Breaking; ರೌಡಿಗಳ ಜೊತೆ ಬಿಜೆಪಿ ಬಾಂಧವ್ಯ ಬಿಚ್ಚಿಟ್ಟ ಕಾಂಗ್ರೆಸ್
ಬೆಂಗಳೂರು, ನವೆಂಬರ್ 28; ಕರ್ನಾಟಕ ಕಾಂಗ್ರೆಸ್ ಬಿಜೆಪಿ ಸರ್ಕಾರ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಸರಣಿ ಟ್ವೀಟ್ ಮಾಡಿದೆ. ರೌಡಿಗಳ ಜೊತೆ ಬಿಜೆಪಿಯ ಬಾಂಧವ್ಯದ ಬಗ್ಗೆ ಟೀಕೆಗಳನ್ನು ಮಾಡಿದೆ.
ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಕಳ್ಳರು, ಸುಳ್ಳರು, ಭ್ರಷ್ಟರು, ರೌಡಿಗಳೊಂದಿಗೆ ಬಿಜೆಪಿಯದು ಬಿಡಿಸಲಾಗದ ಬಾಂಧವ್ಯ. ವಾಂಟೆಡ್ ಲಿಸ್ಟ್ನಲ್ಲಿರುವ ರೌಡಿಗಳು ಪೊಲೀಸರ ಕೈಗೆ ಸಿಗುವುದಿಲ್ಲ. ಆದರೆ ಬಿಜೆಪಿ ನಾಯಕರ ಜೊತೆಯಲ್ಲಿರುತ್ತಾರೆ' ಎಂದು ಆರೋಪಿಸಿದೆ.
'ಕಳ್ಳರು, ಸುಳ್ಳರು, ಭ್ರಷ್ಟರು, ರೌಡಿಗಳು ಎಲ್ಲರಿಗೂ ಒಂದೇ ಸೂರು, ಅದು ಬಿಜೆಪಿ ಪಕ್ಷ. ಪೊಲೀಸರು ಹುಡುಕುತ್ತಿದ್ದ ರೌಡಿಯ ಜೊತೆಗೆ ನಿಮ್ಮ ನಾಯಕರಿಗೆ ಏನು ಕೆಲಸ?. ಆತನ ಬಂಧನ ಆಗದಿರುವುದರ ಹಿಂದೆ ಬಿಜೆಪಿಯ ಕೈವಾಡವಿದೆಯೇ?' ಎಂದು ಕಾಂಗ್ರೆಸ್ ಕೇಳಿದೆ.

ಕ್ರಿಮಿನಲ್ಗಳೊಂದಿಗೆ ಬಿಜೆಪಿಯ ನೆಂಟಸ್ತಿಕೆ ಇರುವಾಗ
* ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಸೂಕ್ತ ಪಾಲನೆ ಆಗುವುದೇ?
* ಕ್ರಿಮಿನಲ್ ಗಳಿಗೆ ಕಾನೂನಿನ ಬಗ್ಗೆ, ಪೊಲೀಸರ ಬಗ್ಗೆ ಗೌರವ, ಭಯ ಇರುವುದೇ?
* ರಾಜ್ಯದಲ್ಲಿ ಅಪರಾಧ ಪ್ರಕರಣ ಸಂಖ್ಯೆ ಹೆಚ್ಚಾಗದೇ ಇರಲು ಸಾಧ್ಯವೇ?
* ಪರಿಸ್ಥಿತಿ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿ, ನಿರಾತಂಕದಿಂದ ಜೀವನ ನಡೆಸಲು ಆಗುವುದೇ?
* ಪೊಲೀಸರು ನಿರ್ಭಿಡೆಯಿಂದ ಅಪರಾಧಿ ಕೃತ್ಯಗಳನ್ನು ಮಟ್ಟ ಹಾಕಲು ಸಾಧ್ಯವೇ? ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.
ಗೃಹ ಸಚಿವರಿಗೆ ಪ್ರಶ್ನೆ; ಕಾಂಗ್ರೆಸ್ ತನ್ನ ಟ್ವೀಟ್ನಲ್ಲಿ, 'ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ, ರೌಡಿಗಳನ್ನು ಹಿಡಿಯುವ ಯೋಗ್ಯತೆ ನಿಮ್ಮ ಇಲಾಖೆಗೆ ಇಲ್ಲವೇ? ಅಥವಾ ರೌಡಿಗಳನ್ನು ಕಂಡರೆ ನಿಮಗೆ ಪ್ರೀತಿಯೇ? ಅಥವಾ ರೌಡಿಗಳನ್ನು ಬಂಧಿಸಲಾರದಂತೆ ನೀವೇ ಪೊಲೀಸರನ್ನು ಕಟ್ಟಿಹಾಕಿದ್ದೀರಾ? ಎಂದು ಕೇಳಿದೆ.
'ಸಿಸಿಬಿ ಪೊಲೀಸರ ಕೈಗೆ ಸಿಗದ ರೌಡಿ ಬಿಜೆಪಿ ನಾಯಕರ ಕೈಗೆ ಸಿಕ್ಕಿದ್ದು ಹೇಗೆ?. ಇದೆಲ್ಲವನ್ನು ನೋಡಿದಾಗ ರಾಜ್ಯದಲ್ಲಿ ಗೃಹ ಇಲಾಖೆ ಎಷ್ಟು ಅಸಮರ್ಥ ಹಾಗೂ ದುರ್ಬಲವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಸಂಸ್ಕೃತಿಯ ಬಗ್ಗೆ ಭಾಷಣ ಮಾಡುವ ಬಿಜೆಪಿ ಪಕ್ಷ ವಾಸ್ತವದಲ್ಲಿ ಕ್ರಿಮಿನಲ್ಗಳ ಜೊತೆಗೆ ನೆಂಟಸ್ತಿಕೆ ಬೆಳೆಸಿಕೊಂಡು ಕ್ರಿಮಿನಲ್ಗಳ ನೆಂಟರಾಗಿದ್ದಾರೆ' ಎಂದು ಟೀಕಿಸಿದೆ.












Click it and Unblock the Notifications