ಕರ್ನಾಟಕ ಪ್ರವೇಶಿಸಿದ ಭಾರತ್ ಜೋಡೋ: ಪಾದಯಾತ್ರೆ ಸಂಚರಿಸುವ ಮಾರ್ಗದ ವಿವರ ಇಲ್ಲಿದೆ
ಬೆಂಗಳೂರು, ಸೆಪ್ಟೆಂಬರ್ 30: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಶುಕ್ರವಾರದಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶ ಮಾಡಿದೆ. 21 ದಿನಗಳ ಕಾಲ ಈ ಯಾತ್ರೆ ರಾಜ್ಯದಾದ್ಯಂತ 511 ಕಿಲೋ ಮೀಟರ್ ಸಂಚರಿಸಲಿದೆ.
ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಶುಕ್ರವಾರ ಆರಂಭವಾಗಿದೆ. ರಾಜ್ಯದಲ್ಲಿ ಮೂರು ಹಂತಗಳಲ್ಲಿ ಭಾರತ್ ಜೋಡೋ ಯಾತ್ರೆ ಸಂಚರಿಸಲಿದೆ. ಮೂರು ಹಂತಗಳಲ್ಲಿ 7 ಲೋಕಸಭಾ ಕ್ಷೇತ್ರಗಳು, 20 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ್ ಜೋಡೋ ಯಾತ್ರೆ ಸಂಚಾರ ಮಾಡಲಿದೆ.
ಭಾರತ್ ಜೋಡೋ ಯಾತ್ರೆ ಉತ್ತಮ ಸ್ಪಂದನೆ; ಯಾವ ಶಕ್ತಿಯಿಂದಲೂ ನಿಲ್ಲಿಸಲಾಗಲ್ಲ: ರಾಹುಲ್
ತಮಿಳುನಾಡಿನಿಂದ ಗುಂಡ್ಲುಪೇಟೆ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸಿರುವ ಪಾದಯಾತ್ರೆ ಗುಂಡ್ಲುಪೇಟೆ, ನಂಜನಗೂಡು, ಮೈಸೂರು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಗೆ ಸಂಚಾರ ಮಾಡಲಿದೆ. ನಂತರ ಮೇಲುಕೋಟೆಯಿಂದ ರಂಗನಾಥಪುರದ ಮೂಲಕ ಚಿತ್ರದುರ್ಗ ಜಿಲ್ಲೆಯ ಪ್ರವೇಶ ಮಾಡಲಿದೆ.
ರಂಗನಾಥಪುರದಿಂದ ತುಮಕೂರಿನ ತುರುವೇಕೆರೆ, ಅಲ್ಲಿಂದ ಚಿಕ್ಕನಾಯಕನಹಳ್ಳಿ ಹುಳಿಯಾರ್ ಮೂಲಕ ಚಿತ್ರದುರ್ಗ ಹಿರಿಯೂರಿಗೆ ಪಾದಯಾತ್ರೆ ತೆರಳಲಿದೆ. ಹಿರಿಯೂರಿನಿಂದ ಚಳ್ಳಕೆರೆಗೆ, ಚಳ್ಳಕೆರೆಯಿಂದ ರಾಯಪುರಕ್ಕೆ ಯಾತ್ರೆ ತೆರಳಲಿದ್ದು, ಅಲ್ಲಿಂದ ಆಂಧ್ರಪ್ರದೇಶಕ್ಕೆ ಪ್ರವೇಶಿಸಲಿದೆ.
ಪಾದಯಾತ್ರೆಯ ಎರಡನೇ ಹಂತದ ರೂಟ್ ಮ್ಯಾಪ್
ಪಾದಯಾತ್ರೆ ಎರಡನೇ ಹಂತದಲ್ಲಿ ಹೀರೆಹಾಳ್ನಿಂದ ಓಬಳಾಪುರ ಮೂಲಕ ಮತ್ತೆ ಕರ್ನಾಟಕಕ್ಕೆ ರಾಜ್ಯ ಪ್ರವೇಶ ಮಾಡಲಾಗುತ್ತದೆ. ಹಲಕುಂಡಿ, ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ ಸಂಚಾರ ಆರಂಭಗೊಂಡು ಅಲ್ಲಿಂದ ಆಲೂರು ಮೂಲಕ ಆಂಧ್ರಪ್ರದೇಶ ಪ್ರವೇಶ ಮಾಡಲಿದೆ.
