ಆಗಸ್ಟ್ ಮೊದಲ ವಾರದಲ್ಲಿ ಶಾಲೆಗಳ ಕಾರ್ಯರಂಭಕ್ಕೆ ಚಿಂತನೆ
ಬೆಂಗಳೂರು, ಜು. 22 : ಕೊರೊನಾವೈರಸ್ ಸೋಂಕು ಹಿನ್ನೆಲೆಯಲ್ಲಿ ಒಂದೂವರೆ ವರ್ಷದಿಂದ ಮುಚ್ಚಿರುವ ಶಾಲೆಗಳನ್ನು ಆಗಸ್ಟ್ ಮೊದಲ ವಾರದಲ್ಲಿಯೇ ಆರಂಭಿಸಲು ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಶಾಲೆಗಳು ತೆರೆಯುವ ಸಂಬಂಧ ರಚನೆಯಾಗಿರುವ ತಜ್ಞರ ಸಮಿತಿ ವರದಿಯನ್ನು ನೀಡಿದೆ. ವರದಿಯನ್ನು ಜಾರಿಗೆ ತರಲು ಸರ್ಕಾರಕ್ಕೆ ಶಿಫಾರಸು ಮಾಡುವ ಸಂಬಂಧ ಶಿಕ್ಷಣ ಇಲಾಖೆ ಶುಕ್ರವಾರ ಕರೆದಿರುವ ಸಭೆಯಲ್ಲಿ ಮಹತ್ವದ ತೀರ್ಮಾನ ಹೊರ ಬೀಳಲಿದೆ.
ಮೂರನೇ ಅಲೆ ಭೀತಿ: ಕೊರೊನಾ ಎರಡನೇ ಅಲೆ ಹೊಡೆತದಿಂದ ತತ್ತರಿಸಿರುವ ರಾಜ್ಯಗಳು ಕೊರೊನಾ ಮೂರನೇ ಅಲೆ ಬಗ್ಗೆಯೂ ಭೀತಿ ಮೂಡಿದೆ. ಈ ಹಿನ್ನೆಲೆಯಲ್ಲಿ ಅತಿ ಜಾಗರೂಕವಾಗಿ ಶಾಲೆಗಳನ್ನು ತೆರೆಯುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಈಗಾಗಲೇ ಗುಜರಾತ್ ಮತ್ತು ಹರ್ಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲಾ ಕಾಲೇಜುಗಳನ್ನು ತೆರೆಯಲಾಗಿದೆ. ಎರಡು ದಿನದ ಹಿಂದಷ್ಟೇ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮುಖ್ಯಸ್ಥರು ತಿಳಿಸಿದ್ದಾರೆ. ಇದೇ ನಿಟ್ಟಿನಲ್ಲಿ ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳನ್ನು ಕೆಲವು ಷರತ್ತುಗಳ ಆಧಾರದ ಮೇಲೆ ತೆರೆಯಲು ಅವಕಾಶ ಕಲ್ಪಿಸಿದೆ. ಇದೀಗ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ತೆರೆಯುವ ಸಂಬಂಧ ಇಲಾಖಾ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ.

ಆಗಸ್ಟ್ 2 ರಿಂದಲೇ ಶಾಲೆ ತೆರೆಯಲು ಶಿಫಾರಸು
ಕೊರೊನಾ ಮೂರನೇ ಅಲೆ ಕೇವಲ ಮಕ್ಕಳನ್ನು ಟಾರ್ಗೆಟ್ ಮಾಡುತ್ತದೆ ಎಂಬುದು ಸುಳ್ಳು ಎಂದು ಹಲವು ಸಂಶೋಧನಾ ಆಧಾರಿತ ವರದಿಗಳು ಹೊರ ಬಿದ್ದಿವೆ. ರಾಜ್ಯದಲ್ಲಿ ಶಾಲೆಗಳು ತೆರೆಯುವ ಸಂಬಂಧ ಪಾಲಕರು ಹಾಗೂ ಪೋಷಕರು ಒಳಗೊಂಡ ತಜ್ಞರ ಸಮಿತಿ ಈಗಾಗಲೇ ಶಿಕ್ಷಣ ಇಲಾಖೆ ಆಯುಕ್ತರಿಗೆ ವರದಿ ನೀಡಿದೆ. ಆಗಸ್ಟ್ ಮೊದಲ ವಾರದಿಂದಲೇ ಹಂತ ಹಂತವಾಗಿ ಶಾಲೆಗಳನ್ನು ತೆರೆಯಬಹುದು. ಪ್ರಾಥಮಿಕ ಶಾಲೆಗಳ ತೆರೆವಿಗೂ ತಜ್ಞರ ಸಮಿತಿ ಶಿಫಾರಸು ಮಾಡಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ತಜ್ಞರ ಸಮಿತಿ ನೀಡಿರುವ ವರದಿಯನ್ನು ಜಾರಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಚಿಂತನೆ ನಡೆದಿದೆ. ಈ ಸಂಬಂಧ ಶುಕ್ರವಾರ ಕರೆದಿರುವ ಸಭೆಯಲ್ಲಿ ಚರ್ಚೆ ಆಗಲಿದೆ. ಸದ್ಯದ ಬೆಳವಣಿಗೆ ನೋಡಿದರೆ ಆಗಸ್ಟ್ ಮೊದಲ ವಾರದಲ್ಲಿಯೇ ರಾಜ್ಯದಲ್ಲಿ ಶಾಲೆಗಳು ಆರಂಭವಾಗಲಿದೆ.

