KSRTC ಸಿಬ್ಬಂದಿಗಳಿಗೆ 50 ಲಕ್ಷ ರೂ ಅಪಘಾತ ವಿಮಾ ಸೌಲಭ್ಯ: ಯೋಜನೆ ಏನೇನು ಒಳಗೊಂಡಿದೆ?
ಬೆಂಗಳೂರು, ಅಕ್ಟೋಬರ್ 19: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ)ಕ್ಕಾಗಿ ಹಗಲಿರುವ ಶ್ರಮಿಸುವ ಸಿಬ್ಬಂದಿಗಳಿಗೆ ದೀಪಾವಳಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. ಸಿಬ್ಬಂದಿಯ ಹಿತದೃಷ್ಟಿಯಿಂದ ಇದೇ ಮೊದಲ ಬಾರಿಗೆ ರೂ.50 ಲಕ್ಷ ಅಪಘಾತ ವಿಮಾ ಯೋಜನೆ ಜಾರಿಗೆ ತರಲಾಗುತ್ತಿದೆ.
ಯೋಜನೆ ಸಂಬಂಧ ಬುಧವಾರ ನಿಗಮದ ಕೇಂದ್ರ ಕಚೇರಿಯಲ್ಲಿ ಕೆಎಸ್ಆರ್ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಅವರು ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಒಡಂಬಡಿಕೆ ಜರುಗಿತು. ಈ ವೇಳೆ ಮಾತನಾಡಿದ ಎಂ.ಚಂದ್ರಪ್ಪ ಅವರು, ಭಾರತೀಯ ಸ್ಟೇಟ್ ಬ್ಯಾಂಕ್ (SBI) ಸಹಕಾರದಲ್ಲಿ ನಿಗಮದಿಂದ ಸಿಬ್ಬಂದಿಗೆ ಭಾರಿ ಮೊತ್ತದ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
Private Bus Fare : ದೀಪಾವಳಿ ಸುಲಿಗೆ: ಬೆಳಗಾವಿಗೆ 3,500ರೂ, ಹುಬ್ಬಳ್ಳಿ 1,800 ರೂ.ಟಿಕೆಟ್ ದರ!
ಇದುವರೆಗೂ ಕೆಎಸ್ಆರ್ಟಿಸಿ ನಿಗಮದ ಸಿಬ್ಬಂದಿಗಳು ಅಪಘಾತದಲ್ಲಿ ಮೃತಪಟ್ಟರೆ ಅಥವಾ ಶಾಶ್ವತ/ ಭಾಗಶಃ ಅಂಗವೈಕಲ್ಯಕ್ಕೆ ತುತ್ತಾದರೆ ಇಲ್ಲವೇ ಕರ್ತವ್ಯದಲ್ಲಿ ಇಲ್ಲದಿರುವ ಸಾವಿಗೀಡಾದರೆ ಅವರಿಗೆ ದೊಡ್ಡ ಮೊತ್ತದ ಯಾವುದೇ ಪರಿಹಾರ ಹಣ ಲಭಿಸುತ್ತಿರಲಿಲ್ಲ. ನಿಗಮಕ್ಕಾಗಿ ಹಗಲಿರುಳು ದುಡಿಯುವ ಚಾಲಕ, ನಿರ್ವಾಹಕ ಸೇರಿದಂತೆ ಒಟ್ಟಾರೆ ಸಿಬ್ಬಂದಿಯ ಆಕಸ್ಮಿಕ ಅಗಲಿಕೆ ಅಥವಾ ಅಂಗವೈಕಲ್ಯತೆಯು ಅವರ ಕುಟುಂಬದವರನ್ನು ಮತ್ತಷ್ಟು ಸಂಕಷ್ಟಕ್ಕೆ ಒಡ್ಡುತ್ತಿತ್ತು. ಇಂತಹ ಹಲವು ಅಂಶಗಳನ್ನು ಮನಗಂಡು ನಿಗಮವು ಎಸ್ಬಿಐ ಜತೆಗೆ ಕೈ ಜೋಡಿಸುವ ಮೂಲಕ ಸಿಬ್ಬಂದಿಯ ಹಿತ ಕಾಪಾಡುತ್ತಿದೆ ಎಂದು ತಿಳಿಸಿದರು.
ಈ 50 ಲಕ್ಷ ವಿಮಾ ಯೋಜನೆಯಡಿ ಸೌಲಭ್ಯಗಳು ಹೀಗಿವೆ
ಕೆಎಸ್ಆರ್ಟಿಸಿ ಸಿಬ್ಬಂದಿ ವೇತನ ಪ್ಯಾಕೇಜ್ ಅಪಘಾತ ವಿಮಾ ಯೋಜನೆ ಇದಾಗಿದೆ. ಮುಖ್ಯವಾಗಿ ಈ ವಿಮಾ ಯೋಜನೆಯು ಕರ್ತವ್ಯ ನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲೂ ಆಗುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ ಎಂದು ಚಂದ್ರಪ್ಪ ಅವರು ಹೇಳಿದರು. ಈಗಾಗಲೇ ನಿಗಮದ ಶೇ.55 ರಷ್ಟು ಸಿಬ್ಬಂದಿಗಳು ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ಖಾತೆಗಳನ್ನು ಹೊಂದಿರುತ್ತಾರೆ. ಅವರೆಲ್ಲರನ್ನು ಪ್ರೀಮಿಯಂ ರಹಿತ ವೈಯುಕ್ತಿಕ ಅಪಘಾತ ವಿಮಾ ಯೋಜನೆ ಒಳಗೊಳ್ಳುತ್ತದೆ.
