ಕನ್ನಡ ದಿನ ಪತ್ರಿಕೆಗಳು ಕಂಡಂತೆ ಕುಮಾರಸ್ವಾಮಿ ಪಟ್ಟಾಭಿಷೇಕ
ಕುಮಾರಸ್ವಾಮಿ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ನಿನ್ನೆ (ಮೇ 23) ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶ ಹಾಗೂ ರಾಜ್ಯದ ದೃಷ್ಠಿಯಿಂದ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದು, ಈ ಮಹತ್ವದ ಕಾರ್ಯಕ್ರಮವನ್ನು ಕನ್ನಡ ದಿನಪತ್ರಿಕೆಗಳು ಹೇಗೆ ಗುರುತಿಸಿವೆ ಎಂಬುದು ಆಸಕ್ತಿಕರ.
ಎಲ್ಲಾ ಕನ್ನಡ ದಿನಪತ್ರಿಕೆಗಳು ಕುಮಾರಸ್ವಾಮಿ, ಪರಮೇಶ್ವರ್ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಥಮ ಆದ್ಯತೆ ನೀಡಿವೆ. ಅದು ನಿರೀಕ್ಷಿತವೂ ಕೂಡ. ಆದರೆ ಎಲ್ಲಾ ದಿನಪತ್ರಿಕೆಗಳು ಕಾರ್ಯಕ್ರಮವನ್ನು 'ಪ್ರೆಸೆಂಟ್' ಮಾಡಿರುವ ರೀತಿ ಭಿನ್ನವಾಗಿದೆ. ಬಹುತೇಕ ಪತ್ರಿಕೆಗಳು ನಿನ್ನೆಯ ಕಾರ್ಯಕ್ರಮವನ್ನು ರಾಷ್ಟ್ರ ರಾಜಕಾರಣದ ಕೋನದಿಂದಲೇ ನೋಡಿವೆ.
ಕುಮಾರಸ್ವಾಮಿ ಪ್ರಮಾಣದ ಮುಹೂರ್ತ ಹೇಗಿತ್ತು? ಭವಿಷ್ಯ ಹೇಗಿದೆ?
ಬಹುತೇಕ ಎಲ್ಲ ದಿನಪತ್ರಿಕೆಗಳಲ್ಲಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಚಿತ್ರವೇ ಮೊದಲ ಪುಟದಲ್ಲಿದೆ, ಪರಮೇಶ್ವರ್ ಅವರ ಚಿತ್ರಕ್ಕೆ ಅಲ್ಪ ಮಹತ್ವವನ್ನಷ್ಟೆ ನೀಡಲಾಗಿದೆ. ತೃತೀಯ ರಂಗದ ನಾಯಕರ ಚಿತ್ರಗಳಂತೂ ಎಲ್ಲ ಪತ್ರಿಕೆಗಳಲ್ಲಿ ರಾರಾಜಿಸುತ್ತಿದೆ.
3 ದಿನದ ಸಿಎಂ ಯಡಿಯೂರಪ್ಪ: ಕನ್ನಡ ದಿನಪತ್ರಿಕೆಗಳ ಹೆಡ್ಲೈನ್
ಬನ್ನಿ ಯಾವ ಪತ್ರಿಕೆ ಏನು ವರದಿ ಮಾಡಿದೆ ಕಣ್ಣಾಡಿಸೋಣ....
'ಮಹಾಮೈತ್ರಿಗೆ ನಾಂದಿ' ಪ್ರಜಾವಾಣಿ
ಪ್ರಜಾವಾಣಿ ಪತ್ರಿಕೆ ಮೊದಲ ಪುಟದಲ್ಲಿ ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರ ಚಿತ್ರ ಪ್ರಕಟಿಸಿ 'ಮಹಾಮೈತ್ರಿಗೆ ನಾಂದಿ' ತಲೆ ಬರಹ ನೀಡಿ ವರದಿ ಮಾಡಿದೆ. 'ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ'ವು 'ಮೋದಿ ಅಲೆ' ವಿರುದ್ಧ ಈಜುವ 'ರಾಜಕೀಯ ಮನ್ವಂತರ'ಕ್ಕೆ ವೇದಿಕೆಯಾಯಿತು' ಎಂದು ಪ್ರಜಾವಾಣಿ ವರದಿ ಮಾಡಿದೆ, ನಿನ್ನೆಯ ಕಾರ್ಯಕ್ರಮ '2019ರ ಲೋಕಸಭಾ ಚುನಾವಣೆಗೆ ಕಹಳೆ ಮೊಳಗಿಸುವ ತಾಲೀಮು' ಎಂದು ಅದು ಹೇಳಿದೆ. ಚುನಾವಣಾ ವರದಿಗೆಂದು ನಿಗದಿಯಾಗಿರುವ ಪ್ರತ್ಯೇಕ ಪುಟ 'ಪ್ರಜಾಮತ'ದಲ್ಲಿ ತೃತೀಯ ರಂಗ ನಾಯಕರು ಹಾಗೂ ಕಾಂಗ್ರೆಸ್ ನಾಯಕರು ಒಟ್ಟಾಗಿ ಕೈ ಹಿಡಿದು ನಿಂತ ಪ್ರಕಟಿಸಿದೆ, ಜೊತೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯ ವಿವರ ಪ್ರಕಟಿಸಿದೆ. ಕಾಂಗ್ರೆಸ್ ಕಂಬಳಿ ಹೊದ್ದು ಮಲಗಿದ ಕುಮಾರಸ್ವಾಮಿ ಮಲಗಿರುವಂತೆ ಪ್ರಕಾಶ್ ಶೆಟ್ಟಿ ಅವರ ಕಾರ್ಟೂನು ಕೂಡ ಗಮನ ಸೆಳೆಯುತ್ತದೆ.
