ತೆಲಂಗಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಸತೀಶ್ ಜಾರಕಿಹೊಳಿ ನೇಮಕ
ನವದೆಹಲಿ, ಆಗಸ್ಟ್ 1: ತೆಲಂಗಾಣ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿ ಕೆಸಿ ಕುಂಟಿಯಾ ಹಾಗೂ ಸಚಿವ ಸತೀಶ್ ಜಾರಕಿಹೊಳಿಯವರನ್ನು ನೇಮಿಸಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿದೆ.
ಕೆಸಿ ಕುಂಟಿಯಾ ತೆಲಂಗಾಣ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

ಈ ಹಿಂದೆ ಕೆಪಿಸಿಸಿಗೆ ಪದಾಧಿಕಾರಿಗಳ ನೇಮಕದ ವೇಳೆ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಆಕಾಂಕ್ಷಿಯಾಗಿದ್ದರು. ಆ ಸಂದರ್ಭದಲ್ಲಿ ಜಾರಕಿಹೊಳಿಯವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಇದೀಗ ತೆಲಂಗಾಣ ರಾಜ್ಯದ ಹೊಣೆಯನ್ನು ಜಾರಕಿಹೊಳಿಯವರಿಗೆ ವಹಿಸಲಾಗಿದೆ.
ಈ ಹಿಂದೆ ತೆಲಂಗಾಣ ಉಸ್ತುವಾರಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ರನ್ನು ಕಿತ್ತೊಗೆಯಲಾಗಿದೆ. ತೆಲಂಗಾಣ ಸಚಿವ ಕೆಟಿ ರಾಮರಾವ್ ಜತೆಗೆ ದಿಗ್ವಿಜಯ್ ಸಿಂಗ್ ಟ್ವಿಟ್ಟರ್ ಕಿತ್ತಾಟ ನಡೆಸಿದ್ದರು. ಇದಾದ ನಂತರ ಅವರಿಗೆ ಗೇಟ್ ಪಾಸ್ ನೀಡಲಾಗಿದೆ. ಈ ಹಿಂದೆ ಕರ್ನಾಟಕ ಉಸ್ತುವಾರಿಯಾಗಿದ್ದ ದಿಗ್ವಿಜಯ್ ಸಿಂಗ್ ರನ್ನು ಬದಲಿಸಿ ಕೆ.ಸಿ ವೇಣುಗೋಪಾಲ್ ರನ್ನು ನೇಮಿಸಲಾಗಿತ್ತು.
ಬಳಿಕ ಗೋವಾದಲ್ಲೂ ಅಗತ್ಯದಷ್ಟು ಶಾಸಕರನ್ನು ಹೊಂದಿಸದೇ ಸರಕಾರ ರಚಿಸುವಲ್ಲಿ ದಿಗ್ವಿಜಯ್ ಸಿಂಗ್ ವಿಫಲರಾಗಿದ್ದರು. ಇದೀಗ ತೆಲಂಗಾಣದಿಂದಲೂ ದಿಗ್ವಿಜಯ್ ಸಿಂಗ್ ರನ್ನು ಹೊರದಬ್ಬಲಾಗಿದೆ.












Click it and Unblock the Notifications