ಹುಷಾರ್: ಕರ್ನಾಟಕದಲ್ಲಿ ಕೊರೊನಾ ಮೃತರ ಹೆಣ ನೀಡಲು ಹಣ ಕೇಳುವಂತಿಲ್ಲ!
ಬೆಂಗಳೂರು, ಮೇ 24: ಕೊರೊನಾವೈರಸ್ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಆಸ್ಪತ್ರೆ ಬಿಲ್ ಪಾವತಿ ಮಾಡುವಂತೆ ಒತ್ತಡ ಹೇರುವಂತಿಲ್ಲ ಎಂದು ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
Recommended Video
ಕರ್ನಾಟಕದಲ್ಲಿ ಕೊವಿಡ್-19 ಸೋಂಕಿನಿಂದ ಮನೆಯ ಸದಸ್ಯನನ್ನು ಕಳೆದುಕೊಂಡ ನೋವಿನ ನಡುವೆ ಸಂಬಂಧಿಕರು ಕಣ್ಣೀರು ಹಾಕುತ್ತಿದ್ದರೆ ಮಾನವೀಯತೆಯನ್ನೇ ಮರೆತ ಕೆಲವು ಆಸ್ಪತ್ರೆಗಳು ಬಾಕಿ ಬಿಲ್ ಪಾವತಿಸಿದರೆ ಮಾತ್ರ ಮೃತದೇಹ ನೀಡುವುದಾಗಿ ಷರತ್ತು ವಿಧಿಸಿರುವ ಪ್ರಕರಣಗಳು ವರದಿಯಾಗಿದ್ದವು. ಇಂಥ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ.
ಕರ್ನಾಟಕದಲ್ಲಿ ಯಾರಿಗೂ ಸಿಗುವುದಿಲ್ಲ ಕೊವ್ಯಾಕ್ಸಿನ್ ಮೊದಲ ಡೋಸ್ ಲಸಿಕೆ
ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯು ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟರೆ ಆತನ ಮೃತದೇಹವನ್ನು ನೀಡಲು ಬಾಕಿ ಮೊತ್ತಕ್ಕಾಗಿ ಒತ್ತಡ ಹೇರುವಂತಿಲ್ಲ. ಹಣ ಪಾವತಿಸದಿದ್ದರೆ ಮೃತದೇಹ ನೀಡಲು ನಿರಾಕರಿಸುವಂತಿಲ್ಲ, ಬಾಕಿ ಹಣವನ್ನು ಕಡ್ಡಾಯವಾಗಿ ಪಾವತಿಸಲೇಬೇಕು ಎಂಬ ಬಗ್ಗೆ ಷರತ್ತು ವಿಧಿಸುವಂತಿಲ್ಲ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶಿಸಿದ್ದಾರೆ.
ಸರ್ಕಾರಿ ನಿಯಮ ಉಲ್ಲಂಘಿಸಿದರೆ ನೋಂದಣಿ ರದ್ದು
ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟವರ ಮೃತದೇಹವನ್ನು ಸಂಬಂಧಿಕರಿಗೆ ನೀಡಲು ನಿರಾಕರಿಸಿದರೆ ಅಥವಾ ಸರ್ಕಾರ ನಿಯಮವನ್ನು ಉಲ್ಲಂಘಿಸಿದರೆ ಕೆಪಿಎಂಇ ಕಾಯ್ದೆ ಅಡಿಯಲ್ಲಿ ಆಸ್ಪತ್ರೆಯ ನೋಂದಣಿಯನ್ನು ರದ್ದುಗೊಳಿಸಲಾಗುವುದು. ಇದರ ಜೊತೆ ಆಸ್ಪತ್ರೆ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ಈ ರೀತಿ ಪ್ರಕರಣಗಳ ಮಾಹಿತಿ ಮತ್ತು ತೆಗೆದುಕೊಂಡಿರುವ ಕ್ರಮವಗಳ ಕುರಿತು ಪ್ರತಿವಾರ ರಾಜ್ಯಮಟ್ಟಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ
ರಾಜ್ಯದಲ್ಲಿ ಒಂದೇ ದಿನ 25,311 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 57,333 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 529 ಜನರು ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 24,50,215 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 19,83,948 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ 25811 ಜನರು ಬಲಿಯಾಗಿದ್ದಾರೆ. ಉಳಿದಂತೆ 4,40,435 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾವಾರು ಕೊರೊನಾವೈರಸ್ ಸೋಂಕಿತ ಪ್ರಕರಣ
ರಾಜ್ಯದಲ್ಲಿ ಒಟ್ಟು 25,311 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 283, ಬಳ್ಳಾರಿ 807, ಬೆಳಗಾವಿ 747, ಬೆಂಗಳೂರು ಗ್ರಾಮಾಂತರ 385, ಬೆಂಗಳೂರು 5701, ಬೀದರ್ 58, ಚಾಮರಾಜನಗರ 439, ಚಿಕ್ಕಬಳ್ಳಾಪುರ 605, ಚಿಕ್ಕಮಗಳೂರು 633, ಚಿತ್ರದುರ್ಗ 541, ದಕ್ಷಿಣ ಕನ್ನಡ 721, ದಾವಣಗೆರೆ 633, ಧಾರವಾಡ 1058, ಗದಗ 277, ಹಾಸನ 1156, ಹಾವೇರಿ 312, ಕಲಬುರಗಿ 245, ಕೊಡಗು 251, ಕೋಲಾರ 580, ಕೊಪ್ಪಳ 337, ಮಂಡ್ಯ 888, ಮೈಸೂರು 2680, ರಾಯಚೂರು 753, ರಾಮನಗರ 285, ಶಿವಮೊಗ್ಗ 730, ತುಮಕೂರು 1662, ಉಡುಪಿ 927, ಉತ್ತರ ಕನ್ನಡ 1110, ವಿಜಯಪುರ 256, ಯಾದಗಿರಿ 251 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡವರೆಷ್ಟು?
ಕರ್ನಾಟಕದಲ್ಲಿ ಈವರೆಗೂ7,08,915 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 4,66,479 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 5,55,858 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 2,02,541 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. 45 ವರ್ಷಕ್ಕಿಂತ ಮೇಲ್ಪಟ್ಟ 80,59,190 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 19,59,977 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.