PDO Transfer: ಕೌನ್ಸಿಲಿಂಗ್ ಮಾಡಿ ಪಿಡಿಒ ವರ್ಗಾವಣೆ ಪ್ರಕ್ರಿಯೆ ಪುನಾರಂಭ: ಮಹತ್ವದ ಸುತ್ತೋಲೆ
ಬೆಂಗಳೂರು, ಮಾರ್ಚ್ 07: ಒಂದೇ ಗ್ರಾಮ ಪಂಚಾಯಿತಿ, ತಾಲೂಕು ವ್ಯಾಪ್ತಿಯಲ್ಲಿ ವರ್ಷಗಳಿಂದ ಸೇವೆಯಲ್ಲಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಮತ್ತು ಕಾರ್ಯದರ್ಶಿಗಳ ಬೇರೆಡೆ ವರ್ಗಾವಣೆ ಪ್ರಕ್ರಿಯೆ ಪುನಾರಂಭಗೊಂಡಿದೆ. ಈ ಅಧಿಕಾರಿಗಳ ಎತ್ತಂಗಡಿಗೆ ಗ್ರಾಮೀಣಭಿವೃದ್ಧಿ ಇಲಾಖೆ ನಿರ್ಧರಿಸಿ ವರ್ಷಗಳೇ ಕಳೆದಿವೆ. ಕೆಲವು ಅಡೆತಡೆಗಳ ನಿವಾರಣೆ ಬಳಿಕ ಇದೀಗ ಪಿಡಿಒ ವರ್ಗಾವಣೆ (PDO Transfer) ಪ್ರಕ್ರಿಯೆ ಪುನಃ ಆರಂಭಿಸಲಾಗಿದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.
2024ರ ಜೂನ್ನಲ್ಲಿ ರಾಜ್ಯ ಸರ್ಕಾರ ಕರಡು ಪ್ರಕಟಿಸಿತ್ತು. ಪಿಡಿಒ ಗಳನ್ನು (ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) ಕೌನ್ಸಿಲಿಂಗ್ ಮಾಡಿ ವರ್ಗಾವಣೆ ಮಾಡಲು ಇಲಾಖೆಯು ಸುತ್ತೋಲೆ ಹೊರಡಿಸಿತ್ತು. ಈ ಸಂಬಂಧ ವರ್ಗಾವಣೆ ತಿದ್ದುಪಡಿ ಕರಡು 2024 ಗೆ ಸಾಕಷ್ಟು ಆಕ್ಷೇಪಣೆಗಳು ಬಂದವು. ಕೋರ್ಟ್ ಪ್ರಕರಣಗಳು ಎದುರಾದ ಹಿನ್ನೆಲೆಯಲ್ಲಿ ಒಂದು ವರ್ಷ ವಿಳಂಬವಾಗಿತ್ತು.

ಶಾಸಕರು ಸೇರಿದಂತೆ ಪ್ರಭಾವಿಗಳ ಪ್ರಭಾವದಿಂದ ಒಂದೇ ಕಡೆ ಠಿಕಾಣಿ ಹೂಡಿರುವ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಕಾರ್ಯದರ್ಶಿಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೊಳಿಸಲು ಸರ್ಕಾರ ಮುಂದಾಗಿದೆ. ಇದೇ ಮಾರ್ಚ್ 10ರೊಳಗಾಗಿ ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳು ವರ್ಷಗಳಿಂದ ಠಿಕಾಣಿ ಹೂಡಿರುವವರ ದತ್ತಾಂಶ ಪರಿಶೀಲಿಸಬೇಕು. 15ರೊಳಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆಯ ಆಕ್ಷೇಪಣೆ ಪರಿಶೀಲಿಸಬೇಕು. ಇದಾಗುತ್ತಿದ್ದಂತೆ ಮಾರ್ಚ್ 19ರೊಳಗೆ ಎಲ್ಲ ಸಿಇಒ ಗಳು ವರ್ಗಾವಣೆಗೆ ಅನುಮೋದನೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚನೆ ನೀಡಿದೆ. ಈ ಮೂಲಕ ವಿಳಂಬವಾಗಿದ್ದ ಪ್ರಕ್ರಿಯೆಗೆ ವೇಗ ದೊರೆತಿದೆ.
ವರ್ಗಾವಣೆ ಮೂಲ ಉದ್ದೇಶ
ಇಲಾಖೆ ಈ ವರ್ಗಾವಣೆ ನಡೆಯಿಂದ ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಸಿಬ್ಬಂದಿಯಲ್ಲಿ ದಕ್ಷತೆ ಹೆಚ್ಚಿಸಲು, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಸರ್ಕಾರ ಕಡ್ಡಾಯ ವರ್ಗಾವಣೆಗೆ ಮುಂದಾಗಿದೆ.

