ಗುಡ್ನ್ಯೂಸ್: 5,000 ಮಂದಿಗೆ ಸಿಗಲಿದೆ ಸಾಗುವಳಿ ಚೀಟಿ, ಯಾವಾಗ?
ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಲ್ಲಿ ಕನಿಷ್ಠ 5,000 ಜನರ ಅರ್ಜಿಗಳನ್ನಾದರೂ ಬಗರ್ ಹುಕುಂ ಸಮಿತಿ ಎದುರು ಮಂಡಿಸಿ ಡಿಸೆಂಬರ್ 15ರೊಳಗೆ ಸಾಗುವಳಿ ಚೀಟಿ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.
ರಾಜ್ಯಾದ್ಯಂತ ಲಕ್ಷಾಂತರ ಜನ ಬಗರ್ ಹುಕುಂ ಅಡಿಯಲ್ಲಿ ಜಮೀನು ಮಂಜೂರಾತಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಪೈಕಿ 1,26,000 ಅರ್ಜಿಗಳನ್ನು ಮಾತ್ರ ಅರ್ಹ ಎಂದು ಪರಿಗಣಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಈಗಾಗಲೇ ಬಗರ್ ಹುಕುಂ ಕಮಿಟಿ ಎದುರು ತರಲಾಗಿದೆ. ಆದರೆ, ಆ ಸಂಖ್ಯೆ ಸಮಾಧಾನಕರವಾಗಿಲ್ಲ. ಹಾಗಾಗಿ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಟಾರ್ಗೆಟ್ ನಿಗದಿಪಡಿಸಲಾಗಿದೆ. ಡಿ.15ರೊಳಗೆ ರಾಜ್ಯಾದ್ಯಂತ ಕನಿಷ್ಟ 5,000 ಅರ್ಹ ಅರ್ಜಿಗಳನ್ನು ಕಮಿಟಿ ಎದುರು ಮಂಡಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಮೊದಲು ಗ್ರಾಮ ಆಡಳಿತ ಅಧಿಕಾರಿ ಅರ್ಜಿದಾರರ ಸ್ಥಳ ಪರಿಶೀಲಿಸಬೇಕು. ತದನಂತರ ಕಂದಾಯ ನಿರೀಕ್ಷಕರು ಹಾಗೂ ತಹಶೀಲ್ದಾರ್ ವರದಿ ಸಲ್ಲಿಸಬೇಕು. ಈ ಎಲ್ಲ ಪ್ರಕ್ರಿಯೆಗಳ ನಂತರವೇ ಅರ್ಹ ಅರ್ಜಿಗಳನ್ನು ಬಗರ್ ಹುಕುಂ ಕಮಿಟಿ ಎದುರು ಮಂಡಿಸಲು ಸಾಧ್ಯ. ಈ ಕೆಲಸಗಳಿಗೆ ಸಮಯಾವಕಾಶ ಬೇಕಾಗಿರುವುದರಿಂದ ಅಧಿಕಾರಿಗಳಿಗೆ ಮೊದಲ ಹಂತದಲ್ಲಿ 5,000 ಅರ್ಜಿಗಳ ಗುರಿ ನೀಡಲಾಗಿದೆ. ಜನವರಿ ವೇಳೆಗೆ ಈ ಗುರಿ 15ರಿಂದ 20 ಸಾವಿರಕ್ಕೆ ಏರಿಕೆಯಾಗಲಿದೆ ಎಂದು ವಿವರಿಸಿದ್ದಾರೆ.
ಬಗರ್ ಹುಕುಂ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಲಾಗುವುದು ಎಂದೂ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರೈತರಿಗೆ ಮಂಜೂರಾಗುವ ಜಮೀನಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಕಿಂಚಿತ್ತೂ ತಕರಾರು ಬರಬಾರದು, ಕಡತ ಕಳೆದು ಹೋಯ್ತು ಎಂದು ರೈತರು ಮತ್ತೆ ಸರ್ಕಾರಿ ಕಚೇರಿಗೆ ಅಲೆಯಬಾರದು ಎಂಬ ವಿಚಾರದಲ್ಲಿ ಸರ್ಕಾರ ಬದ್ದವಾಗಿದೆ ಎಂದಿದ್ದಾರೆ.

ಹೀಗಾಗಿ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಬಗರ್ ಹುಕುಂ ಕಮಿಟಿ ಎದುರು ಮಂಡಿಸಿ ಮಂಜೂರಾದ ಜಮೀನಿಗೆ ಪೋಡಿ ಮಾಡಿಸಿ, ಪಹಣಿಯಲ್ಲಿ ಹೆಸರನ್ನು ನಮೂದಿಸಿ ಸ್ವತಃ ತಹಶೀಲ್ದಾರರು ನೋಂದಣಿ ಕಚೇರಿಯಲ್ಲಿ ಜಮೀನಿನ ನೋಂದಣಿಯೂ ಮಾಡಿ ರೈತರಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಅನರ್ಹಗೊಂಡಿರುವ ಅರ್ಜಿಗಳೆಷ್ಟು?: ಇನ್ನು ಬಗರ್ ಹುಕುಂ ಯೋಜನೆಯ ಅಡಿ ಜಮೀನು ಮಂಜೂರಾತಿಗೆ ಕೋರಿ ಅರ್ಜಿ ಸಲ್ಲಿಸಿದವರ ಪೈಕಿ 5ರಿಂದ 6 ಲಕ್ಷ ಅರ್ಜಿಗಳನ್ನು ಅನರ್ಹ ಎಂದು ಪರಿಗಣಿಸಲಾಗಿದೆ. ಕಾನೂನು ರೀತಿಯ ಅರ್ಜಿ ಸಲ್ಲಿಸಬೇಕಾದ ದಿನಕ್ಕೆ 18 ವರ್ಷ ತುಂಬದ 26,051 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ 4.38 ಎಕರೆ ಜಮೀನು ಹೊಂದಿರುವ 26,922 ಅರ್ಜಿಗಳು, ಕೆರೆ ರಸ್ತೆ ಸೇರಿ ಬಿ-ಖರಾಬು ಪ್ರದೇಶಗಳ ಮಂಜೂರಾತಿಗೆ ಕೋರಿ 40,799 ಅರ್ಜಿಗಳು, ಅರಣ್ಯ ಪ್ರದೇಶಗಳ ಮಂಜೂರಾತಿಗೆ 1,68,119 ಅರ್ಜಿಗಳು, ಸಿಟಿ ಲಿಮಿಟ್ವೊಳಗೆ ಮಂಜೂರಾತಿ ಕೋರಿ 68,561 ಅರ್ಜಿಗಳು, ತಾಲೂಕಿನಲ್ಲೇ ವಾಸವಿಲ್ಲದ 8,665 ಅರ್ಜಿಗಳು ಹಾಗೂ ಕೃಷಿಕರಲ್ಲದ 1,00,400 ಜನ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲ ಅರ್ಜಿಗಳನ್ನೂ ಅನರ್ಹ ಎಂದು ಪರಿಗಣಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.












Click it and Unblock the Notifications