ಕಾಲಕಾಲಕ್ಕೆ ನಿಮ್ಮನ್ನು ಎಚ್ಚರಿಸಲು ಆರ್ ಟಿಒ ಎಸ್ಎಂಎಸ್
ಬೆಂಗಳೂರು: ಸೆ. 18: ಸಕಾಲದಲ್ಲಿ ನಿಮ್ಮ ವಾಹನದ ತಪಾಸಣೆ ಮಾಡಿಸಲು ಮರೆತಿದ್ದೀರಾ? ಅಥವಾ ರಸ್ತೆ ನಿಯಮಗಳ ಬಗ್ಗೆ ಗೊಂದಲವಿದೆಯೇ? ಇನ್ನು ಈ ಚಿಂತೆ ನಿಮ್ಮನ್ನು ಕಾಡುವುದಿಲ್ಲ. ಯಾಕೆಂದರೆ ಸಾರಿಗೆ ಸಂಸ್ಥೆ ನಿಮ್ಮನ್ನು ಎಚ್ಚರಿಸಲು 'ಎಸ್ಎಂಎಸ್ ವ್ಯವಸ್ಥೆ' ಜಾರಿ ಮಾಡಿದೆ.
ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ಜಾಗೃತಿ ಮೂಡಿಸಲು ತಂದಿರುವ ವಿನೂತನ ಎಸ್ಎಂಎಸ್ ವ್ಯವಸ್ಥೆಗೆ ಬೆಂಗಳೂರಿನ ಶಾಂತಿನಗರ ಕೆಎಸ್ಆರ್ಟಿಸಿ ಕಚೇರಿಯಲ್ಲಿ ಬುಧವಾರ ಚಾಲನೆ ನೀಡಲಾಯಿತು.(ಬೆಂಗಳೂರು ಆಟೋಗಳು ಹಳೆಯ ಮೀಟರಲ್ಲೇ ಓಡ್ತಿವೆ)

ಸಾರಿಗೆ ಮತ್ತು ರಸ್ತೆ ಸುರಕ್ಷಿತ ಆಯುಕ್ತ ಡಾ. ರಾಮೇಗೌಡ ಮಾತನಾಡಿ, ವಾಹನ ಮಾಲೀಕರಿಗೆ ವಾಯು ಮಾಲಿನ್ಯ, ರಸ್ತೆ ಸುರಕ್ಷತೆ, ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿ ಅವರ ಮೊಬೈಲ್ ಗೆ ಎಸ್ಎಂಎಸ್ ಕಳಿಸಲಾಗುವುದು. ಈ ಮೂಲಕ ನಾಗರಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 1.33 ಲಕ್ಷ ವಾಹನಗಳಿವೆ. ಎಲ್ಲ ವಾಹನಗಳ ಮಾಲೀಕರ ಮೊಬೈಲ್ ಸಂಖ್ಯೆ ಸಂಗ್ರಹಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.(ಕೇವಲ ಹಣ ನೀಡಿದರೆ ಪೆಟ್ರೋಲ್ ಸಿಗದು!)
ಆನ್ ಲೈನ್ ಸೇವೆ 12 ಜಿಲ್ಲೆಗಳಿಗೆ ವಿಸ್ತರಣೆ
ಕಳೆದ ವರ್ಷ ಬೆಂಗಳೂರಿನಲ್ಲಿ ಆರಂಭಿಸಿರುವ ಆನ್ ಲೈನ್ ಮೂಲಕ ಎಲ್ಎಲ್ಆರ್ ಮತ್ತು ಲೈಸನ್ಸ್ಗೆ ಅರ್ಜಿ ಸಲ್ಲಿಸುವ ಸೇವೆಯನ್ನು 12 ಜಿಲ್ಲೆಗಳಿಗೆ ವಿಸ್ತರಿಸುವ ಚಿಂತನೆಯಿದೆ. ಒಂದಕ್ಕಿಂತ ಹೆಚ್ಚು ಪ್ರಾದೇಶಿಕ ಕಚೇರಿ ಹೊಂದಿರುವ ಜಿಲ್ಲೆಗಳನ್ನು ಗುರುತು ಮಾಡಿಕೊಳ್ಳಲಾಗಿದೆ ಎಂದು ಇಲಾಖೆ ಜಂಟಿ ಆಯುಕ್ತ ಮಾರುತಿ ಸಾಂಬ್ರಾಣಿ ತಿಳಿಸಿದರು.
ನಿಮ್ಮ ಸಂಖ್ಯೆ ದಾಖಲಿಸಿ
ಹೊಸ ವಾಹನ ಮಾಲೀಕರಿಂದ ಪೂರ್ಣ ವಿವರಗಳೊಂದಿಗೆ ಮೊಬೈಲ್ ಸಂಖ್ಯೆ ದಾಖಲಿಸಿಕೊಳ್ಳಲಾಗುವುದು. ಹಳೆ ವಾಹನ ಮಾಲೀಕರು http://rto.kar.nic.in/ ಮತ್ತು http://www.karnatakapuc.in/ ಮೂಲಕ ಸಂಖ್ಯೆ ನಮೂದಿಸಬಹುದು ಎಂದು ತಿಳಿಸಿದರು.











Click it and Unblock the Notifications