ಬಿಎಸ್ವೈ ಸೂಚನೆ ತಿರಸ್ಕಾರ, ಈಶ್ವರಪ್ಪರಿಂದ ಮತ್ತೆ ಸಭೆ
ಬೆಂಗಳೂರು, ಆಗಸ್ಟ್ 18 : ಯಡಿಯೂರಪ್ಪ ಅವರ ಸೂಚನೆ ಧಿಕ್ಕರಿಸಿರುವ ಕೆ.ಎಸ್.ಈಶ್ವರಪ್ಪ ಅವರು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ರಚನೆ ವಿಚಾರದಲ್ಲಿ ಸಭೆ ನಡೆಸುತ್ತಿದ್ದಾರೆ. ಬ್ರಿಗೇಡ್ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಕೋರ್ ಕಮಿಟಿ ಸಭೆಯಲ್ಲಿ ಜಟಾಪಟಿ ನಡೆದಿತ್ತು.[ಸೆ.26ರಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ]
ಬೆಂಗಳೂರಿನ ಶಾಸಕರ ಭವನದಲ್ಲಿ ಗುರುವಾರ ಬೆಳಗ್ಗೆ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಮಾಜಿ ಸಂಸದ ವಿರೂಪಾಕ್ಷಪ್ಪ, ಮುಕುಡಪ್ಪ, ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶಮೂರ್ತಿ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.[ರಾಯಣ್ಣ ಬ್ರಿಗೇಡ್ : ಯಡಿಯೂರಪ್ಪ, ಈಶ್ವರಪ್ಪ ಜಟಾಪಟಿ]
'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ರಚನೆ ಬಗ್ಗೆ ಅಂತಿಮ ರೂಪುರೇಷೆ ತಯಾರಿಸಲು ಇಂದು ಸಭೆ ನಡೆಸಲಾಗುತ್ತಿದೆ. ಸೆಪ್ಟೆಂಬರ್ 26ರಂದು ಹಾವೇರಿಯಲ್ಲಿ ಬ್ರಿಗೇಡ್ನ ಮೊದಲ ಸಭೆ ನಡೆಸುವ ಕುರಿತು ಚರ್ಚೆ ನಡೆಯುತ್ತಿದೆ.[ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಕೆ.ಎಸ್.ಈಶ್ವರಪ್ಪ]
ಸಭೆಯಲ್ಲಿ ಜಟಾಪಟಿ ನಡೆದಿತ್ತು : ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹುಟ್ಟು ಹಾಕಲು ಹೊರಟಿರುವುದರಿಂದ ಪಕ್ಷದ ಸಂಘಟನೆಗೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ, ಈ ಪ್ರಯತ್ನವನ್ನು ತಕ್ಷಣ ನಿಲ್ಲಿಸಬೇಕು. ಪಕ್ಷದಲ್ಲಿರುವ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ಮುಂತಾದ ಮೋರ್ಚಾಗಳಿವೆ ಇವುಗಳ ಮೂಲಕವೇ ಹಿಂದುಳಿದ ವರ್ಗದವರನ್ನು ಸಂಘಟಿಸಬೇಕು' ಎಂದು ಯಡಿಯೂರಪ್ಪ ಅವರು ತಾಕೀತು ಮಾಡಿದ್ದರು.[ರಾಯಣ್ಣ ಬ್ರಿಗೇಡ್ ರಚನೆ ರಹಸ್ಯ ಬಯಲು]
'ನನ್ನ ಕುತ್ತಿಗೆ ಕಡಿದರೂ ಬಿಜೆಪಿ ತೊರೆಯುವುದಿಲ್ಲ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅನ್ನು ನಾನು ಹುಟ್ಟು ಹಾಕಿಲ್ಲ. ಈ ಸಂಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಇದರಿಂದ ಪಕ್ಷಕ್ಕೆ ಅನುಕೂಲವಾಗುತ್ತದೆ. ಬ್ರಿಗೇಡ್ ರಚನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ' ಎಂದು ಈಶ್ವರಪ್ಪ ಅವರು ಸ್ಪಷ್ಟನೆ ನೀಡಿದ್ದರು.