ಒಂದೂವರೆ ವರ್ಷದಿಂದ ಶಾಲೆಗಳು ಸ್ಥಗಿತ
2019 ಡಿಸೆಂಬರ್ ನಲ್ಲಿ ಕೊರೊನಾ ಸೋಂಕು ಮೊದಲು ಚೀನಾದಲ್ಲಿ ಕಾಣಿಸಿಕೊಂಡಿತ್ತು. ಮಾರ್ಚ್ ವೇಳೆಗಾಗಲೇ ಭಾರತದಲ್ಲೂ ಕೊರೊನಾ ಕಾಣಿಸಿಕೊಳ್ಳಲು ಆರಂಭಿಸಿತು. 2019 ಮೇ ನಲ್ಲಿ ಲಾಕ್ ಮೂಲಕ ಸ್ಥಗಿತಗೊಂಡ ಶಾಲೆಗಳು ಮತ್ತೆ ತೆರೆಯಲು ಆಗಿಲ್ಲ. ಕಳೆದ ವರ್ಷ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದರೂ ಅದು ಎರಡನೇ ತಿಂಗಳಿಗೆ ಪುನಃ ಲಾಕ್ ಡೌನ್ ಜಾರಿ ಆಯಿತು. ಒಂದೂವರೆ ವರ್ಷದಿಂದ ಮಕ್ಕಳು ಶಾಲೆಗಳಿಂದ ದೂರ ಕಾಯ್ದುಕೊಂಡಿದ್ದಾರೆ. ಮಕ್ಕಳ ದಾಖಲಾತಿ ಪ್ರಮಾಣದಲ್ಲಿ ಕೂಡ ಗಣನೀಯವಾಗಿ ಇಳಿಕೆಯಾಗಿದೆ.

ಶಾಲಾ ಮಕ್ಕಳು ಶಾಲೆಗೆ ದಾಖಲಾತಿಯೇ ಆಗಿಲ್ಲ
ಇತ್ತೀಚೆಗೆ ಕ್ಯಾಮ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ 60 ಸಾವಿರ ಶಾಲಾ ಮಕ್ಕಳು ಶಾಲೆಗೆ ದಾಖಲಾತಿಯೇ ಆಗಿಲ್ಲ ಎಂಬ ಆತಂಕಕಾರಿ ಸಂಗತಿಯನ್ನು ಹೊರ ಹಾಕಿತ್ತು. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಮಕ್ಕಳು ಹದಿನಾಲ್ಕು ವರ್ಷದ ವರೆಗೂ ಕಡ್ಡಾಯ ಶಿಕ್ಷಣ ಪಡೆಯುವಂತಾಗಬೇಕು. ಕೊರೊನಾ ಪರಿಣಾಮ ಮಕ್ಕಳ ಮೇಲೂ ಕೆಟ್ಟ ಪರಿಣಾಮ ಬೀರಿದೆ. ಹೀಗಾಗಿ ಈ ವರ್ಷ ಆಗಸ್ಟ್ನಲ್ಲಿಯೇ ಶಾಲೆಗಳನ್ನು ಆರಂಭಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
Recommended Video

ಪೋಷಕರ ಅಭಿಪ್ರಾಯ ಮೇರೆಗೆ ನಾವೇ ತೆಗಿತೀವಿ
ರಾಜ್ಯದಲ್ಲಿ ಆಗಸ್ಟ್ ತಿಂಗಳಿನಿಂದ ಶಾಲೆಗಳನ್ನು ತೆರೆಯಲು ಅವಕಾಶ ನೀಡುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ರುಪ್ಸಾ ಆಗ್ರಹಿಸಿದೆ. ಎಲ್ಲಾ ವಲಯಗಳ ಮೇಲಿನ ನಿರ್ಬಂಧ ಸಡಿಲಗೊಳಿಸಲಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ಶಾಲೆ ಆರಂಭಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕು. ಇಲ್ಲವೇ ಶಾಲೆಗಳೇ ಸ್ವತಃ ಪೋಷಕರ ಅಭಿಪ್ರಾಯ ಸಂಗ್ರಹಿಸಿ ಶಾಲೆ ಆರಂಭಿಸಬೇಕಾಗುತ್ತದೆ ಎಂದು ರುಪ್ಸಾ ಮುಖ್ಯಸ್ಥರಾದ ಲೇಪಾಕ್ಷಿ ಹಾಗೂ ಶಶಿಧರ್ ದಿಂಡೂರ್ ಆಗ್ರಹಿಸಿದ್ದಾರೆ. ಶಾಲೆಗಳ ಕಾರ್ಯಾರಂಭದ ಬಗ್ಗೆ ಸರ್ಕಾರವೂ ಸಹ ಒಲವು ತೋರಿಸಿದ್ದು ಅತಿ ಶೀಘ್ರದಲ್ಲಿಯೇ ರಾಜ್ಯದಲ್ಲಿ ಶಾಲೆಗಳು ಓಪನ್ ಆಗಲಿವೆ.












Click it and Unblock the Notifications