ಮಳೆ ಕೊರತೆ, ಸರಕಾರದಿಂದ 1,000 ಮೆಗಾ ವ್ಯಾಟ್ ವಿದ್ಯುತ್ ಖರೀದಿ
ಬೆಂಗಳೂರು, ಜುಲೈ 13: ರಾಜ್ಯದಲ್ಲಿ ಜುಲೈನಲ್ಲೇ ಬರಗಾಲ ಆವರಿಸಿದೆ. ಈ ಮಳೆಗಾಲದಲ್ಲಿಯೂ ಮಳೆಯ ಕೊರತೆ ತೀವ್ರವಾಗಿದ್ದು, ಜಲಾಶಯಗಳ ಒಡಲು ಬರಿದಾಗಿದೆ. ಪರಿಣಾಮ ವಿದ್ಯುತ್ ಕೊರತೆ ದೊಡ್ಡ ಮಟ್ಟಕ್ಕೆ ಕಂಡು ಬಂದಿದೆ.
ಈ ವರ್ಷ ಚುನಾವಣಾ ವರ್ಷವೂ ಆಗಿರುವುದರಿಂದ ಸಾರ್ವಜನಿಕರಿಗೆ ವಿದ್ಯುತ್ ಕೊರತೆಯ ಬಿಸಿ ತಟ್ಟಬಾರದು ಎಂಬ ಕಾರಣಕ್ಕೆ ಕರ್ನಾಟಕ 1,000 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಮುಂದಾಗಿದೆ. ಇದಕ್ಕಾಗಿ ಟೆಂಡರ್ ಕೂಡಾ ಕರೆಯಲಿದೆ.
'ಲೈನ್ಮನ್'ಗೆ ಪರ್ಯಾಯ ಹೆಸರು ಸೂಚಿಸಿ ಬಹುಮಾನ ಗೆಲ್ಲಿ: ಡಿಕೆಶಿ
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರ್ಥಿಕ ಇಲಾಖೆ ಜತೆ ಸಭೆ ನಡೆಸಿದ ಇಂಧನ ಸಚಿವ ಡಿಕೆ ಶಿವಕುಮಾರ್ ಸಣ್ಣ ಅವಧಿಗೆ ವಿದ್ಯುತ್ ಖರೀದಿಸಲು ಟೆಂಡರ್ ಕರೆದಿರುವುದಾಗಿ ಹೇಳಿದ್ದಾರೆ. "ನಾವು ಸಣ್ಣ ಅವಧಿಯ 1,000 ಮೆಗಾ ವ್ಯಾಟ್ ವಿದ್ಯುತ್ ಖರೀದಿಯ ಟೆಂಡರ್ ಕರೆಯಲಿದ್ದೇವೆ. ಗ್ರಾಮೀಣ ಭಾಗದಲ್ಲಿ ಮತ್ತು ರೈತರಿಗೆ ವಿದ್ಯುತ್ ವ್ಯತ್ಯಯವಾಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ," ಎಂದು ಹೇಳಿದ್ದಾರೆ.
"ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಬೀಳುವ ಸಾಧ್ಯತೆ ಇದೆ. ಉತ್ತಮ ಮಳೆ ಬಿದ್ದರೆ ನಾವು ಟೆಂಡರ್ ರದ್ದು ಪಡಿಸಲಿದ್ದೇವೆ," ಎಂದು ಶಿವಕುಮಾರ್ ಹೇಳಿದ್ದಾರೆ.
ಇನ್ನು ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯ್ಲಲೂ ವ್ಯತ್ಯಯವಾಗಿದೆ ಎಂದು ಸಚಿವರು ಹೇಳಿದ್ದಾರೆ. ಕೇಂದ್ರ ಸರಕಾರ ಕಲ್ಲಿದ್ದಲು ಗಣಿಯನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಿದೆ. ಆದರೆ ಅಲ್ಲಿಂದ ಕಲ್ಲಿದ್ದಲು ತೆಗೆಯಲು ಸ್ವಲ್ಪ ಸಮಯ ಬೇಕು ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ರಾಜ್ಯ ಸರಕಾರ ಮೇಕೆದಾಟು ಯೋಜನೆಯನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.