ಸಾವಿಗೆ ರೂ.50, ಅಂಗವೈಕಲ್ಯಕ್ಕೆ ರೂ.20 ಲಕ್ಷ ಪರಿಹಾರ
ವೈಯಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಕುಟುಂಬದವರಿಗೆ ರೂ.50 ಲಕ್ಷ ಪರಿಹಾರದ ಹಣ ಕೂಡಲೇ ದೊರೆಯಲಿದೆ. ಅಪಘಾತದಲ್ಲಿ ಸಿಬ್ಬಂದಿ ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದರೆ ರೂ.20 ಲಕ್ಷಗಳ ಹಣ ಅಥವಾ ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೆ ರೂ.10 ಲಕ್ಷ ವಿಮಾ ಪರಿಹಾರ ದೊರೆಯಲಿದೆ.
ಅಪಘಾತದಲ್ಲಿ ಸಿಬ್ಬಂದಿಗೆ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆ ಅಗತ್ಯವಿದ್ದರೆ ಅದಕ್ಕಾಗಿ ಗರಿಷ್ಟ ರೂ.10 ಲಕ್ಷ, ಔಷಧಗಳ ಆಮದಿಗಾಗಿ ಗರಿಷ್ಠ ರೂ.5 ಲಕ್ಷ, ಕೋಮಾದಲ್ಲಿ ಮೃತಪಟ್ಟರೆ ಹೆಚ್ಚುವರಿ ರೂ.2 ಲಕ್ಷ (50 + 2= ಒಟ್ಟು ರೂ. 52 ಲಕ್ಷ), ಏರ್ ಅಂಬ್ಯೂಲೆನ್ಸ್ ಸೇವೆಗೆ ರೂ.10 ಲಕ್ಷ ವಿಮಾ ಪರಿಹಾರ ನೀಡಲಾಗುವುದು.
ಮೃತ ಸಿಬಂದಿ ಮಕ್ಕಳ ಶಿಕ್ಷಣಕ್ಕೆ ಹಣದ ಸಹಾಯ
ಒಂದು ವೇಳೆ ಅಪಘಾತದಲ್ಲಿ ಕೆಎಸ್ಆರ್ಟಿಸಿ ನೌಕರರು ಸಾವಿಗೀಡಾದರೆ ಅವರ ಮಕ್ಕಳ ಪದವಿ ಶಿಕ್ಷಣಕ್ಕೆ ಗರಿಷ್ಟ ರೂ.5 ಲಕ್ಷ ಹಾಗೂ ಹೆಣ್ಣು ಮಗಳ ವಿವಾಹಕ್ಕೆ ಗರಿಷ್ಠ ರೂ.5 ಲಕ್ಷಗಳ ವರೆಗೆ ಆರ್ಥಿಕ ಸಹಾಯ ಈ ವಿಮಾ ಯೋಜನೆಯಿಂದ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದರು. ಜತೆಗೆ ಭಾರಿ ಮೊತ್ತದ ವಿಮಾ ಯೋಜನೆ ಜಾರಿಗೆ ಸಹಕರಿಸಿದ ಭಾರತೀಯ ಸ್ಟೇಟ್ ಬ್ಯಾಂಕ್ ಅಧಿಕಾರಿಗಳಿಗೆ ಅವರು ಅಭಿನಂದನೆ ತಿಳಿಸಿದರು.
ವಿಮಾ ಯೋಜನಾ ಒಪ್ಪಂದಕ್ಕೆ ಅಧಿಕಾರಿಗಳ ಸಹಿ
ಅಪಘಾತ ವಿಮಾ ಪ್ಯಾಕೇಜ್ ಯೋಜನೆಯ ಒಡಂಬಡಿಕೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು, ಶಾಸಕರು ಹಾಗೂ ಕೆಎಸ್ಆರ್ಟಿಸಿ ಅಧ್ಯಕ್ಷ ಎಂ. ಚಂದ್ರಪ್ಪ, ನಿಗಮದ ವ್ಯವಸ್ಥಾಪಕ ವಿ.ಅನ್ಬುಕುಮಾರ್, ಪಂಕಜ್ ತಪ್ಲಿಯಾಲ್, ಬ್ಯಾಂಕ್ ಅಧಿಕಾರಿಗಳು ಸಹಿ ಹಾಕಿದರು. ಈ ವೇಳೆ ನಿಗಮದ ನಿರ್ದೇಸಕ ಡಾ. ನವೀನ್ ಭಟ್ ವೈ, ಸರೋಜ್ ಕುಮಾರ್ ದಾಸ್, ಎಸ್ಬಿಐ ಮುಖ್ಯ ವ್ಯವಸ್ಥಾಪಕರು ಮತ್ತಿತರರು ಪಾಲ್ಗೊಂಡಿದ್ದರು.