ಗುಂಡ್ಲುಪೇಟೆಯಲ್ಲಿ ಚೆಂಡುಮಲ್ಲಿಗೆ ಹೂಗಳ ದುರ್ವಾಸನೆ!
ಚಾಮರಾಜನಗರ, ಜುಲೈ 08 : ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಸಮೀಪದಲ್ಲಿ ಚೀನಾ ಮೂಲದ ಕಂಪನಿ ಸಂಗ್ರಹಿಸಿಟ್ಟಿರುವ ಚೆಂಡು ಹೂ ಸುವಾಸನೆ ಬೀರುವ ಬದಲು ದುರ್ಗಂಧ ಬೀರುತ್ತಿದ್ದು, ಜನರು ದಿನನಿತ್ಯ ಮೂಗು ಮುಚ್ಚಿಕೊಂಡು ಅಡ್ಡಾಡುವಂತಾಗಿದೆ.
ಗ್ರಾಮಸ್ಥರ ಪ್ರತಿರೋಧದ ನಡುವೆ ಚೀನಾ ಮೂಲದ ಚೆಂಗುವಾಂಗ್ ನ್ಯಾಚುರಲ್ ಎಕ್ಸ್ಸ್ಟ್ರ್ರಾಕ್ಟ್ಸ್ ಕಂಪನಿಯು ಚೆಂಡು ಮಲ್ಲಿಗೆ ಹೂವಿನ ಸಂಸ್ಕರಣಾ ಘಟಕ ಸ್ಥಾಪನೆ ಮಾಡಲು ಮುಂದಾಗಿದೆ. ಇಲ್ಲಿ ಖರೀದಿಸಿರುವ, ಭೂಮಿಯಲ್ಲಿ ಸಂಗ್ರಹಿಸಿಟ್ಟಿರುವ ಚೆಂಡುಹೂ ಕೊಳೆತು ದುರ್ವಾಸನೆ ಬೀರುತ್ತಿದೆ. [ನೋಡುಗರ ಮನವನ್ನೂ ಅರಳಿಸುವ ಬ್ರಹ್ಮ ಕಮಲ!]

ಈ ಪ್ರದೇಶದಲ್ಲಿ ಕಳೆದ 3 ತಿಂಗಳಿನಿಂದಲೂ ಸುಮಾರು 250 ಲೋಡ್ಗೂ ಹೆಚ್ಚು ಲಾರಿಗಳಲ್ಲಿ ಚೆಂಡುಮಲ್ಲಿಗೆಯನ್ನು ಸಂಗ್ರಹಿಸಲಾಗಿದೆ. ಇತ್ತೀಚೆಗೆ ಬಿದ್ದ ಮಳೆಯಿಂದ ಹೂವು ಕೊಳೆತು ನಾರುತ್ತಿದ್ದು, ಇದರ ತ್ಯಾಜ್ಯವು ಹರಿದು ಹೋಗುತ್ತಿರುವುದರಿಂದ ಸುತ್ತಲಿನ ಪ್ರದೇಶ ದುರ್ವಾಸನೆಯಿಂದ ಕೂಡಿ ಅಸಹ್ಯ ವಾತಾವರಣ ಸೃಷ್ಟಿಯಾಗಿದೆ.
ಇದರಿಂದ ಅಕ್ಕಪಕ್ಕದ ಜಮೀನುಗಳ ರೈತರು ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಜನರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುತ್ತಿದ್ದು, ಸಂಬಂಧಿಸಿದವರು ಕೂಡಲೇ ಕೊಳೆತ ಹೂವುಗಳನ್ನು ಇಲ್ಲಿಂದ ತೆರವುಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. [ಬಿಸಿಲ ನಾಡಲ್ಲಿ ಅರಳುತ್ತಿರುವ ಜರ್ಬೆರಾ ಹೂಗಳು!]

ಚೀನಾ ಮೂಲದ ಕಂಪನಿಯು ಖಾಸಗಿ ವ್ಯಕ್ತಿಗಳ ಬಳಿ ಖರೀದಿಸಿದ ಜಮೀನಿನಲ್ಲಿ ಕಾರ್ಖಾನೆ ಸ್ಥಾಪಿಸಲು ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿಯನ್ನು ಪಡೆದುಕೊಳ್ಳುತ್ತಿದೆ. ಸ್ಥಳೀಯರ ತೀವ್ರ ವಿರೋಧವನ್ನೂ ಲೆಕ್ಕಿಸದೆ ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮತಿಯನ್ನು ಪಡೆದುಕೊಳ್ಳುತ್ತಿದೆ.
ಸ್ಥಳೀಯ ಗ್ರಾಮ ಪಂಚಾಯಿತಿಯು ಕಾರ್ಖಾನೆ ನಿರ್ಮಾಣಕ್ಕೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದರೂ ಇದನ್ನು ಲೆಕ್ಕಿಸದೆ ಜಿಲ್ಲಾಡಳಿತ ಹಾಗೂ ಸರ್ಕಾರವು ಕಾರ್ಖಾನೆ ನಿರ್ಮಾಣಕ್ಕೆ ಅನುಕೂಲಮಾಡಿಕೊಡುತ್ತಿದೆ. ಸಾರ್ವಜನಿಕರ ಹಿತಾಸಕ್ತಿಯನ್ನು ಕಡೆಗಣಿಸಿದ ಪರಿಣಾಮವಾಗಿ ಕಾರ್ಖಾನೆಯ ಕೆಲಸ ಕಾರ್ಯಗಳು ಸಮಾರೋಪಾದಿಯಲ್ಲಿ ಸಾಗಿದ್ದು ಸುತ್ತಮುತ್ತಲಿನ ಜನ ರೋಗರುಜಿನಗಳಿಗೆ ತುತ್ತಾಗುವಂತಾಗಿದೆ. [ಕರ್ನಾಟಕಕ್ಕೆ ಇವತ್ತು ಹಳದಿ ಬಣ್ಣ ಬಳೆದವರಾರು?]












Click it and Unblock the Notifications