ಲೋಕಾಯುಕ್ತರ ಪದಚ್ಯುತಿ ಕಾನೂನು ಪ್ರಕ್ರಿಯೆಗಳೇನು?
ಬೆಂಗಳೂರು, ಜು. 03 : ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರನ್ನು ಪದಚ್ಯುತಿಗೊಳಿಸಲು ಕರ್ನಾಟಕ ಪ್ರತಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಪಟ್ಟು ಹಿಡಿದಿವೆ. ಈ ಕುರಿತು ಶಾಸಕರ ಸಹಿ ಇರುವ ಮನವಿ ಪತ್ರವನ್ನು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ನೀಡಲಾಗಿದೆ. ಹಾಗಾದರೆ ಕಾನೂನು ಪ್ರಕ್ರಿಯೆಗಳೇನು? ಎಂಬ ಮಾಹಿತಿ ಇಲ್ಲಿದೆ.
ಕಾನೂನು ತಜ್ಞರು ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿಯಂತೆ ಕಾನೂನಿನಲ್ಲಿ ಲೋಕಾಯುಕ್ತ ಅಥವ ಉಪ ಲೋಕಾಯುಕ್ತರನ್ನು ಪದಚ್ಯುತಿಗೊಳಿಸಲು ಅವಕಾಶವಿದೆ. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಸೇರಿ 33 ಪರಿಷತ್ ಸದಸ್ಯರ ಸಹಿ ಇರುವ ಮನವಿ ಪತ್ರವನ್ನು ಸಲ್ಲಿಸಿವೆ. ಕಾನೂನಿನ ಅನ್ವಯ ಲೋಕಾಯುಕ್ತ ಪದಚ್ಯುತಿಗೆ ಇದು ಸಾಕಾಗುತ್ತದೆ. [ಲೋಕಾಯುಕ್ತರ ಪದಚ್ಯುತಿಗೆ ಶಾಸಕರ ಸಹಿ ಸಂಗ್ರಹ]

ಕಾನೂನು ಪ್ರಕ್ರಿಯೆಗಳೇನು : ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ನಿರ್ಣವನ್ನು ಮಂಡಿಸಬೇಕಾದರೆ 50 ಶಾಸಕರು ಅಥವ 33 ವಿಧಾನಪರಿಷತ್ ಸದಸ್ಯರ ಸಹಿ ಇರುವ ಪತ್ರ ಬೇಕು. ಸದ್ಯ, 33 ಸದಸ್ಯರ ಸಹಿ ಇರುವ ಪತ್ರ ಡಿ.ಎಚ್.ಶಂಕರಮೂರ್ತಿ ಅವರ ಕೈಸೇರಿದೆ. [ಕರ್ನಾಟಕ ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಇನ್ನೂ ಹಲವು ಶಾಸಕರ ಸಹಿಯನ್ನು ಸಂಗ್ರಹಿಸಿ ಕರ್ನಾಟಕ ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ. ಪ್ರತಿಪಕ್ಷಗಳು ಕನಿಷ್ಠ 60 ಶಾಸಕರ ಸಹಿಯನ್ನು ಸಂಗ್ರಹಿಸಲು ಮುಂದಾಗಿವೆ.
ಯಾವ ಕಾಯ್ದೆ ಅನ್ವಯ ಪದಚ್ಯುತಿ : ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್ 6ಪ್ರಕಾರ ಲೋಕಾಯುಕ್ತರನ್ನು ದುರ್ವರ್ತನೆ ಮತ್ತು ಅಸಮರ್ಥತೆ ಆಧಾರದ ಮೇಲೆ ಪದಚ್ಯುತಗೊಳಿಸಲು ಅವಕಾಶವಿದೆ. ಸದ್ಯ, ಪ್ರತಿಪಕ್ಷಗಳು ಇದರ ಮೂಲಕವೇ ಲೋಕಾಯುಕ್ತರ ರಾಜೀನಾಮೆಗೆ ಆಗ್ರಹಿಸುತ್ತಿವೆ.
ಶಾಸಕರ ಮನವಿ ಪತ್ರ ಪಡೆದ ಬಳಿಕ ಸ್ಪೀಕರ್ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿರುವ ಮೂವರು ಸದಸ್ಯರ ಸಮಿತಿ ರಚನೆ ಮಾಡುತ್ತಾರೆ. ಲೋಕಾಯುಕ್ತರ ಮೇಲಿನ ಆರೋಪಗಳ ಬಗ್ಗೆ ಈ ಸಮಿತಿ ತನಿಖೆ ನಡೆಸಿ ವರದಿ ನೀಡುತ್ತದೆ. ಇದಕ್ಕೆ ಸಾಕಷ್ಟು ಕಾಲಾವಕಾಶವೂ ಬೇಕಾಗುತ್ತದೆ.
ಸಮಿತಿಯು ಆರೋಪಗಳು ಸುಳ್ಳು ಎಂದು ವರದಿ ಕೊಟ್ಟರೆ ಪ್ರಕರಣ ಅಂತ್ಯಗೊಳ್ಳುತ್ತದೆ. ಆರೋಪಗಳು ಸಾಬೀತಾದರೆ ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿ ಈ ವಿಷಯದ ಬಗ್ಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮತದಾನದ ನಂತರ ಈ ಕುರಿತ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುತ್ತದೆ. ರಾಜ್ಯಪಾಲರು ಪದಚ್ಯುತಿಯ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.
ಪ್ರತಿಪಕ್ಷಗಳ ಒತ್ತಾಯವೇನು? : ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನ್ಯಾ.ಭಾಸ್ಕರರಾವ್ ಅವರ ಪುತ್ರ ಅಶ್ವಿನ್ರಾವ್ ವಿರುದ್ಧ ಭ್ರಷ್ಟಾಚಾರದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ, ಎಫ್ಐಆರ್ ದಾಖಲಾಗಿದೆ. ನೈತಿಕ ಹೊಣೆ ಹೊತ್ತು ಭಾಸ್ಕರರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತಿವೆ.












Click it and Unblock the Notifications