ಸೋಲಿನ ಭಯದಿಂದ ಕೃಷಿ ಮಸೂದೆಗಳ ವಾಪಸ್: ಕೆಪಿಸಿಸಿ ವಕ್ತಾರ
ಬೆಂಗಳೂರು, ನವೆಂಬರ್ 19: ''ಮುಂಬರುವ ಉತ್ತರ ಪ್ರದೇಶ ಹಾಗೂ ಪಂಜಾಬ್ ಚುನಾವಣೆಗಳಲ್ಲಿ ಸೋಲಿನ ಭಯದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆಯುವ ನಿರ್ಧಾರ ಮಾಡಿದ್ದಾರೆ. ಈ ಮೂಲಕ ರೈತರ ಅಭಿಪ್ರಾಯಕ್ಕಿಂತಲೂ ಚುನಾವಣೆಯೇ ಮುಖ್ಯ ಎನ್ನುವುದನ್ನು ಪರೋಕ್ಷವಾಗಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ,'' ಎಂದು ಕೆಪಿಸಿಸಿ ವಕ್ತಾರ ಕೆಂಗಲ್ ಶ್ರೀಪಾದ ರೇಣು ಹೇಳಿದ್ದಾರೆ.
''ಉಪಚುನಾವಣೆಗಳಲ್ಲಿ ಸೋತಿದ್ದಕ್ಕೆ ಬುದ್ದಿ ಕಲಿತು ಡಿಸೇಲ್ ಮತ್ತು ಪೆಟ್ರೋಲ್ ದರಗಳನ್ನು ಬಿಜೆಪಿ ಸರಕಾರ ಇಳಿಸಿತ್ತು. ಕಳೆದೊಂದು ವರ್ಷದಿಂದ ಸತತವಾಗಿ ಪ್ರತಿಭಟನೆ ಮಾಡುತ್ತಿರುವ ರೈತರ ಆಕ್ರೋಶ ಮುಂದಿನ ಉತ್ತರಪ್ರದೇಶ ಹಾಗೂ ಪಂಜಾಬ್ ಚುನಾವಣೆಯಲ್ಲಿ ವ್ಯಕ್ತವಾಗುತ್ತದೆ ಎನ್ನುವ ಹಿನ್ನಲೆಯಲ್ಲಿ ಕೃಷಿ ಮಸೂದೆಗಳನ್ನು ವಾಪಸ್ಸು ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಕೊನೆಗೂ ರೈತರ ಹೋರಾಟಕ್ಕೆ ನ್ಯಾಯ ದೊರಕಿದಂತಾಗಿದೆ. ಅಲ್ಲದೆ, ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದರಿಂದ ಮಾತ್ರ ಅಚ್ಚೇದಿನ್ ಸಾಧ್ಯ ಎನ್ನುವುದು ಮತ್ತೊಮ್ಮೊ ಸಾಬೀತಾಗಿದೆ,'' ಎಂದು ಹೇಳಿದರು.
'ಚುನಾವಣೆ ಹಿನ್ನೆಲೆ ಕೃಷಿ ಕಾಯ್ದೆ ವಾಪಾಸ್ ಪಡೆದ ಪ್ರಧಾನಿ ಮೋದಿ'
''ಹಿಂದುತ್ವವಾದಿಗಳು ಹೂಡಿಕೆ ಆರ್ಥಿಕತೆಯನ್ನು ಪ್ರತಿಪಾದಿಸುತ್ತಾರೆ. ಇದು ಜನರನ್ನು ವಿಭಜಿಸುತ್ತದೆಯೇ ಹೊರತು ಒಗ್ಗೂಡಿಸುವ ಆದರ್ಶಗಳನ್ನು ಹೊಂದಿಲ್ಲ. ದೇಶದ ಜನರು ಒಳ್ಳೆಯ ದಿನಗಳನ್ನು ಕಾಣಬೇಕಾದಲ್ಲಿ ಬಿಜೆಪಿಯನ್ನು ಸೋಲಿಸುವುದು ಮತದಾರರ ಕರ್ತವ್ಯವಾಗಿದೆ. ಅಲ್ಲದೆ, ಮುಂಬರುವ ಉತ್ತರಪ್ರದೇಶ ಹಾಗೂ ಇನ್ನಿತರ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಜನರು ಸೋಲಿಸಿದಲ್ಲಿ ದೇಶಾದ್ಯಂತ ಪೆಟ್ರೋಲ್ ಮತ್ತು ಡಿಸೇಲ್ ಇಂಧನಗಳ ಮೇಲಿನ ತೆರಿಗೆಯನ್ನ ಕೇಂದ್ರ ಸರಕಾರ ಗಣನೀಯವಾಗಿ ಇಳಿಸುವ ಮನಸ್ಸು ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಲಿದೆ,'' ಎಂದು ಕೆಪಿಸಿಸಿ ವಕ್ತಾರರಾದ ಕೆಂಗಲ್ ಶ್ರೀಪಾದ ರೇಣು ತಿಳಿಸಿದ್ದಾರೆ.
ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ವಾಪಾಸ್ ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್ ಸೇರಿ ಐದು ರಾಜ್ಯಗಳಲ್ಲಿ ಚುನಾವಣೆಯು ನಡೆಯಲಿರುವ ನಡುವೆ ಪ್ರಧಾನಿ ಈ ಘೋಷಣೆಯನ್ನು ಮಾಡಿರುವುದನ್ನು ವಿರೋಧ ಪಕ್ಷಗಳು ಲೇವಡಿ ಮಾಡಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ನ ಪ್ರಚಾರ ಕಾರ್ಯವನ್ನು ನಿರ್ವಹಣೆ ಮಾಡುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, "ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಿನ ವರ್ಷ ಚುನಾವಣೆ ಇದೆ ಎಂಬ ಕಾರಣದಿಂದಾಗಿ ಈ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ," ಎಂದು ಆರೋಪ ಮಾಡಿದ್ದಾರೆ.
Recommended Video
ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಕೃಷಿ ವಲಯದ ಹಿತದೃಷ್ಟಿಯಿಂದ ರೈತರ ಕಲ್ಯಾಣಕ್ಕಾಗಿ, ವಿಶೇಷವಾಗಿ ಸಣ್ಣ ರೈತರ ಕಲ್ಯಾಣಕ್ಕಾಗಿ, ಗ್ರಾಮೀಣ-ಬಡವರ ಉಜ್ವಲ ಭವಿಷ್ಯಕ್ಕಾಗಿ, ಸಂಪೂರ್ಣ ಪ್ರಾಮಾಣಿಕತೆ, ಸ್ಪಷ್ಟ ಆತ್ಮಸಾಕ್ಷಿ ಮತ್ತು ರೈತರ ಬಗ್ಗೆ ಸಮರ್ಪಣೆ ಭಾವದೊಂದಿಗೆ ಸರಕಾರ ಈ ಕಾನೂನುಗಳನ್ನು ತಂದಿದೆ ಎಂದು ಪ್ರಧಾನಿ ಹೇಳಿದರು. "ಆದರೆ, ಇಂತಹ ಪವಿತ್ರವಾದ, ಸಂಪೂರ್ಣ ನಿಷ್ಕಲ್ಮಶವಾದ, ರೈತರ ಆಸಕ್ತಿಯ ವಿಷಯವನ್ನು ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ನಾವು ಕೆಲವು ರೈತರಿಗೆ ಅರ್ಥಮಾಡಿಸಲು ಸಾಧ್ಯವಾಗಲಿಲ್ಲ. ಕೃಷಿ ಅರ್ಥಶಾಸ್ತ್ರಜ್ಞರು, ವಿಜ್ಞಾನಿಗಳು, ಪ್ರಗತಿಪರ ರೈತರು ಕೂಡ ಕೃಷಿ ಕಾನೂನುಗಳ ಮಹತ್ವವನ್ನು ಅವರಿಗೆ ಅರ್ಥಮಾಡಿಸಲು ಗರಿಷ್ಠ ಪ್ರಯತ್ನಗಳನ್ನು ಮಾಡಿದರು", ಎಂದರು. "ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ಇಡೀ ದೇಶದ ಜನತೆಗೆ ಹೇಳಲು ನಾನು ಬಂದಿದ್ದೇನೆ. ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಸಂಸತ್ ಅಧಿವೇಶನದಲ್ಲಿ, ನಾವು ಈ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸಾಂವಿಧಾನಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ,ʼʼ ಎಂದು ಹೇಳಿದರು.