ಕುಮಾರಸ್ವಾಮಿ ಪದಗ್ರಹಣದಲ್ಲಿ 'ಮಹಾ ಮೈತ್ರಿಕೂಟ'ದ ಶಕ್ತಿ ಪ್ರದರ್ಶನ
'ಮೋದಿ ವಿರೋಧಿ ರಂಗ ಬೀಜಾಂಕುರ'-ವಿಜಯವಾಣಿ
ನಿನ್ನೆಯ ಕಾರ್ಯಕ್ರಮದಲ್ಲಿ ರಾಷ್ಟ್ರ ನಾಯಕರು ಪ್ರದರ್ಶಿಸಿದ ಒಗ್ಗಟ್ಟನ್ನು ಮೋದಿ ವಿರೋಧಿಗಳ ಉದಯ ಎಂಬಂತೆ ವಿಜಯವಾಣಿ ವರದಿ ಮಾಡಿದೆ. ಸಿದ್ದರಾಮಯ್ಯ, ಪರಮೇಶ್ವರ್ ಚಿತ್ರಕ್ಕಿಂತಲೂ ಸರ್ವ ನಾಯಕರ ಒಗ್ಗಟ್ಟನ್ನು ಸಾರುವ ಚಿತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ವಿಜಯವಾಣಿ ನೀಡಿದೆ. ಬಾಕ್ಸ್ ಇಂಟಂಗಳ ಮೂಲಕ ಕಾರ್ಯಕ್ರಮದ ಒಟ್ಟಾರೆ ವರದಿಯನ್ನು ಓದುಗರ ಮುಂದಿಟ್ಟಿದೆ ವಿಜಯವಾಣಿ. 7ನೇ ಪುಟದಲ್ಲಿ ಕಾರ್ಯಕ್ರಮದ ವರದಿ ಮತ್ತು ಚಿತ್ರಗಳನ್ನು ಪ್ರಕಟಿಸಲಾಗಿದೆ.
ವ್ಯಕ್ತಿಚಿತ್ರ: ನಾಡಿನ 25ನೇ ಮುಖ್ಯಮಂತ್ರಿ ಕುಮಾರಸ್ವಾಮಿ
'ಕುಮಾರಪರ್ವ ಆರಂಭ' ವಾರ್ತಾ ಭಾರತಿ
ವಾರ್ತಾ ಭಾರತಿ ಕನಿಷ್ಠ ತಲೆ ಬರಹದಲ್ಲಾದರೂ ನಿನ್ನೆಯ ಕಾರ್ಯಕ್ರಮವನ್ನು ರಾಜ್ಯ ರಾಜಕಾರಣದ ಕೋನದಿಂದ ನೋಡಿದೆ. 'ಕುಮಾರಪರ್ವ ಆರಂಭ' ಎಂಬುವುದು ಅದರ ಹೆಡ್ಲೈನ್, ಎಲ್ಲ ಪ್ರದೇಶಿಕ ಪಕ್ಷಗಳ ನಾಯಕರ ಹಾಗೂ ರಾಹುಲ್, ಸೋನಿಯಾ ಕೈ ಹಿಡಿದಿರುವ ಚಿತ್ರವನ್ನು 8 ಕಾಲಂ ಪೂರಾ ಪ್ರಕಟಿಸಿದೆ. ಕಾರ್ಯಕ್ರಮ ಹಾಗೂ ಸಂಭಂಧಿಸಿದ ಚಿತ್ರಗಳನ್ನು 8ನೇ ಪುಟದಲ್ಲಿ ಸವಿವರವಾಗಿ ವಾರ್ತಾಭಾರತಿ ನೀಡಿದೆ.
