ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಡಿ.19ರಿಂದ ಸಾರಿಗೆ ನೌಕರರ ಧರಣಿ
ಬೆಂಗಳೂರು, ಡಿಸೆಂಬರ್ 01: ಕರ್ನಾಟಕ ರಾಜ್ಯ ಸಾರಿಗೆ ನೌಕರರಿಗೆ ಸಮಾನ ವೇತನ ನೀಡುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇದೇ ಡಿ. 19ರಿಂದ ಬೆಳಗಾವಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಕೆಎಸ್ಆರ್ಟಿಸಿ ಕಾರ್ಮಿಕ ಸಂಘಟನೆಯ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ತಿಳಿಸಿದೆ.
ಕಳೆದ 2 ವರ್ಷದಿಂದ ಹಲವು ಭಾರಿ ಸಂಬಂಧಿಸಿದ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸರ್ಕಾರವನ್ನು ಎಚ್ಚರಿಸಲು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ವಿಧಾನಸಭೆ ಅಧಿವೇಶನ ಸಮಯದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ವೇದಿಕೆ ಪದಾಧಿಕಾರಿಗಳು ಹೇಳಿದರು..
ಓಲಾ, ಊಬರ್ ಆಟೋ ದರ ನಿಗದಿಗೆ ಸಾರಿಗೆ ಇಲಾಖೆ ಒಪ್ಪಿಗೆ
ಇದೇ ವರ್ಷ ಅಕ್ಟೋಬರ್ 10ರಿಂದ ನವೆಂಬರ್ 25ರವರೆಗೂ ರಾಜ್ಯದ 18 ಜಿಲ್ಲೆಗಳಲ್ಲಿ ಬೃಹತ್ ಸೈಕಲ್ ಜಾಥಾ ನಡೆಸಿ ಸರ್ಕಾರಕ್ಕೆ ನಮ್ಮ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದೇವೆ. ಆದರೆ ಸರ್ಕಾರವಾಗಲಿ, ನಿಗಮದ ಆಡಳಿತ ಮಂಡಳಿ ಅಧಿಕಾರಿಗಳಾಗಲಿ ನಮ್ಮತ್ತ ಗಮನ ಹರಿಸಿಲ್ಲ. ಈ ನಿರ್ಲಕ್ಷ್ಯದಿಂದ ಬೇಸತ್ತು ಹೋರಾಟ ಹಾದಿ ಹಿಡಿಯಬೇಕಾಗಿದೆ. ನೂರಾರು ಮನವಿಗಳನ್ನು ಸಲ್ಲಿಸಿದರು ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಸಾರಿಗೆ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ನಡೆದ ಸಾರಿಗೆ ಮುಷ್ಕರದ ಸಂದರ್ಭದಲ್ಲಿ ನಾಲ್ಕು ನಿಗಮಗಳಲ್ಲಿ ಮಾಡಲಾಗಿದ್ದ ನೌಕರರ ವಜಾ, ವರ್ಗಾವಣೆ ಮತ್ತು ಆಮಾನತು ಪ್ರಕರಣಗಳ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿದಿಲ್ಲ. ಬಿಎಂಟಿಸಿ ನಿಗಮದಿಂದ ವಜಾಗೊಂಡ ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳುವಲ್ಲಿ ಆಡಳಿತ ಮಂಡಳಿಯ ಕೆಲವು ಅಧಿಕಾರಿಗಳು ನೌಕರರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಸರ್ಕಾರದ ಆದೇಶ ಪಾಲಿಸದೇ ನ್ಯಾಯಾಲಯದ ಆದೇಶದ ವಿರುದ್ಧ ತಡೆಯಾಜ್ಞೆ ತರುವ ಮೂಲಕ ಮತ್ತಷ್ಟು ವಿಳಂಬ ಮಾಡುತ್ತಿದ್ದಾರೆ ಎಂದು ವೇದಿಕೆ ಪದಾಧಿಕಾರಿಗಳು ದೂರಿದರು.
