ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆ: ಬಿಜೆಪಿಗೆ ಚುನಾವಣಾ ಅಸ್ತ್ರವಾಗಲಿದೆಯೇ?
ಬೆಂಗಳೂರು, ನವೆಂಬರ್ 09: 'ಹಿಂದೂ ಪದಕ್ಕೆ ಅಶ್ಲೀಲ ಅರ್ಥವಿದೆ' ಎನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸಿರುವ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆಗೆ ಬಿಜೆಪಿಗರ ವ್ಯಾಪಕ ಟೀಕೆ, ಆಕ್ರೋಶಕ್ಕೆ ಗುರಿಯಾಗಿದೆ. ಜಾರಕಿಹೊಳಿ ಹೇಳಿಕೆಯಿಂದ ಹಿಂದೂ ಅಸ್ಮಿತೆಗೆ ಧಕ್ಕೆ ಬಂದಿದೆ. ಇದರ ವಿರುದ್ಧ ರಾಜ್ಯದಲ್ಲಿ ಅಭಿಯಾನ ಆರಂಭಿಸುವುದಾಗಿ ಬಿಜೆಪಿ ತಿಳಿಸಿದೆ.
ಈ ಮೂಲಕ 2023ರ ವಿಧಾನಸಭೆ ಚುನಾವಣೆಗೆ ಶಾಸಕರ ಹೇಳಿಕೆಯನ್ನು ಬಿಜೆಪಿಯು ಅಸ್ತ್ರವಾಗಿ ಬಳಸಲಿದೆಯೆ?, ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಸತೀಶ್ ಜಾರಕಿಹೊಳಿಯ ಈ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್ಗೆ ಹೊರೆಯಾಗಿ ಪರಿಣಮಿಸಲಿದೆಯೆ? ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ.
Recommended Video
ಸತೀಶ್ ಜಾರಕಿಹೊಳಿ ಅರೆ ಬರೆ ಓದಿದ ವ್ಯಕ್ತಿ ಎಂದ ಸಿಎಂ ಬೊಮ್ಮಾಯಿ
ಇತ್ತ ಸತೀಶ್ ಜಾರಕಿಹೊಳಿ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಹಿಂದೂ ಎಂಬ ಪದ ಪರ್ಷಿಯನ್ನಿಂದ ಬಂದಿದ್ದು ಎಂಬುದ್ದಕ್ಕೆ ನಾನು ಈಗಲೂ ಬದ್ಧ ಎಂದಿದ್ದಾರೆ. ಹೇಳಿಕೆಯಿಂದ ನಾನು ಪಕ್ಷದಲ್ಲಿ ಒಂಟಿಯಾಗುವುದಿಲ್ಲ. ನನ್ನಿಂದ ತಪ್ಪಾಗಿದೆ ಎಂದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಸತೀಶ್ ಜಾರಕಿಹೊಳಿ ಸಮರ್ಥನೆ ಬೆನ್ನಲ್ಲೇ ಬಿಜೆಪಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅವರ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ 'ಸ್ವಾಭಿಮಾನಿ ಹಿಂದೂ ಅಭಿಯಾನ' ನಡೆಸುವುದಾಗಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಹಿಂದೂ ಬಗ್ಗೆ ಹೇಳಿಕೆ, ಕಾಂಗ್ರೆಸ್ಗೆ, ಚುನಾವಣೆಗೆ ಸಂಬಂಧವಿಲ್ಲ