'ಬಿಜೆಪಿ ಅಶ್ವಮೇಧಕ್ಕೆ ಲಗಾಮು' ವಿಜಯ ಕರ್ನಾಟಕ
ನಿನ್ನೆಯ ಕಾರ್ಯಕ್ರಮವನ್ನು 'ಬಿಜೆಪಿ ಅಶ್ವಮೇಧಕ್ಕೆ ಲಗಾಮು' ಎಂಬ ತಲೆ ಬರಹದೊಂದಿಗೆ ವಿಜಯ ಕರ್ನಾಟಕ ವರದಿ ಮಾಡಿದೆ. ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲೂ ಇದನ್ನೇ ಹೇಳಿದ್ದರು. 'ಬಿಜೆಪಿ ವಿರೋಧಿ ಶಕ್ತಗಳ ಧೃವೀಕರಣ'ದಂತೆ ನಿನ್ನೆಯ ಕಾರ್ಯಕ್ರಮ ಕಂಡು ಬಂದಿತು ಎಂದು ಅವರು ವರದಿ ಮಾಡಿದೆ. ವೈರಲ್ ಆಗಿರುವ ಸೋನಿಯಾ-ಮಾಯಾವತಿ ಚಿತ್ರವನ್ನು ವಿಕೆ ಮುಖಪುಟದಲ್ಲಿ ಪ್ರಕಟಿಸಿದೆ. 9ನೇ ಪುಟದಲ್ಲಿ 'ಬಿಜೆಪಿಯೇತರ ಶಕ್ತಿಗಳ ಸನ್ನಿಧಿಯಲ್ಲಿ ಕುಮಾರ ಪ್ರತಿಜ್ಞೆ' ಎಂಬ ಆಕರ್ಷಕ ತಲೆ ಬರಹದೊಂದಿಗೆ ಸಾಕಷ್ಟು ಚಿತ್ರಗಳನ್ನು ಪ್ರಕಟಿಸಿ ಆಕರ್ಷಕ ಪುಟ ವಿನ್ಯಾಸ ಮಾಡಿದೆ. ಸರ್ವ ನಾಯಕರ ಒಗ್ಗಟ್ಟಿನ ಚಿತ್ರ ಪ್ರಕಟಿಸಿ ಕೊಟ್ಟಿರುವ 'ಕೂಡಿ ಬಾಳಿದರೆ ಅಧಿಕಾರ ಸುಖ' ಕ್ಯಾಪ್ಷನ್ ಕೂಡ ಚಪ್ಪರಿಸುವಂತಿದೆ.
'ಮಹಾಮೈತ್ರಿಗೆ ಓಂಕಾರ' ಸಂಯುಕ್ತ ಕರ್ನಾಟಕ
ನಿನ್ನೆಯ ಕಾರ್ಯಕ್ರಮವನ್ನು 'ಹೊಸ ರಾಜಕೀಯ ಪರ್ವ' ಎಂದು ಸಂಯುಕ್ತ ಕರ್ನಾಟಕ ಪತ್ರಿಕೆ ಕರೆದಿದೆ. ಕಾರ್ಯಕ್ರಮವನ್ನು ರಾಷ್ಟ್ರ ರಾಜಕಾರಣದ ದೃಷ್ಠಿಯಿಂದಲೇ ನೋಡಿರುವ ಅದು 'ಮಹಾಮೈತ್ರಿಗೆ ಓಂಕಾರ' ಎಂಬ ತಲೆ ಬರಹ ನೀಡಿದೆ. 6ನೇ ಪುಟದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪರಿಚಯ ನೀಡಿದೆ. ಸಿದ್ದರಾಮಯ್ಯ ಕುರಿತ 'ನಗುವಾಗ ಎಲ್ಲರೂ ಅಳುವಾಗ ಯಾರೂ ಇಲ್ಲ' ತಲೆ ಬರಹದ ವರದಿ ಸಾಂದರ್ಭಿಕವಾಗಿದೆ. 7ನೇ ಪುಟದಲ್ಲಿ ಸಹ ಕಾರ್ಯಕ್ರಮದ ವರದಿಗಳು ಚಿತ್ರಗಳು ಇವೆ.
'ವರುಣ ರಂಜಿತ ಕುಮಾರ ಪ್ರಮಾಣ' ಉದಯವಾಣಿ
ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮುಂಚೆ ಬಿದ್ದ ಮಳೆ ಹಾಗೂ ಕಾರ್ಯಕ್ರಮದ ವೈಭವವನ್ನು ತಳುಕು ಹಾಕಿ 'ವರುಣ ರಂಜಿತ ಕುಮಾರ ಪ್ರಮಾಣ' ಎಂದು ಉದಯವಾಣಿ ತಲೆ ಬರಹ ನೀಡಿದೆ. ಮಹಾ ಮೈತ್ರಿಯ ಆರಂಭ, ಪರಮೇಶ್ವರ್ ಅವರ ಸಾಕಾರವಾಯಿತು, ಸಾಲಮನ್ನಾ, ಎಂಬಿತ್ಯಾದಿ ಪ್ರಮುಖ ವಿಷಯಗಳನ್ನು ಮುನ್ನಲೆಯಲ್ಲಿಟ್ಟು ಕಾರ್ಯಕ್ರಮದ ವರದಿ ಸಂಯೋಜಿಸಿದೆ ಉದಯವಾಣಿ.