ಸಾರಿಗೆ ಘಟಗಳಲ್ಲಿ ಭ್ರಷ್ಟಾಚಾರ
ಘಟಕಗಳಲ್ಲಿ ಪ್ರತಿ ಹಂತದಲ್ಲೂ ವ್ಯಾಪಕ ಭ್ರಷ್ಟಚಾರ ನಡೆಯುತ್ತಿದೆ. ಫೋನ್ ಪೇ, ಗೂಗಲ್ ಪ್ಲೇ ಹಾಗೂ ಏಜೆಂಟ್ ಸಂಸ್ಕೃತಿ ಹೆಮ್ಮರವಾಗಿ ಬೆಳೆದ ಪರಿಣಾಮ ನೌಕರರು ಪ್ರತಿನಿತ್ಯ ವಿವಿಧ ರೀತಿಯ ಮಾನಸಿಕ ಕಿರುಕುಳಗಳ ಅನುಭವಿಸುತ್ತಿದ್ದಾರೆ. ಇದರಿಂದ ನೊಂದ ಕೆಲವು ನೌಕರರು ಕಿರುಕುಳ ತಡೆಯಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾರಿಗೆ ನೌಕರರ ಎಲ್ಲ ಸಮಸ್ಯೆಗಳ ನಿವಾರಣೆಗಳಿಗೆ ಹಾಗೂ ಸರ್ಕಾರ ನೀಡಿರುವ ಲಿಖಿತ ಭರವಸೆಗಳನ್ನು ಈ ಕೂಡಲೇ ಈಡೇರಿಸಬೇಕು. ಸಮಾನ ವೇತನ ದೊರೆಯಬೇಕು. ಈ ನಿಟ್ಟಿನಲ್ಲಿ ಹೋರಾಡಲು ಸಾರಿಗೆ ಸಂಸ್ಥೆಯಲ್ಲಿ ನೋಂದಾಯಿಸಲ್ಪಟ್ಟಿರುವ ಹಲವು ಸಂಘಗಳು ಸೇರಿ 'ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ'ಯಡಿ ಒಂದಾಗಿದ್ದೇವೆ. ಇದರಡಿ ನೌಕರರ ಸಮಸ್ಯೆಗಳನ್ನು ನಿವಾರಣೆಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಬೇಡಿಕೆ ಈಡೇರಿಕೆಗೆ ನೌಕರರ ಒತ್ತಾಯ
ಸರ್ಕಾರ ಈವರೆಗೆ ಸಾರಿಗೆ ನೌಕರರ ಮನವಿಗೆ ಸ್ಪಂದಿಸಿಲ್ಲ. ಕೊನೆ ಪಕ್ಷ ನಮ್ಮ ಸಮಸ್ಯೆಗಳನ್ನು ಕೇಳುವ ವ್ಯವಧಾನವನ್ನು ತೋರಿಲ್ಲ. ಆದ್ದರಿಂದ ವಜಾ ನೌಕರರ ಮರು ನೇಮಕ, ವರ್ಗಾವಣೆಯಂತ ಶಿಕ್ಷೆ ರದ್ದು ಮಾಡಿ ಪೊಲೀಸ್ ಪ್ರಕರಣ ಹಿಂಪಡೆಯಬೇಕು.
ಸಾರಿಗೆ ಸಂಸ್ಥೆ ನಾಲ್ಕು ನಿಗಮಗಳಲ್ಲಿ ಚಾಲ್ತಿಯಲ್ಲಿರುವ ನಾಲ್ಕು ವರ್ಷಕ್ಕೊಮ್ಮೆ ಮಾಡುವ ಅವೈಜ್ಞಾನಿಕ ಚೌಕಾಸಿ ವೇತನ ಪರಿಷ್ಕರಣಾ ಪದ್ಧತಿ ಕೈಬಿಡಬೇಕು. ನಿಗಮ ಮಂಡಳಿಗಳಲ್ಲಿ ಚಾಲ್ತಿಯಲ್ಲಿರುವ ವೇತನ ಆಯೋಗದ ಮಾದರಿಯನ್ನು ಅಳವಡಿಸಿಕೊಂಡು ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡಬೇಕು. ಈ ಎಲ್ಲ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.