ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆ ರಹಸ್ಯ ಬಯಲು!
ಬೆಂಗಳೂರು, ಆಗಸ್ಟ್ 16 : 'ಬಿಜೆಪಿಯಲ್ಲಿ ಕೆ.ಎಸ್.ಈಶ್ವರಪ್ಪ ಅವರನ್ನು ಮೂಲೆಗೆ ತಳ್ಳಲಾಗುತ್ತಿದೆ. ತಮ್ಮ ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆ ಮಾಡುತ್ತಿದ್ದಾರೆ. ಈ ಬ್ರಿಗೇಡ್ ಯಶಸ್ವಿಯಾಗುವುದಿಲ್ಲ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, 'ಹಿಂದುಳಿದ ವರ್ಗಗಳನ್ನು ಸೇರಿಸಿಕೊಂಡು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆ ಮಾಡಲು ಈಶ್ವರಪ್ಪ ಮುಂದಾಗಿದ್ದಾರೆ. ಈ ಬ್ರಿಗೇಡ್ ಅವರ ಅಸ್ತಿತ್ವ ಉಳಿಸಿಕೊಳ್ಳಲು ಮಾತ್ರ' ಎಂದು ಲೇವಡಿ ಮಾಡಿದರು.[ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಈಶ್ವರಪ್ಪ]
'ಈಶ್ವರಪ್ಪ ಅವರು ಆಗಲಿ, ಬಿಜೆಪಿಯಾಗಲಿ ಇದುವರೆಗೂ ಹಿಂದುಳಿದ ವರ್ಗಗಳ ಬಗ್ಗೆ ಗಮನ ಕೊಟ್ಟಿಲ್ಲ. ಈಗ ಚುನಾವಣೆ ಕಾಲ ಹತ್ತಿರವಾಗುತ್ತಿದೆ ಎಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆ ಮಾಡಲು ಮುಂದಾಗಿದ್ದಾರೆ. ಈ ಬ್ರಿಗೇಡ್ ಯಶಸ್ವಿಯಾಗುವುದಿಲ್ಲ' ಎಂದರು.[ಕಾಂಗ್ರೆಸ್, ಬಿಜೆಪಿಗೆ ಬಿಸಿ ತುಪ್ಪವಾದ ಭಿನ್ನಮತ!]
'ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋದರೂ ಬಿಜೆಪಿಗೆ ಹೆಚ್ಚಿನ ಮತಗಳು ಸಿಗುವುದಿಲ್ಲ. ಯಡಿಯೂರಪ್ಪ ಅವರು ನಡೆಸಿದ ಭ್ರಷ್ಟಾಚಾರದ ಆಡಳಿತವನ್ನು ಜನರು ನೋಡಿದ್ದಾರೆ' ಎಂದು ದಿನೇಶ್ ಗುಂಡೂರಾವ್ ಹೇಳಿದರು.[ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಅಸಮಾಧಾನ]
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು, ಆಗಸ್ಟ್ ಮೊದಲ ವಾರದಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ನ ಸೆಕ್ರೆಟರಿಯೇಟ್ ಕ್ಲಬ್ನಲ್ಲಿ ಕುರುಬ ಸಮುದಾಯದ ನಾಯಕರ ಸಭೆ ನಡೆಸಿದ್ದರು. ಹಿಂದುಳಿದ ವರ್ಗಗಳನ್ನು ಸೇರಿಸಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ರಚನೆ ಮಾಡಲು ಪೂರ್ವಭಾವಿ ಸಭೆ ನಡೆಸಿದ್ದರು.