ಬಾಣಂತಿಯರ ಸರಣಿ ಸಾವು; 'ಅಮ್ಮಂದಿರನ್ನು ಉಳಿಸಿ' ಅಭಿಯಾನ
ರಾಜ್ಯದಲ್ಲಿ ನಡೆಯುತ್ತಿರುವ ಬಾಣಂತಿಯರ ಸಾವಿನ ಸುದ್ದಿ ಜನತೆಗೆ ಆಘಾತ ತಂದಿದೆ. ಬಡವರ ಮಕ್ಕಳು ಆರೋಗ್ಯ ಸೇವೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಾಲಿಡಲೂ ಭಯ ಪಡುವಂತ ಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಬಗೆ ಹರಿಸಬೇಕಾದ ಸರ್ಕಾರ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಣಂತಿಯರ ಸಾವಿನ ಲೆಕ್ಕ ಕೊಡುತ್ತಿದೆ. ಸರ್ಕಾರಿ ಆಸ್ಪತ್ರೆಗಳು ಸಮಸ್ಯೆಗಳ ಆಗರವಾಗಿದ್ದು, ಆರೋಗ್ಯ ಮಂತ್ರಿ ಏನು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಬಾಣಂತಿಯರ ಸಾವಿನ ವಿರುದ್ಧ ಭಾನುವಾರ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ 'ಅಮ್ಮಂದಿರನ್ನು ಉಳಿಸಿ' ಅಭಿಯಾನ ನಡೆಸಲಾಯಿತು.
ಈ ಅಭಿಯಾನದಲ್ಲಿ ಸಾವಿರಾರು ಕನ್ನಡಿಗರು ಭಾಗವಹಿಸಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು. ರಾಜ್ಯ ಸರ್ಕಾರದ ನ್ಯೂನ್ಯತೆಗಳು, ವಿಪಕ್ಷಗಳ ವೈಫಲ್ಯದ ವಿರುದ್ಧವೂ ಭಾರಿ ಟೀಕೆ ವ್ಯಕ್ತವಾಗಿದ್ದು, ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಲಾಯಿತು.

ಹಲವು ಖಾತೆಗಳಲ್ಲಿ ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದು ಆಘಾತ ವ್ಯಕ್ತಪಡಿಸಿದ್ದಾರೆ. ಇದು ಸಾವಲ್ಲ ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನವೆಂಬರ್ ವೇಳೆಗೆ 348 ಬಾಣಂತಿಯರ ಸಾವು
ಕಳೆದ ಮೂರುವರೆ ವರ್ಷದಲ್ಲಿ ರಾಜ್ಯದಲ್ಲಿ ಸುಮಾರು 2,500 ಬಾಣಂತಿಯರು ಮೃತಪಟ್ಟಿದ್ದಾರೆ. 2019-2020ರ ಸಾಲಿನಲ್ಲಿ 662 ಬಾಣಂತಿಯರು ಮೃತಪಟ್ಟಿದ್ದು, 2020-2021ನೇ ಸಾಲಿನಲ್ಲಿ 714 ಬಾಣಂತಿಯರು ಸರಿಯಾಗಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. 2021-2022ರಲ್ಲಿ 595 ಬಾಣಂತಿಯರು ಮೃತಪಟ್ಟಿರುವುದಾಗಿ ವರದಿಯಾಗಿದೆ. 2022-2023ರಲ್ಲಿ 527 ಬಾಣಂತಿಯರು, 2023-2024ರಲ್ಲಿ 518 ಬಾಣಂತಿಯರು ಮೃತಪಟ್ಟಿದ್ದಾರೆ. 2024ರ ನವೆಂಬರ್ ವೇಳೆಗೆ ರಾಜ್ಯದಲ್ಲಿ ಮೃತಪಟ್ಟ ಬಾಣಂತಿಯರ ಸಂಖ್ಯೆ 348 ಆಗಿದ್ದು, ಡಿಸೆಂಬರ್ ತಿಂಗಳ ಅಂಕಿ ಅಂಶ ಪರಿಗಣಿಸಿದರೆ ಈ ಲೆಕ್ಕ ಇನ್ನಷ್ಟು ಹೆಚ್ಚಲಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಇರುವುದೇ ಈ ಸಾವುಗಳಿಗೆ ಕಾರಣವಾಗಿದ್ದು, ಆಸ್ಪತ್ರೆ ವ್ಯವಸ್ಥೆಯನ್ನು ತುರ್ತಾಗಿ ಸುಧಾರಿಸದೇ ಇದ್ದರೆ ಸಾವುಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಕಾಯಿಲೆ ವಾಸಿ ಮಾಡಬೇಕಾದ ಸರ್ಕಾರಿ ಆಸ್ಪತ್ರೆಗಳೆ ಕಾಯಿಲೆಗಳ ಕೂಪವಾಗಿದ್ದು ತಾಯಂದಿರನ್ನು ಬಲಿ ಪಡೆಯುತ್ತಿವೆ ಎಂದು ಹಲವು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾಣಂತಿಯರಿಗೆ ನೀಡಲಾಗುತ್ತಿರುವ ಆಹಾರ, ಔಷಧಿಗಳ ಗುಣಮಟ್ಟ ಕೂಡ ಕಳಪೆಯಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ರಾಜ್ಯದಲ್ಲಿ 113 ಡ್ರಗ್ ಇನ್ಸ್ಪೆಕ್ಟರ್ ಹುದ್ದೆಗಳಿದ್ದು ಇದರಲ್ಲಿ 102 ಹುದ್ದೆಗಳು ಖಾಲಿಯಿದ್ದು ಔಷಧಿಗಳ ಗುಣಮಟ್ಟ ಮೇಲ್ವಿಚಾರಣೆ ಕೂಡ ಸರಿಯಾಗಿ ನಡೆಯುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದಿದೆ.
ರಾಜ್ಯದಲ್ಲಿ ಇಷ್ಟೆಲ್ಲಾ ಅವಾಂತರ ಆಗುತ್ತಿದ್ದರೂ ರಾಜ್ಯ ಸರ್ಕಾರ ಸಾವಿಗೆ ಕಾರಣ ಕೊಟ್ಟು ಕೈತೊಳೆದುಕೊಳ್ಳುತ್ತಿದೆ. ಈ ಬಗ್ಗೆ ಹೋರಾಟ ಮಾಡಬೇಕಾದ ವಿರೋಧ ಪಕ್ಷದ ನಾಯಕರು ಮೌನವಾಗಿದ್ದಾರೆ. ಕೂಡಲೇ ಬಿಜೆಪಿ ನಾಯಕರು ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಹೋರಾಟ ಮಾಡಬೇಕು. ಇನ್ನಾದರೂ ರಾಜ್ಯದಲ್ಲಿ ಬಾಣಂತಿಯರ ಸಾವಿಗೆ ಕಡಿವಾಣ ಬೀಳಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications