಸರ್ಕಾರದ ಮಹಾ ಅಕ್ರಮ ಹೊರಬಿದ್ದಿದೆ ಎಂದು ಕಾಂಗ್ರೆಸ್ ಟ್ವೀಟ್ ಅಸ್ತ್ರ ಪ್ರಯೋಗಿಸಿದೆೆ.
ಸಿಎಂ ಕಚೇರಿಯಿಂದ ಕೊಟ್ಟ 1,00,000 ರೂ ಮೂಲ ಯಾವುದಯ್ಯ ಎಂದ ಸುರ್ಜೇವಾಲಾ!
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆೆ ಸುಧಾಕರ್ ಅವರೇ, "ನೀವು ನೀಡಿರುವ ಬಾಕ್ಸ್ನಲ್ಲಿ ಸ್ಕಾಚ್, ವಾಚ್, ಗೋಲ್ಡ್ ಕಾಯಿನ್ ಅಲ್ಲದೆ ಇನ್ನೂ ಏನೇನಿದೆ,?" ಎಂದು ಕಾಂಗ್ರೆಸ್ ಹೇಳಿದೆ.
ಭ್ರಷ್ಟಾಚಾರದಿಂದ ಬಿಜೆಪಿಗೆ ಧಿಮಾಕು:
ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಧಿಮಾಕು ಹೆಚ್ಚಾಗಿದೆ. ಎಲ್ಲವನ್ನೂ ಹಣದಿಂದ ಖರೀದಿಸುತ್ತೇವೆ ಎಂಬ ಧಿಮಾಕು ಬಿಜೆಪಿಗೆ ಬಂದಿರುವುದೇ ಭ್ರಷ್ಟಾಚಾರದಿಂದ ಎಂದು ಕಾಂಗ್ರೆಸ್ ದೂಷಿಸಿದೆ.
ಸಿಎಂ ಕಚೇರಿಯಿಂದ ಗಿಫ್ಟ್ ಬಾಕ್ಸ್:
ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿಯ ಪ್ರಧಾನ ಮತ್ತು ಮುಖ್ಯ ವರದಿಗಾರರಿಬ್ಬರಿಗೆ ದೀಪಾವಳಿ ಹಬ್ಬದ ನೆಪದಲ್ಲಿ ಸ್ವೀಟ್ ಬಾಕ್ಸ್ನೊಂದಿಗೆ 1 ಲಕ್ಷ ರೂಪಾಯಿ ನಗದು ಹಣವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್ ಪಾಗೋಜಿ ಎಂಬುವರು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜನಾಧಿಕಾರ ಸಂಘರ್ಷ ಪರಿಷತ್ ಮುಖ್ಯಮಂತ್ರಿ ಮತ್ತು ಮಾಧ್ಯಮ ಸಂಯೋಜಕರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 2018ರ ತಿದ್ದುಪಡಿ ಅಧಿನಿಯಮದ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದೆ. ಇದರ ಮಧ್ಯೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸುವರೇ ಎಂದು ಪ್ರಶ್ನೆ ಮಾಡಿದ್ದಾರೆ.
ಲಕ್ಷ ರೂಪಾಯಿ ಕೊಟ್ಟಿದ್ದೇಕೆ ಎಂದು ಉಲ್ಲೇಖ:
ಮುಖ್ಯಮಂತ್ರಿ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪ, ಕೆಟ್ಟ ಆಡಳಿತದ ಕುರಿತು ಪತ್ರಿಕೆಯಲ್ಲಿ ಪ್ರಕಟಿಸದಂತೆ ಹಣವನ್ನು ನೀಡಲಾಗಿದೆ ಎಂಬುದಕ್ಕೆ ಪುಷ್ಠಿ ನೀಡಿದಂತೆ ಆಗಿದೆ. ಮುಖ್ಯಮಂತ್ರಿ ಕಚೇರಿಯೇ ನೇರವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಲಂಚ ನೀಡಿರುವುದು ಅನೈತಿಕವಾದದ್ದಾಗಿದೆ. ಅಲ್ಲದೇ ಮಾಧ್ಯಮ ಸಂಸ್ಥೆಗಳ ಮೇಲೆ ಪ್ರಭಾವ ಬೀರಿ ಸರ್ಕಾರದ ಪರವಾಗಿ ಇರುವಂತೆ ನೋಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ದೂರಿನಲ್ಲಿ ಜನಾಧಿಕಾರ ಸಂಘರ್ಷ ಪರಿಷತ್ ವಿವರಿಸಿದೆ.
ಸರ್ಕಾರದ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಹಲವಾರು ದೂರುಗಳನ್ನು ನೀಡಿದ್ದರೂ ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಮಾಧ್ಯಮಗಳನ್ನು ಸರ್ಕಾರವು ಕೊಳ್ಳುತ್ತಿರುವ ಬಗ್ಗೆ ಬಹುತೇಕ ಜನರಿಗೆ ಅನುಮಾನವಿದೆ. ಈ ಪ್ರಕರಣವು ಆ ಅನುಮಾನವನ್ನು ಸಾಬೀತುಗೊಳಿಸಿದೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಮತ್ತು ಸಂವಿಧಾನವನ್ನು ಬುಡಮೇಲು ಮಾಡಲು ಬಿಜೆಪಿಯು ಹುನ್ನಾರ ನಡೆಸುತ್ತಿರುವ ಹಲವಾರು ಪ್ರಯತ್ನಗಳಲ್ಲಿ ಒಂದಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದು ತಕ್ಷಣವೇ ಲೋಕಾಯುಕ್ತರು ಈ ದೂರನ್ನಾಧರಿಸಿ ತನಿಖೆ ನಡೆಸಿ ಆಪಾದಿತ ಮುಖ್ಯಮಂತ್ರಿ ಮತ್ತು ಅವರ ಮಾಧ್ಯಮ ಸಂಯೋಜಕರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 2018ರ ತಿದ್ದುಪಡಿ ಅಧಿನಿಯಮ ಅನ್ವಯ ಕ್ರಮ ಕೈಗೊಳ್ಳಬೇಕು,' ಎಂದು ಜನಾಧಿಕಾರ ಸಂಘರ್ಷ ಪರಿಷತ್ನ ಸಹ ಅಧ್ಯಕ್ಷ ಆದರ್ಶ ಐಯ್ಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.