ಇಂದಿರಾ ಕ್ಯಾಂಟೀನ್ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಆದರೆಷ್ಟು, ಬಿಟ್ಟರೆಷ್ಟು: ಯಾಕೀ ರಾಜಕೀಯ?
ದೇಶದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಖ್ಯಾತನಾಮರ ಹೆಸರು ಇಡುವುದು ಹಿಂದಿನಿಂದಲೂ ನಡೆದುಕೊಂಡ ಪದ್ದತಿ. ಹಿಂದೆ ಕಾಂಗ್ರೆಸ್ ತಮ್ಮ ದಶಕಗಳ ಅಧಿಕಾರದ ಅವಧಿಯಲ್ಲಿ ಮಾಡಿದ್ದನ್ನು, ಈಗ ಬಿಜೆಪಿ ಮಾಡಲು ಹೊರಟಿದೆ. ಹಾಗಾಗಿ, ಸ್ವಾಭಾವಿಕವಾಗಿ ಕಾಂಗ್ರೆಸ್ ಇದನ್ನು ವಿರೋಧಿಸಲು ಹೊರಟಿದೆ.
ಕ್ರೀಡಾ ಲೋಕಕ್ಕೆ ಕೊಡಮಾಡಲಾಗುವ ಅತ್ಯುನ್ನುತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ, ಮೋದಿ ಸರಕಾರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರು ನಾಮಕರಣ ಮಾಡಿದೆ. ಪುರುಷರ ಒಲಂಪಿಕ್ಸ್ನಲ್ಲಿ ಭಾರತ ಕಂಚಿನ ಪದಕ ಗೆದ್ದ ಬೆನ್ನಲ್ಲೇ, ಕೇಂದ್ರ ಸರಕಾರ ಈ ಬದಲಾವಣೆ ಮಾಡಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಡಿಕೆಗೆ ಕಂಗಾಲಾದ ಬಿಜೆಪಿ ನಾಯಕರು!
ಧ್ಯಾನ್ ಚಂದ್ ಅವರನ್ನು ಹೆಸರನ್ನು ಇಟ್ಟಿದ್ದರಿಂದ, ಕಾಂಗ್ರೆಸ್ ಇದಕ್ಕೆ ನೇರವಾಗಿ ವಿರೋಧ ವ್ಯಕ್ತ ಪಡಿಸಲು ಸಾಧ್ಯವಾಗಿಲ್ಲ. ಅದರ ಬದಲು, ಗುಜರಾತಿನ ಸ್ಟೇಡಿಯಂಗೆ ನರೇಂದ್ರ ಮೋದಿ ಹೆಸರು ಇಟ್ಟಿದ್ದು ಯಾಕೆ ಎನ್ನುವ ಪ್ರಶ್ನೆಯನ್ನು ಮುನ್ನಲೆಗೆ ತಂದಿದೆ.
ಇಂದಿರಾ ಕ್ಯಾಂಟೀನ್ಗೆ ಹೊಸ ಹೆಸರು ಸೂಚಿಸಿದ ಸಿ.ಟಿ. ರವಿ
ಇದಾದ ಬೆನ್ನಲ್ಲೇ, ಕರ್ನಾಟಕದ ಜನಪ್ರಿಯ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟೀನ್ ಹೆಸರಿಗೆ ಬೇರೆ ಹೆಸರು ಇಡುವ ಪ್ರಸ್ತಾವನೆ ಬೊಮ್ಮಾಯಿ ಸರಕಾರದ ಮುಂದೆ ಬಂದಿದೆ. ಸರಕಾರ ಯಾವುದೇ ಇರಲಿ, ಯೋಜನೆಯ ಹೆಸರಿನಲ್ಲಿ ಅದರ ಮೂಲ ಉದ್ದೇಶ ತಪ್ಪದಿರಲಿ ಎನ್ನುವುದಷ್ಟೇ ಜನರಿಗೆ ಮುಖ್ಯ. ಮುಂದೆ ಓದಿ...
ಜನಪ್ರಿಯ ಯೋಜನೆಯನ್ನು ಸಿದ್ದರಾಮಯ್ಯನವರ ಸರಕಾರ ಜಾರಿಗೆ ತಂದಿತ್ತು
ಬಡವರಿಗೆ, ಕೂಲಿ ಕಾರ್ಮಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ, ತಿಂಡಿ ನೀಡುವ ಜನಪ್ರಿಯ ಯೋಜನೆಯನ್ನು ಸಿದ್ದರಾಮಯ್ಯನವರ ಸರಕಾರ ಜಾರಿಗೆ ತಂದಿತ್ತು. ಮತ್ತು, ಇದು ವ್ಯಾಪಕ ಪ್ರಶಂಸೆಗೂ ಒಳಗಾಗಿತ್ತು. ಆದರೆ, ಕೊರೊನಾದ ಹಾವಳಿಯಿಂದಾಗಿ ಯಡಿಯೂರಪ್ಪನವರ ಸರಕಾರ ಇದನ್ನು ಮುಚ್ಚುವ ಪ್ರಯತ್ನಕ್ಕೆ ಮುಂದಾದಾಗ ಜನಾಕ್ರೋಶವೂ ವ್ಯಕ್ತವಾಯಿತು. ಇದರಿಂದಾಗಿ, ಇಂದಿರಾ ಕ್ಯಾಂಟೀನ್ ಅನ್ನು ಮುಂದುವರಿಸುವ ಅನಿವಾರ್ಯತೆ ಎದುರಾಯಿತು. ಈಗ, ಇಂದಿರಾ ಕ್ಯಾಂಟೀನ್ ಹೆಸರು ಬದಲಾಗುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.
