ಶಾಲೆಗಳ ಆರಂಭ; ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆಗಳು
ಬೆಂಗಳೂರು, ಜೂನ್ 04 : ಕರ್ನಾಟಕ ಸರ್ಕಾರ ಜುಲೈ ತಿಂಗಳಿನಲ್ಲಿ ಶಾಲೆಗಳನ್ನು ಪುನರಾರಂಭಿಸುವ ಪ್ರಸ್ತಾವವನ್ನು ಮುಂದಿಟ್ಟಿದೆ. ಪೋಷಕರು, ಶಿಕ್ಷಣ ತಜ್ಞರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಗುರುವಾರ ಪತ್ರಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ಶಾಲೆಗಳನ್ನು ತೆರೆಯುವ ವಿಚಾರದಲ್ಲಿ ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ. "ಸರ್ಕಾರ ಪೋಷಕರು ವಿರೋಧ ವ್ಯಕ್ತಿಪಡಿಸುತ್ತಿರುವುದನ್ನು ಗಮನಿಸಬೇಕು" ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಇಲಾಖೆ ಜುಲೈನಲ್ಲಿ ಶಾಲಾ-ಕಾಲೇಜು ತೆರೆಯಬಹುದು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ. ಅದಕ್ಕೂ ಮೊದಲು ಪೋಷಕರ ಜೊತೆ ಸಭೆ ನಡೆಸಬೇಕು, ಅವರ ಅಭಿಪ್ರಾಯವನ್ನು ಪರಿಗಣಿಸಬೇಕು ಎಂದು ಹೇಳಿದೆ.
ಕರ್ನಾಟಕದ ಶಿಕ್ಷಣ ಇಲಾಖೆ ಜೂನ್ 10 ರಿಂದ 12ರ ತನಕ ಪೋಷಕರ ಜೊತೆ ಸಭೆಗಳನ್ನು ನಡೆಸಲಿದೆ. ಎಸ್ಡಿಎಂಸಿ ಸದಸ್ಯರ ಜೊತೆಗೂ ಸಭೆ ನಡೆಯಲಿದ್ದು, ಎಲ್ಲರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.
|
ಅವಸರದ ತೀರ್ಮಾನ ಬೇಡ
"ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣ ಮೀರಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ಇನ್ನೆರಡು ತಿಂಗಳು ಶಾಲೆಗಳನ್ನು ಪ್ರಾರಂಭಿಸುವುದು ಸೂಕ್ತ ಅಲ್ಲ. ಅವಸರದ ತೀರ್ಮಾನ ಮಾಡಬಾರದು" ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಪೋಷಕರ ಆತಂಕ
"ಶಾಲೆಗಳನ್ನು ಜುಲೈ ತಿಂಗಳಲ್ಲಿ ಪುನರಾರಂಭಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಇದರಿಂದ ಆತಂಕಕ್ಕೀಡಾಗಿರುವ ಪೋಷಕರು ಪ್ರಸ್ತಾವವನ್ನು ವಿರೋಧಿಸುತ್ತಿರುವುದನ್ನು ಗಮನಿಸಬೇಕು" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಶಿಕ್ಷಣ ಸಚಿವ ಸುರೇಶ್ ಕುಮಾರ್, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಟ್ಯಾಗ್ ಮಾಡಿದ್ದಾರೆ.
|
ಬೇರೆ ದೇಶಗಳ ಪರಿಸ್ಥಿತಿ
"ಬ್ರಿಟನ್, ಫ್ರಾನ್ಸ್, ಇಟಲಿ ಸೇರಿದಂತೆ ಬೇರೆ ದೇಶಗಳಲ್ಲಿ ಶಾಲೆಗಳನ್ನು ಪುನರಾರಂಭಿಸಿದ ನಂತರ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗಲಿರುವುದು ವರದಿಯಾಗುತ್ತಿವೆ. ಎರಡು ತಿಂಗಳ ನಂತರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಶಾಲೆಗಳ ಪುನರಾರಂಭದ ಬಗ್ಗೆ ಯೋಚನೆ ಮಾಡುವುದು ಸೂಕ್ತ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಆನ್ಲೈನ್ ಅಭಿಯಾನ
ಸದ್ಯ ಶಾಲೆ ಆರಂಭಿಸುವುದು ಬೇಡ ಎಂದು ಆನ್ಲೈನ್ನಲ್ಲಿ ಅಭಿಯಾನವೂ ಆರಂಭವಾಗಿದೆ. 5 ಲಕ್ಷ ಜನರ ಸಹಿ ಸಂಗ್ರಹ ಮಾಡಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಕಳಿಸಲು ಆಲೋಚನೆ ನಡೆದಿದೆ. ಈ ಅಭಿಯಾನಕ್ಕೆ ಪೋಷಕರು ಸಹ ಬೆಂಬಲ ನೀಡುತ್ತಿದ್ದಾರೆ.












Click it and Unblock the Notifications