ಮೂರು ಸಾಲಿನ ತಲೆಬರಹ ನೀಡಿರುವ ವಿಶ್ವವಾಣಿ
ಮೂರು ಸಾಲಿನ ವಾಕ್ಯದಂತಾ ತಲೆ ಬರಹ ನೀಡಿದೆ ವಿಶ್ವವಾಣಿ ದಿನ ಪತ್ರಿಕೆ. 'ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಪ್ರಮಾಣ, ತೃತೀಯ ರಂಗ ಶಕ್ತಿ ಪ್ರದರ್ಶನ, ಕಾಂಗ್ರೆಸ್ ನಾಯಕರಿಗೆ ಸೋನಿಯಾ ಪ್ರವಚನ, ಅನುಷ್ಠಾನಕ್ಕೆ ಬರುತ್ತಂತೆ ಸಾಲಮನ್ನಾ, ಬಿಜೆಪಿಯಿಂದ ಕರಾಳ ದಿನಾಚರಣೆ' ಇದು ವಿಶ್ವವಾಣಿ ನೀಡಿರುವ ಹೆಡ್ಲೈನ್!. ಮೊದಲ ಮೂರು ಪುಟಗಳಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಹಾಗೂ ಅದರ ಸಂಬಂಧಿತ ಸುದ್ದಿಗಳನ್ನು ಆಕರ್ಷಕ ಚಿತ್ರ ಸಮೇತ ಪ್ರಕಟಿಸಿದೆ ವಿಶ್ವವಾಣಿ.
'ರಾಜ್ಯದಲ್ಲಿನ್ನು ಕುಮಾರಪರ್ವ' ಹೊಸ ದಿಗಂತ
'ರಾಜ್ಯದಲ್ಲಿನ್ನು ಕುಮಾರಪರ್ವ' ಎಂಬ ಸರಳ ತಲೆ ಬರಹದಡಿ ಹೊಸ ದಿಗಂತ ಪತ್ರಿಕೆಯು ಪ್ರಮಾಣ ವಚನ ಕಾರ್ಯಕ್ರಮ ವರದಿ ಮಾಡಿದೆ. ಜನರ ಹೆಸರಲ್ಲಿ ಪ್ರಮಾಣ ವಚನ, ಶಕ್ತಿ ಪ್ರದರ್ಶನ, ಸಾಲಮನ್ನಾದ ನೀಲ ನಕ್ಷೆ ಸಿದ್ದ ಹೀಗೆ ಹಲವು ಬಾಕ್ಸ್ ಗಳ ಮೂಲಕ ಸುದ್ದಿಯನ್ನು ಹೊಸ ದಿಗಂತ ನೀಡಿದೆ.
ತೃತೀಯರಂಗ ಪ್ರಮಾಣ ವಚನ-ಕನ್ನಡ ಪ್ರಭ
ಕುಮಾರಸ್ವಾಮಿ ಅವರ ಪ್ರಮಾಣ ವಚನ ಕಾರ್ಯಕ್ರಮ ನೆವವಷ್ಟೆ ಅಲ್ಲಿ ನಡೆದದ್ದು ತೃತೀಯ ರಂಗದ ಪ್ರಮಾಣ ವಚನ ಎಂಬ ಅರ್ಥ ನೀಡುತ್ತಿದೆ ಕನ್ನಡ ಪ್ರಭ ಪತ್ರಿಕೆ ನೀಡುತ್ತಿರುವ 'ತೃತೀಯರಂಗ ಪ್ರಮಾಣವಚನ' ತಲೆ ಬರಹ. ಬಹುತೇಕ ಪತ್ರಿಕೆಗಳಂತೆ ಸರ್ವ ನಾಯಕರ ಒಗ್ಗಟ್ಟಿನ ಚಿತ್ರವನ್ನೇ ಕನ್ನಡ ಪ್ರಭ ಪ್ರಥಮ ಆದ್ಯತೆಯಾಗಿ ಪ್ರಕಟಿಸಿದೆ. ಜೊತೆಗೆ ಕುಮಾರಸ್ವಾಮಿ ಸುದ್ದಿಗೋಷ್ಠಿ ವಿವರಗಳನ್ನು ಬಾಕ್ಸ್ ಆಗಿ ಪ್ರಕಟಿಸಿದೆ.