ಸಂತೋಷ್ ಲಾಡ್ಗೆ ಮತ್ತೆ ಸಚಿವ ಸ್ಥಾನದ ಭಾಗ್ಯ!
ಬೆಂಗಳೂರು, ಜೂನ್ 18 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಪುನಾರಚನೆಗೆ ಒಪ್ಪಿಗೆ ಸಿಕ್ಕಿದೆ. ಕಲಘಟಗಿ ಶಾಸಕ ಸಂತೋಷ್ ಲಾಡ್ ಅವರಿಗೆ ಪುನಃ ಸಚಿವರಾಗುವ ಭಾಗ್ಯ ಸಿಕ್ಕಿದೆ. ಅಕ್ರಮ ಗಣಿಗಾರಿಕೆ ಆರೋಪ ಕೇಳಿ ಬಂದಾಗ ಅವರು ರಾಜೀನಾಮೆ ಕೊಟ್ಟು, ಸಂಪುಟದಿಂದ ಹೊರ ನಡೆದಿದ್ದರು.
ಶನಿವಾರ ದೆಹಲಿಯಲ್ಲಿ ಅಂತಿಮಗೊಂಡಿರುವ ಪಟ್ಟಿಯಲ್ಲಿ ಸಂತೋಷ್ ಲಾಡ್ ಅವರ ಹೆಸರಿದೆ. ಸದ್ಯದ ಮಾಹಿತಿ ಪ್ರಕಾರ ಭಾನುವಾರ ಸಂಜೆ 4 ಗಂಟೆಗೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. [ಲಾಡ್ ರಾಜೀನಾಮೆ, ಕಾಂಗ್ರೆಸ್ ಮೊದಲ ವಿಕೆಟ್ ಪತನ]

ಕಳೆದ ವರ್ಷ ಸಂತೋಷ್ ಲಾಡ್ ಅವರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಮುಂದಿಟ್ಟಿದ್ದರು. ಸಚಿವ ಸಂಪುಟ ಪುನರ್ ರಚನೆ ಮಾಡುವಾಗ ತಮ್ಮ ಹೆಸರನ್ನು ಪರಿಶೀಲನೆ ಮಾಡಬೇಕು ಎಂದು ಪಕ್ಷದ ಹೈಮಾಂಡ್ ನಾಯಕರಿಗೆ ಮನವಿ ಮಾಡಿದ್ದರು. [ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟ ಸಂತೋಷ್ ಲಾಡ್]
ಸ್ಪಷ್ಟನೆ ಕೊಟ್ಟಿದ್ದರು : ಅಕ್ರಮ ಅದಿರು ಗಣಿಗಾರಿಕೆ ಪ್ರಕರಣದಲ್ಲಿ ತಮ್ಮ ಕಂಪನಿ ವಿರುದ್ಧದ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ವಿ.ಎಸ್.ಲಾಡ್ ಅಂಡ್ ಕಂಪನಿ ವಿರುದ್ಧದ ಆರೋಪಗಳ ಬಗ್ಗೆ ನ್ಯಾಯಾಲಯ ಪುನರ್ ಪರಿಶೀಲಿಸಿ ವಿಚಾರಣೆಗೆ ತಡೆ ನೀಡಿದೆ. ಅಕ್ರಮ ಅದಿರು ಸಾಗಾಣೆಯಲ್ಲಿ ತಮ್ಮ ಪಾತ್ರವಿಲ್ಲ. ತಾಂತ್ರಿಕ ಕಾರಣಕ್ಕಾಗಿ ನನ್ನ ಮೇಲೆ ಆರೋಪ ಬಂದಿತ್ತು ಎಂದು ಸ್ಪಷ್ಟನೆ ಕೊಟ್ಟಿದ್ದರು. [ಲಾಡ್ ರಾಜೀನಾಮೆಗೆ ಯಾರು ಕಾರಣ?]
ಸಿದ್ದರಾಮಯ್ಯ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಂತೋಷ್ ಲಾಡ್ ಅವರಿಗೆ ವಾರ್ತಾ ಮತ್ತು ಮೂಲಸೌಕರ್ಯ ಖಾತೆ ನೀಡಲಾಗಿತ್ತು. ನಂತರ ಅವರ ಮೇಲೆ ಅಕ್ರಮ ಗಣಿಗಾರಿಕೆ ಆರೋಪ ಕೇಳಿಬಂದಿತ್ತು. ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. 2013ರ ನವೆಂಬರ್ 22ರಂದು ಅವರು ರಾಜೀನಾಮೆ ನೀಡಿದ್ದರು.











Click it and Unblock the Notifications