ಯಾವುದೇ ವರೈಟಿಯ ತಿಂಡಿಯಿರಲಿ ಅದಕ್ಕೆ ಪ್ಲೇಟಿಗೆ ಹತ್ತು ರೂಪಾಯಿ
ಇಂದಿರಾ ಕ್ಯಾಂಟೀನಲ್ಲಿ ಯಾವುದೇ ವರೈಟಿಯ ತಿಂಡಿಯಿರಲಿ ಅದಕ್ಕೆ ಪ್ಲೇಟಿಗೆ ಐದು ರೂಪಾಯಿ ಮತ್ತು ಊಟಕ್ಕೆ ಹತ್ತು ರೂಪಾಯಿಗಳನ್ನು ಯಡಿಯೂರಪ್ಪ ಸರಕಾರ ನಿಗದಿ ಪಡಿಸಿತ್ತು. ಬರಬರುತ್ತಾ ಊಟದ ಕ್ವಾಲಿಟಿ ಬಗ್ಗೆ ಜನರಿಂದ ಅಸಮಾಧಾನ ವ್ಯಕ್ತವಾಗಿತ್ತು. ಈಗ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಇಂದಿರಾ ಕ್ಯಾಂಟೀನಿಗೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
|
ಅನ್ನಪೂರ್ಣೇಶ್ವರಿ ಹೆಸರು ಇಡಬೇಕು ಎನ್ನುವ ರವಿಯವರ ಒತ್ತಾಯ
ಈ ಜನಪ್ರಿಯ ಯೋಜನೆಗೆ ಅನ್ನಪೂರ್ಣೇಶ್ವರಿ ಹೆಸರು ಇಡಬೇಕು ಎನ್ನುವ ರವಿಯವರ ಒತ್ತಾಯದ ಹಿಂದೆ ಅವರು ಪ್ರತಿನಿಧಿಸುವ ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ಹೆಸರು ಇಡುವ ಸದುದ್ದೇಶವಾ? ಅಥವಾ, ಸಾರ್ವಜನಿಕರಲ್ಲಿ ಒಳ್ಳೆಯ ಯೋಜನೆಯೆಂದು ಹೆಸರು ಪಡೆದಿರುವ ಈ ಯೋಜನೆಗೆ ಇಂದಿರಾ ಗಾಂಧಿ ಹೆಸರಿಟ್ಟಿರುವುದಕ್ಕೆ ಅಪಸ್ವರವೇ ಎನ್ನುವ ಪ್ರಶ್ನೆ ಎದುರಾದಾಗ, ಉತ್ತರ ಸ್ವಾಭಾವಿಕವಾಗಿ ರಾಜಕೀಯ ಎನ್ನುವುದು ಸ್ಪಷ್ಟ.
Recommended Video
ಅನ್ನಪೂರ್ಣೇಶ್ವರಿಗೆ ಅವಮಾನ ಮಾಡಬೇಡಿ ಎನ್ನುವುದಷ್ಟೇ ಕಳಕಳಿ
ಈ ವಿಚಾರದಲ್ಲಿ, ಆಡಳಿತ ಮತ್ತು ವಿರೋಧ ಪಕ್ಷಗಳು ಯಾವುದೇ ಮೇಲಾಟ ನಡೆಸಲಿ, ಜನರಿಗೆ ಇದೆಲ್ಲಾ ಬೇಕಿದೆಯಾ? ಅನ್ನಪೂರ್ಣೇಶ್ವರಿ ಹೆಸರು ಇಟ್ಟರೆ, ಈಗಿನ ಬೆಲೆಯನ್ನು ಕಮ್ಮಿ ಮಾಡುತ್ತಾರಾ, ಅಥವಾ ಫ್ರೀ ಕೊಡುತ್ತಾರಾ ಎನ್ನುವುದಷ್ಟೇ ಸಾರ್ವಜನಿಕರಿಗೆ ಮುಖ್ಯ. ನಿಮ್ಮಿಬ್ಬರ ನಡುವಿನ ಕಿತ್ತಾಟ/ಪ್ರತಿಷ್ಠೆಗೆ ಅನ್ನ ನೀಡುವ ಯೋಜನೆಯನ್ನು ರದ್ದು ಪಡಿಸಿ, ಅನ್ನಪೂರ್ಣೇಶ್ವರಿಗೆ ಅವಮಾನ ಮಾಡಬೇಡಿ ಎನ್ನುವುದಷ್ಟೇ ಕಳಕಳಿ.