ಸರ್ಕಾರಿ ಅಧಿಕಾರಿಗಳು ವರ್ಗಾವಣೆ ಪ್ರಕ್ರಿಯೆಯಲ್ಲಿ ಮಹತ್ವದ ಹೆಜ್ಜೆ ಇಟ್ಟ ಸರ್ಕಾರ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ವರ್ಗಾವಣೆ ನಿಯಂತ್ರಣ ನಿಯಮಗಳಿಗೆ ತಿದ್ದುಪಡಿ ತರಲು ಕರಡು ಪ್ರಕಟಿಸಲಾಗಿತ್ತು. ಇದರಡಿ ಮೊದಲಿಗೆ ಪಿಡಿಒ, ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್ 01, ಗ್ರೇಡ್ 2, ಎಸ್ಡಿಎ (ದ್ವಿತಿಯ ದರ್ಜೆಯ ಲೆಕ್ಕ ಸಹಾಯಕ) ಅಧಿಕಾರಿಯನ್ನು ವರ್ಗಾವಣೆ ಪ್ರಕ್ರಿಯೆಗೆ ಒಳಪಡಿಸಲು ಮುಂದಾಗಿತ್ತು. ಆದರೆ ಆಕ್ಷೇಪಣೆ, ಕಾನೂನು ಅಡೆತಡೆ ಎದುರಾಗಿ ವರ್ಷದಿಂದ ವಿಳಂಬವಾಗಿತ್ತು.
ಠಿಕಾಣಿ ಅಧಿಕಾರಿಗಳಿಗೆ ಮತ್ತೆ ಅವಕಾಶ ಬೇಡ
ಈ ಕರಡು ತಿದ್ದುಪಡಿಯಲ್ಲಿ ಒಂದೇ ತಾಲೂಕಿನಲ್ಲಿ ಗರಿಷ್ಠ 07 ವರ್ಷ ಕೆಲಸ ಮಾಡಿರುವ ಎಲ್ಲ ಪಿಡಿಒ, ಕಾರ್ಯದರ್ಶಿಗಳನ್ನು ಅದೇ ತಾಲೂಕು ವ್ಯಾಪ್ತಿಯ ಯಾವುದೇ ಪಂಚಾಯಿತಿಗಳ ಖಾಲಿ ಹುದ್ದೆಗಳಿಗೆ ಪರಿಗಣಿಸದಂತೆ ನಿರ್ಬಂಧ ಹೇರಬೇಕು ಎಂಬುದು ಕರಡದಿನ ಪ್ರಮುಖ ಅಂಶವಾಗಿದೆ. ಸದ್ಯ ವರ್ಗಾವಣೆ ಪ್ರಕ್ರಿಯೆ ಪುನಾರಂಭಗೊಂಡಿದ್ದರಿಂದ ಪ್ರಭಾವಿಗಳ ಸಹಾಯದಿಂದ ಒಂದೇ ಕಡೆ ಠಿಕಾಣಿ ಹೂಡಿದ್ದವರಿಗೆ ನಡುಕ ಶುರುವಾಗಿದೆ.












Click it and Unblock the Notifications