ಎಸ್ಸಿ, ಎಸ್ಟಿ ವರ್ಗಗಳ ಕಲ್ಯಾಣದ ಕುರಿತು ಮುಖ್ಯಮಂತ್ರಿಗಳ ಸಭೆ
ಬೆಂಗಳೂರು, ಜೂನ್ 04 : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜನೆ ಗಳಲ್ಲಿ ನಾವೀನ್ಯತೆ ತರಲು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ 2019-20ನೇ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಉಪಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಅಭಿವೃದ್ಧಿ ಪರಿಷತ್ತಿನ ಸಭೆ ನಡೆಯಿತು. ಎಚ್.ಡಿ.ಕುಮಾರಸ್ವಾಮಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಐರಾವತ ಯೋಜನೆಯಡಿ ಉದ್ಯೋಗ, 4,500 ಕಾರು ವಿತರಣೆ
'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಗಳ ಜಾರಿಯಲ್ಲಿ ಹೊಸತನದ ಕೊರತೆಯಿದೆ. ಹಿಂದಿನ ವರ್ಷಗಳ ಯೋಜನೆಗಳೇ ಪುನರಾವರ್ತನೆಯಾಗುತ್ತಿದೆ. ಹೊಸ ಸಾಧ್ಯತೆಗಳ ಕುರಿತು ಚಿಂತಿಸಿ' ಎಂದು ಸೂಚನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯಿಂದ 'ಐರಾವತ' ಟ್ಯಾಕ್ಸಿ ಯೋಜನೆ
'ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಉಪಯೋಜನೆಯಡಿ ರೂಪಿಸಿರುವ ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲುಪಿರುವ ಬಗ್ಗೆ ಮೌಲ್ಯಮಾಪನ ಮಾಡುವಂತೆಯೂ' ಮುಖ್ಯಮಂತ್ರಿಗಳು ನಿರ್ದೇಶನ ಕೊಟ್ಟರು.
ಎಸ್.ಸಿ.ಎಸ್.ಪಿ/ಟಿ. ಎಸ್.ಪಿ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಭೆಗೆ ಹಾಜರಾಗುವ ಸಂದರ್ಭದಲ್ಲಿ ಕಳೆದ ವರ್ಷದ ಮಾಹಿತಿಯನ್ನು ಹಾಗೂ ಫಲಾನುಭವಿಗಳ ಅಂಕಿಅಂಶಗಳೊಂದಿಗೆ ಬರಬೇಕು ಎಂದರು.
ಯೋಜನೆಗಳ ಪ್ರಯೋಜನವನ್ನು ಪಡೆದ ಫಲಾನುಭವಿಗಳೇ ಮತ್ತೆ ಮತ್ತೆ ಈ ಯೋಜನೆಯಿಂದ ಲಾಭ ಪಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ಫಲಾನುಭವಿಗಳ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಹಿಂದಿನ ಸರ್ಕಾರಅನುಸೂಚಿತ ಜಾತಿ -ಪಂಗಡಗಳಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದೆ. ಕಳೆದ ವರ್ಷಗಳಲ್ಲಿ 1 ಲಕ್ಷ 40 ಸಾವಿರ ಕೋಟಿ ರೂ.ಗಳನ್ನು ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ ಅಭಿವೃದ್ಧಿಗೆ ವೆಚ್ಚ ಮಾಡಲಾಗಿದೆ. ಈ ಸಮುದಾಯದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಶಾಶ್ವತ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಯೋಚಿಸಬೇಕು ಎಂದು ಹೇಳಿದರು.
ಇಲಾಖಾವಾರು ಕಾರ್ಯಕ್ರಮಗಳನ್ನು ರೂಪಿಸುವ ಬದಲು ಆದ್ಯತೆ ಮೇರೆಗೆ ಶಿಕ್ಷಣ, ವಸತಿ, ಆರೋಗ್ಯ ಮುಂತಾದ ಕ್ಷೇತ್ರ ಗಳಲ್ಲಿ ಪ್ರಗತಿ ಸಾಧಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆಯಬೇಕೆಂದು ತಿಳಿಸಿದರು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಕಂದಾಯ ಸಚಿವರಾದ ಆರ್.ವಿ. ದೇಶಪಾಂಡೆ, ಲೋಕೋಪಯೋಗಿ ಸಚಿವ ಎಚ್. ಡಿ.ರೇವಣ್ಣ, ಸಮಾಜ ಕಲ್ಯಾಣ ಸಚಿವರಾದ ಪ್ರಿಯಾಂಕ್ ಖರ್ಗೆ ಪಾಲ್ಗೊಂಡಿದ್ದರು.