ಸಿದ್ದರಾಮಯ್ಯನ ಸೋಲಿಸಲು ಬಿಜೆಪಿಗೆ ಆರ್ಎಸ್ಎಸ್ ಬಲ
ಬೆಂಗಳೂರು, ಮಾರ್ಚ್ 06: ವಿರೋಧ ಪಕ್ಷದಿಂದ ಹಿಂದೂ ವಿರೋಧಿ ಎಂದು ಕರೆಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಹಾಗೂ ಅವರ ಪಕ್ಷಕ್ಕೆ ಸೋಲುಣಿಸಲು ಆರ್ಎಸ್ಎಸ್ ನಿಶ್ಚಯಿಸಿದೆ ಹಾಗಾಗಿ ಅದು ಈ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ.
ಈಶಾನ್ಯ ರಾಜ್ಯಗಳಲ್ಲಿ ಕಮ್ಯುನಿಸ್ಟ್ ಆಡಳಿತಕ್ಕೆ ತೆರೆ ಬಿದ್ದು ಬಿಜೆಪಿ ಧ್ವಜ ಹಾರಿಸುತ್ತಿದ್ದಂತೆ ಇತ್ತ ಬೆಂಗಳೂರಿನ ಆರ್ಎಸ್ಎಸ್ ಕಚೇರಿಯಲ್ಲಿ ತುರ್ತು ಸಭೆ ನಡೆಸಿ ರಾಜ್ಯ ಚುನಾವಣೆಯಲ್ಲಿ ಹಿಂದೂ ವಿರೋಧಿ ಎಂಬ ಪಟ್ಟ ಕಟ್ಟಿಸಿಕೊಂಡಿರುವ ಕಾಂಗ್ರೆಸ್ ಅನ್ನು ಸೋಲಿಸಲು ಆರ್ಎಸ್ಎಸ್ ಮಾಡಬೇಕಾದ ಕಾರ್ಯದ ಬಗ್ಗೆ ಚರ್ಚಿಸಲಾಗಿದೆ.
ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆರ್ ಎಸ್ ಎಸ್ ನ ನೂತನ ಸರಕಾರ್ಯವಾಹ?
ಬಿಜೆಪಿ ಮುಖಂಡರನ್ನೂ ಆಹ್ವಾನಿಸಲಾಗಿದ್ದ ಸಭೆಯಲ್ಲಿ ಚುನಾವಣಾ ರೂಪುರೇಷೆ ಮತ್ತು ಆರ್ಎಸ್ಎಸ್ನ ಪಾತ್ರದ ಬಗ್ಗೆ ಚರ್ಚೆ ನಡೆದಿದ್ದು, ಬೂತ್ ಮಟ್ಟದಲ್ಲಿ ಬಿಜೆಪಿಗೆ ಸಮಬಲವಾಗಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿ ಬಿಜೆಪಿಗೆ ಬಲ ತುಂಬುವ ಕಾರ್ಯವನ್ನು ಆರ್ಎಸ್ಎಸ್ ಮಾಡಲಿದೆ.
ಬಿಜೆಪಿಯ ರಾಜ್ಯ ಮುಖಂಡರೊಬ್ಬರು ಹೇಳಿರುವ ಪ್ರಕಾರ, ಮುಂಚೆಯೂ ಚುನಾವಣೆ ಎದುರಿಸಲು ಆರ್ಎಸ್ಎಸ್ ಸಹಾಯ ಮಾಡಿದೆ ಆದರೆ ಇದೇ ಮೊದಲ ಬಾರಿಗೆ ಬೂತ್ ಮಟ್ಟದ ಕಾರ್ಯವನ್ನು ಆರ್ಎಸ್ಎಸ್ ವಹಿಸಿಕೊಂಡಿದೆ ಎಂದಿದ್ದಾರೆ.
ಆರ್ಎಸ್ಎಸ್ ಮತ್ತು ಸಂಘ ಪರಿವಾರದ ವಿರುದ್ಧ ಸಿದ್ದರಾಮಯ್ಯ ಅವರು ಕಠಿಣ ಅಭಿಪ್ರಾಯ ಹೊಂದಿದ್ದು, ಆರ್ಎಸ್ಎಸ್ ನ ನೀತಿಗಳನ್ನು ಬಹಿರಂಗವಾಗಿ, ಕಠಿಣವಾಗಿ ವಿರೋಧಿಸುತ್ತಾ ಬಂದಿರುವ ಕಾರಣ ಹಾಗೂ ಹಿಂದೂ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವ ಬಗ್ಗೆ ಆರ್ಎಸ್ಎಸ್ ಬೇಸರಗೊಂಡಿದ್ದು, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಆರ್ಎಸ್ಎಸ್ ಪಣ ತೊಟ್ಟಿದೆ ಎನ್ನಲಾಗಿದೆ.
ಆರ್ಎಸ್ಎಸ್ ತನ್ನದೇ ಜಾಲದ ಮೂಲಕ ಚುನಾವಣೆ ಬಗ್ಗೆ ಸಮೀಕ್ಷೆ ನಡೆಸಿದ್ದು, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳು ಸಿದ್ದರಾಮಯ್ಯ ಅವರ ಬೆನ್ನಿಗಿದ್ದು, ಬಿಜೆಪಿಗೆ ಸಿದ್ದರಾಮಯ್ಯ ಅವರನ್ನು ಸೋಲಿಸುವುದು ಕಷ್ಟ ಎಂಬುದು ಆರ್ಎಸ್ಎಸ್ ಗೆ ಗೊತ್ತಿದೆ, ಭ್ರಷ್ಟಾಚಾರವನ್ನೂ ಅವರ ವಿರುದ್ಧ ಬಳಸುವಂತಿಲ್ಲ ಏಕೆಂದರೆ ಬಿಜೆಪಿಯು ಆ ವಿಷಯದ ಬಗ್ಗೆ ಉತ್ತಮವಾಗಿಲ್ಲ, ಹಾಗಾಗಿ ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಬಲ ತುಂಬುವ ಜವಾಬ್ದಾರಿಯನ್ನು ಅದು ಹೊತ್ತಿದೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಪರ ಇರುವ ದಲಿತ ಮತ್ತು ಹಿಂದುಳಿದ ಓಟುಗಳನ್ನು ವಿಭಜನೆ ಮಾಡುವಂತೆ ಆರ್ಎಸ್ಎಸ್ ಬಿಜೆಪಿಗೆ ಸೂಚಿಸಿದ್ದು, ಬೂತ್ ಮಟ್ಟದಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಬಿಜೆಪಿಯ ಮತದಾರರನ್ನು ಸೃಷ್ಠಿಸುವ ಕಾರ್ಯವನ್ನು ಮಾಡುವ ಮೂಲಕ ಪಕ್ಷವನ್ನು ತಳ ಹಂತದಲ್ಲಿ ಬಲಪಡಿಸುವ ಕಾರ್ಯ ಮಾಡಲಿದ್ದಾರೆ. ಬೂತ್ನಲ್ಲಿ ಪಕ್ಷವನ್ನು ಬಲಪಡಿಸುವ ಕಾರ್ಯ ಮಾಡಲಿದ್ದಾರೆ.
ಗುಬ್ಬಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆಗೆ ಯತ್ನ, ಬಿಜೆಪಿ ಕೆಂಡ