ಪಾದಯಾತ್ರೆಯ 3 ಹಂತದ ರೂಟ್ ಮ್ಯಾಪ್
ಮಾಧವರಂ ಮೂಲಕ ರಾಯಚೂರಿನ ಗಿಲ್ಲೆಸೂಗೂರು ಮೂಲಕ ಪಾದಯಾತ್ರೆ ತಂಡ ಪ್ರವೇಶ ಮಾಡಲಿದೆ. ಗಿಲ್ಲೆಸೂಗೂರು ನಿಂದ ಯರೇಗಾರಕ್ಕೆ ಪಾದಯಾತ್ರೆ ಸಂಚರಿಸಲಿದೆ. ಯರೇಗಾರ ಮೂಲಕ ರಾಯಚೂರು, ರಾಯಚೂರಿನಿಂದ ದೇವಸೂಗೂರುಗೆ ಭಾರತ್ ಜೋಡೋ ಯಾತ್ರೆ ತೆರಳಲಿದೆ. ದೇವಸೂಗೂರಿನಿಂದ ವಿಕಾರಬಾದ್ ಮೂಲಕ ತೆಲಂಗಾಣಕ್ಕೆ ಪ್ರವೇಶ ಮಾಡಲಿದೆ.
ರಾಜ್ಯದ ಮೊದಲ 15 ದಿನಗಳ ಪಾದಯಾತ್ರೆಯ ವಿವರ ಬಿಡುಗಡೆ
ಕರ್ನಾಟಕ ಕಾಂಗ್ರೆಸ್ ಮೊದಲ 15 ದಿನಗಳ ಭಾರತ್ ಜೋಡೋ ಯಾತ್ರೆಯ ಅಧಿಕೃತ ವೇಳಾ ಪಟ್ಟಿ ಬಿಡುಗಡೆ ಮಾಡಿದೆ. ಆ ಪ್ರಕಾರ , ಶುಕ್ರವಾರ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆ ಶನಿವಾರ ಮೈಸೂರು ಜಿಲ್ಲೆ ಪ್ರವೇಶಿಸಲಿದೆ. ಭಾನುವಾರ ಅಕ್ಟೋಬರ್ 2ರಂದು ಗಾಂಧಿ ಜಯಂತಿ ಪ್ರಯುಕ್ತ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ರಾಹುಲ್ ಗಾಂಧಿ ತೆರಳಲಿದ್ದಾರೆ. ಮಧ್ಯಾಹ್ನ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಮತ್ತೆ ಎರಡು ದಿನ ಮೈಸೂರು ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸಲಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರಕ್ಕೆ ಆಗಮಿಸಿದ ನಂತರ ಅಕ್ಟೋಬರ್ 4 ಮತ್ತು 5ನೇ ತಾರೀಖಿನಂದು ದಸರಾ ಬ್ರೇಕ್ ತೆಗೆದುಕೊಳ್ಳಲಿದ್ದು, ಪಾಂಡವಪುರದಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ.
7ನೇ ದಿನ ಪಾದಯಾತ್ರೆ ಪಾಂಡಪುರದಿಂದ ಪುನಾರಾಂಭಗೊಳ್ಳಲಿದ್ದು, ನಾಗಮಂಗಲ ತಲುಪಲಿದೆ. 8ನೇ ದಿನ ನಾಗಮಂಗಲದಲ್ಲಿ ಪಾದಯಾತ್ರೆ ನಡೆಯಲಿದೆ. 9 ದಿನ ಅಕ್ಟೋಬರ್ 9ರಂದು ತುಮಕೂರು ಜಿಲ್ಲೆ ತುರುವೇಕೆರೆ, 10ನೇ ದಿನ ತಿಪಟೂರಿನಲ್ಲಿ ಪಾದಯಾತ್ರೆ ನಡೆಯಲಿದೆ. 11ನೇ ದಿನ ಚಿತ್ರದುರ್ಗ ತಲುಪುವ ಯಾತ್ರೆ, ಹಿರಿಯೂರು, 12ನೇ ದಿನ ಚಿತ್ರದುರ್ಗ, 13ನೇ ದಿನ ಚಳ್ಳಕೆರೆ, 14 ನೇ ದಿನ ಮೊಣಕಾಲ್ಮೂರು ತಲುಪಲಿದ್ದು, 15ನೇ ದಿನ ಆಂಧ್ರಪ್ರದೇಶ ತಲುಪಲಿದೆ.