ಹಿಂದೂ ಪದ ಕುರಿತ ಹೇಳಿಕೆಯನ್ನು ಪಕ್ಷದ ವೇದಿಕೆ ಮೇಲೆ ನೀಡಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ ಇದಕ್ಕು ಕಾಂಗ್ರೆಸ್ ಪಕ್ಷಕ್ಕೂ, ಚುನಾವಣೆಗೆ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ನನ್ನ ನಿಲುವ ಇದೇ ಆಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದರಿಂದ ಹಿಂದೂ ವಿರುದ್ಧ ಹೇಳಿಕೆಯ ಛಾಯೆ ಚುನಾವಣೆ ಮೇಲೆ ಉಂಟಾಗಲಿದೆ. ಬಹುಸಂಖ್ಯಾತ ಹಿಂದೂಗಳಿರುವ ರಾಜ್ಯದಲ್ಲಿ ಈ ಹೇಳಿಕೆಯಿಂದ ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬೀಳಬಹುದು. ಬಿಜೆಪಿ ನಾಯಕರು ಚುನಾವಣೆ ಸಮಯದಲ್ಲಿ ಈ ವಿಚಾರ ಇಟ್ಟುಕೊಂಡು ಮುಗಿಬೀಳಬಹುದು ಎಂಬ ಅರಿವು ಕಾಂಗ್ರೆಸ್ನ ನಾಯಕರಲ್ಲಿ ಇದೆ. ಹೀಗಾಗಿ ಸತೀಶ್ ಜಾರಕಿಹೊಳಿ ಬೆನ್ನಿಗೆ ನಿಲ್ಲದೇ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಈ ಕಾರಣಕ್ಕೆ ಸತೀಶ್ ಜಾರಕಿಹೊಳಿ ತಾವು ಒಂಟಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಜಾರಕಿಹೊಳಿ ಹೇಳಿಕೆಯಿಂದ ಕಾಂಗ್ರೆಸ್ ತೊಂದರೆ ಇಲ್ಲ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸತೀಶ್ ಜಾರಕಿಹೊಳಿ ಹೇಳಿಕೆ ಅದು ಅವರ ವೈಯಕ್ತಿಕವಾದ್ದು, ಪಕ್ಷ ಅದನ್ನು ತಳ್ಳಿ ಹಾಕುತ್ತದೆ. ಅವರ ಹೇಳಿಕೆಯಿಂದ ಪಕ್ಷಕ್ಕೆ ಹೊಡೆತ ಬೀಳುವುದಿಲ್ಲ. ನಾನು ಹಿಂದೂ ಧರ್ಮದವನು ಎನ್ನುವ ಮೂಲಕ ಖಂಡಿಸಿದ್ದಾರೆ. ಇತ್ತ ಕಾಂಗ್ರೆಸ್ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾನ ಬಂಧುತ್ವ ವೇದಿಕೆಯ ಮೂಲಕ ಮೌಢ್ಯಾಚರಣೆ ವಿರುದ್ಧ ಜಾರಕಿಹೊಳಿ ಜಾಗೃತಿ ಮೂಡಿಸುತ್ತಿದ್ದಾರೆ. ವೈಚಾರಿಕ ವಿಷಯಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ. ಹಿಂದೂ ಧರ್ಮಕ್ಕೂ ಹಿಂದೂತ್ವಕ್ಕೂ ಸಂಬಂಧವೇ ಇಲ್ಲ ಎಂದು ಸಾವರ್ಕರ್ ಹೇಳಿದ್ದಾರೆ. ಹಿಂದೂ ಧರ್ಮವನ್ನು ಬಿಜೆಪಿ ಗುತ್ತಿಗೆ ಪಡೆದಿಲ್ಲ ಎನ್ನುವ ಮೂಲಕ ವಿವಾದದ ಬೆಂಕಿ ತುಪ್ಪ ಸುರಿವರಂತೆ ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಬಿಜೆಪಿ ಸಜ್ಜು
ಇಷ್ಟೆಲ್ಲವನ್ನು ಗಮನಿಸುತ್ತಿರುವ ಬಿಜೆಪಿ ನಾಯಕರು ಹಾಗೂ ಮುಖ್ಯಮಂತ್ರಿಗಳು ಈಗಾಗಲೇ ಭ್ರಷ್ಟಾಚಾರದ ಸರ್ಕಾರ, 40ಪರ್ಸೆಂಟ್ ಸರ್ಕಾರ, ಕಮಿಷನ್ ಸರ್ಕಾರ ಎಂದೆಲ್ಲ ಆರೋಪಗಳನ್ನು ಎದುರಿಸಿದೆ. ಮಳೆ, ನೆರೆ ಸಂದರ್ಭದಲ್ಲಿ ಕಾಂಗ್ರೆಸ್ನಿಂದ ಸಾಕಷ್ಟು ಟೀಕೆಗಳನ್ನು ಕೇಳಿದೆ. ಇದೀಗ ಕಾಂಗ್ರೆಸ್ ವಿರುದ್ಧ ಸತೀಶ್ ಜಾರಕಿಹೊಳಿಯ ಹಿಂದೂ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸುತ್ತಿದೆ.
ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಕಾರ್ಯಕ್ರಮ
ಈಗಾಗಲೇ ಬಸವರಾಜ ಬೊಮ್ಮಾಯಿಯುವರೇ ತಿಳಿಸಿದ್ದು, ಹಿಂದೂ ಕುರಿತು ಹೇಳಿಕೆ ನೀಡುವುದಕ್ಕೆ ಕೊನೆ ಹಾಡಬೇಕಿದೆ. ಈ ಸಂಬಂಧ ರಾಜ್ಯಾದ್ಯಂತ ಕಾರ್ಯಕ್ರಮ ನಡೆಸುತ್ತೇವೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುವುದು ಖಂಡನೀಯ. ಸತೀಶ್ ಜಾರಕಿಹೊಳಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಸನಾತನ ಧರ್ಮದ ಬುನಾದಿ ಪ್ರಶ್ನಿಸುವ, ಹಿಂದೂ ಧರ್ಮದ ಅಸ್ಮಿಗೆ ಧಕ್ಕೆ ತರುವ ಮಾತನಾಡಿದ್ದು ಖಂಡನೀಯ ಎಂದಿದ್ದಾರೆ. ಕಾಂಗ್ರೆಸ್ಗೆ ಜನರೇ ತಕ್ಕ ಪಾಠ ಕಲಿಸುವುದಾಗಿ ಹೇಳಿದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಹಿಂದೂಗಳ ಸುಮ್ಮನಿರಲ್ಲ ಎನ್ನುವ ಮೂಲಕ ಮುಖ್ಯಮಂತ್ರಿಗಳೇ ಈ ವಿಚಾರವನ್ನು ಬರಲಿರುವ ಚುನಾವಣೆವರೆಗೂ ಕೊಂಡೊಯ್ಯುವ ಮುನ್ಸೂಚನೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿ.ಸುನೀಲ್ ಕುಮಾರ್ ಸೇರಿದಂತೆ ಅನೇಕರು ಆಡಳಿತ ಪಕ್ಷದ ನಾಯಕರು ಜಾರಕಿಹೊಳಿ ಹೇಳಿಕೆ ಖಂಡಿಸಿದ್ದಾರೆ. ಜಿಲ್ಲಾಕೇಂದ್ರಗಳಲ್ಲಿ ಹಿಂದೂ ಹೇಳಿಕೆಯ ವಿರುದ್ಧ ಪ್ರತಿಭಟನೆ, ಜಾಗೃತಿಯಂತಹ ಕಾರ್ಯಕ್ರಮ ನಡೆಸಲು ಸಜ್ಜಾಗಿದ್ದಾರೆ. ಇದು 2023ರ ವಿಧಾನಸಭೆ ಚುನಾವಣೆ ವರೆಗೆ ಮುಂದುವರಿಯುವ ಸಾಧ್ಯತೆ ಇದ್ದು, ಉಭಯ ಪಕ್ಷಗಳ ಆರೋಪ ಪ್ರತ್ಯಾರೋಪ, ಮತದಾರರ ಓಲೈಕೆಗಳಿಗೆ ಸಾಕ್ಷಿಯಾಗಲಿದೆ.