ಅಶೋಕ್ ಗಸ್ತಿ ಅವರಿಗೆ ರಾಜ್ಯಸಭಾ ಟಿಕೆಟ್: ಸವಿತಾ ಸಮುದಾಯದ ಹರ್ಷ
ಬೆಂಗಳೂರು, ಜೂನ್ 08: ಸವಿತಾ ಸಮುದಾಯದ ಪ್ರಮುಖ ಮುಖಂಡರಾಗಿರುವ ಅಶೋಕ ಗಸ್ತಿ ಅವರಿಗೆ ರಾಜ್ಯಸಭಾ ಟಿಕೆಟ್ ಘೋಷಣೆ ಯಾಗಿರುವುದು ಶೋಷಿತ ಅಶಕ್ತ ಸಮುದಾಯಕ್ಕೆ ಸಿಕ್ಕ ಮಾನ್ಯತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಸಂದ ಗೆಲುವು ಎಂದು ರಾಜ್ಯ ಸವಿತಾ ಸಮಾಜದ ಅಧ್ಯಕ್ಷ ಸಂಪತ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಸವಿತಾ ಸಮಾಜಕ್ಕೆ ಸೇರಿದ ಹಿರಿಯ ನಾಯಕ ರಾಯಚೂರಿನ ಬಿಜೆಪಿ ಮುಖಂಡ ಅಶೋಕ ಗಸ್ತಿ ಅವರನ್ನು ರಾಜ್ಯ ಸಭೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಇಲ್ಲಿಯವರೆಗೆ ಸವಿತಾ ಸಮಾಜಕ್ಕೆ ಸೇರಿದ ಕರ್ನಾಟಕದ ಯಾರೋಬ್ಬರೂ ಇಂತಹ ಹುದ್ದೆಗೆ ಆಯ್ಕೆಯಾಗಿಲ್ಲ. ರಾಜಕೀಯವಾಗಿ ತೀರಾ ಹಿಂದುಳಿದಿರುವ ಈ ಸಮುದಾಯಕ್ಕೆ ಬಿಜೆಪಿ ನಾಯಕತ್ವ ಮಾನ್ಯತೆ ನೀಡಿರುವುದು ಬಹಳ ಸಂತಸದ ವಿಷಯವಾಗಿದೆ.
ಇದಕ್ಕೆ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್ ಜಿ, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮುಖಂಡರಾದ ಈಶ್ವರಪ್ಪ, ಅಶ್ವಥ್ ನಾರಾಯಣ ಸೇರಿ ಎಲ್ಲಾ ನಾಯಕರಿಗೆ ತುಂಬು ಹೃದಯದ ಕೃತಜ್ಞತೆಗಳು ಎಂದು ಹೇಳಿದರು.

ಅದೇ ರೀತಿ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಸಂಘಪರಿವಾರ ಮತ್ತು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ ಸಮಾಜ ಸೇವೆಯಲ್ಲಿ ನಿರತರಾಗಿದ್ದ ಶ್ರೀ ಅಶೋಕ ಗಸ್ತಿ ಅವರಿಗೆ ಅಭಿನಂದನೆಗಳು. ತೀರಾ ಹಿಂದುಳೀದ ಸವಿತಾ ಸಮಾಜದ ಮುಖಂಡರಾಗಿ ಸಮಾಜದ ಏಳಿಗೆಗಾಗಿ ಹಲವು ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿರುವ ತಾವು ಈಗ ದೊರೆತಿರುವ ಸದಾವಕಾಶ ಬಳಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸುತ್ತೀರಿ ಎಂದು ವಿಶ್ವಾಸ ವ್ಯಕ್ತಪಡಿಸುತ್ತೇವೆ.
ಸವಿತಾ ಸಮಾಜದ ಕಾರ್ಯಾಧ್ಯಕ್ಷ ಎಸ್ ಕಿರಣ್ ಸಂಪತ್ ಕುಮಾರ್ ಮಾತನಾಡಿ, ನಮ್ಮ ಸಮಾಜದ ಬಹುದಿನದ ಬೇಡಿಕೆಯಾದ ಸವಿತಾ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದ ಹೋರಾಟ ಮುಂದುವರೆಸಬೇಕು. ಇದರಲ್ಲಿ ಸವಿತಾ ಸಮಾಜ ಒಗ್ಗಟ್ಟಿನಿಂದ ನಿಮ್ಮ ಜೊತೆಗೆ ನಿಲ್ಲುತ್ತದೆ ಎಂದು ಹೇಳುತ್ತಾ ಮತ್ತೊಮ್ಮೆ ಅಭಿನಂದನೆ ಸಲ್ಲಿಸಿದರು.












Click it and Unblock the Notifications